ಕೇಂದ್ರ ಸಂಪುಟ ಪುನಾರಚನೆ : ರಾಜ್ಯದ ಸಚಿವರು ಸುರಕ್ಷಿತ

ಕರ್ನಾಟಕದ ಸಚಿವರುಗಳಾದ ಕ್ಯಾಬಿನೆಟ್ ದರ್ಜೆಯ ಎಸ್.ಎಂ.ಕೃಷ್ಣ (ವಿದೇಶಾಂಗ ಖಾತೆ), ವೀರಪ್ಪ ಮೊಯ್ಲಿ (ಕಾನೂನು), ಮಲ್ಲಿಕಾರ್ಜುನ ಖರ್ಗೆ (ಕಾರ್ಮಿಕ) ಮತ್ತು ರೈಲ್ವೆ ಖಾತೆ ಸಹಾಯಕ ಸಚಿವ ಕೆಎಚ್ ಮುನಿಯಪ್ಪ ಅವರು ತಮ್ಮ ಖಾತೆಯಲ್ಲಿಯೇ ಮುಂದುವರಿಯಲಿದ್ದಾರೆ. ಮೊಯ್ಲಿ ಅವರನ್ನು ಸಚಿವ ಸ್ಥಾನದಿಂದ ತೆರವು ಮಾಡಿ ಪಕ್ಷದ ಸಂಘಟನೆ ಬಲಪಡಿಸಲು ನಿಯೋಜಿಸಲಾಗುವುದು ಎಂಬ ನಿರೀಕ್ಷೆ ಹುಸಿಯಾಗಿದೆ.
ಉಳಿದಂತೆ ಯಾವ ಸಚಿವರನ್ನೂ ಕೈಬಿಡದ ಮನಮೋಹನ ಸಿಂಗ್ ಖಾತೆಗಳನ್ನು ಮಾತ್ರ ಬೇರೆಬೇರೆಯವರಲ್ಲಿ ಹಂಚಿಕೆ ಮಾಡಿದ್ದಾರೆ. ಪ್ರಮುಖವಾಗಿ ಮುರಳಿ ದೇವ್ರಾ ಅವರನ್ನು ಪೆಟ್ರೋಲಿಯಂ ಖಾತೆಯಿಂದ ತೇಲಿಸಿ ಕಾರ್ಪೊರೇಟ್ ಖಾತೆ ನೀಡಿದ್ದಾರೆ. ಈ ಪ್ರಮುಖ ಖಾತೆ ಈಗ ಜೈಪಾಲ್ ರೆಡ್ಡಿ ಪಾಲಾಗಿದೆ. ಒಂದೇ ವರ್ಷದಲ್ಲಿ ಆರು ಬಾರಿ ತೈಲ ಬೆಲೆ ಏರಿಕೆಯಿಂದ ದೇವ್ರಾ ಸಿಂಗ್ ಸರಕಾರಕ್ಕೆ ಸಾಕಷ್ಟು ತಲೆನೋವು ತಂದಿದ್ದರು.
ಮಾಂಟೆಕ್ ಸಿಂಗ್ ಅಹ್ಲುವಾಲಿಯಾ ಮತ್ತು ಪರಿಸರ ಸಚಿವ ಜೈರಾಮ್ ಜೊತೆ ಮಾತು ಕೆಡಿಸಿಕೊಂಡಿದ್ದ ಕಮಲ್ ನಾಥ್ ರನ್ನು ಭೂಸಾರಿಗೆ ಖಾತೆಯಿಂದ ನಗರಾಭಿವೃದ್ಧಿ ಸಚಿವ ಸ್ಥಾನ ನೀಡಲಾಗಿದೆ. ಕಮಲ್ ಸ್ಥಾನಕ್ಕೆ ಸಿಪಿ ಜೋಶಿ ಬಂದಿದ್ದಾರೆ. ಜೋಶಿಗೆ ಸಹಾಯಕರಾಗಿ ಜಿತಿನ್ ಪ್ರಸಾದ್ ಬಂದಿದ್ದಾರೆ. 2ಜಿ ಹಗರಣದಲ್ಲಿ ಸಿಲುಕಿದ್ದ ಟೆಲಿಕಾಂ ಖಾತೆ ಸಚಿವ ಎ ರಾಜಾ ಅವರ ರಾಜೀನಾಮೆಯಿಂದ ತೆರವಾಗಿದ್ದ ಖಾತೆಯನ್ನು ಹೆಚ್ಚುವರಿಯಾಗಿ ನಿರ್ವಹಿಸುತ್ತಿದ್ದ ಕಪಿಲ್ ಸಿಬಲ್, ಆ ಖಾತೆ ಜೊತೆಗೆ ಮಾನವ ಸಂಪನ್ಮೂಲ ಖಾತೆಯಲ್ಲಿಯೇ ಮುಂದುವರಿಯಲಿದ್ದಾರೆ.
ಪ್ರಫುಲ್ ಪಟೇಲ್, ಸಲ್ಮಾನ್ ಖುರ್ಷೀದ್ ಮತ್ತು ಶ್ರೀಪ್ರಕಾಶ್ ಜೈಸ್ವಾಲ್ ಅವರನ್ನು ಸಂಪುಟ ದರ್ಜೆಗೆ ಮೇಲೇರಿಸಲಾಗಿದೆ. ಸಂಪುಟ ಸೇರಿಕೊಂಡಿರುವ ಹೊಸಬರು ಬೇನಿ ಪ್ರಸಾದ್ ವರ್ಮಾ ಮತ್ತು ಅಶ್ವಿನಿ ಕುಮಾರ್. ನಾಗರಿಕ ವಿಮಾನಯಾನ ಖಾತೆಯ ಸಹಾಯಕ ಸಚಿವರಾಗಿದ್ದ ಪ್ರಫುಲ್ ಈಗ ಭಾರೀ ಕೈಗಾರಿಕೆ ಖಾತೆ ಸಚಿವರಾಗಿದ್ದಾರೆ. ಜೈಸ್ವಾಲ್ ಗೆ ಕಲ್ಲಿದ್ದಿಲು ದಕ್ಕಿದರೆ, ಸಲ್ಮಾನ್ ಗೆ ನೀರಾವರಿ ಮತ್ತು ಹೆಚ್ಚುವರಿಯಾಗಿ ಅಲ್ಪಸಂಖ್ಯಾತ ವ್ಯವಹಾರ ಖಾತೆ ಲಭಿಸಿದೆ. [ಸಂಪುಟ ವಿಸ್ತರಣೆ]











Click it and Unblock the Notifications