ತಾಜಾತಾಜಾ ಬೀರ್ ಗೆ ರೇಣುಕಾಚಾರ್ಯ ಚಿಯರ್ಸ್

ಯೋಜನೆ ಅನುಷ್ಠಾನಗೊಂಡಾಗ ಗಿರಾಕಿಗಳಿಗೆ ಬೇಕೆಂದಾಗ, ಬೇಕೆಂದಲ್ಲಿ ತಾಜಾ ಬೀರ್ ಲಭ್ಯವಾಗುತ್ತದೆ ಎಂದು ಅಬಕಾರಿ ಸಚಿವ ರೇಣುಕಾಚಾರ್ಯ ಮಂಗಳವಾರ ಬೆಂಗಳೂರಿನಲ್ಲಿ ತಿಳಿಸಿದರು. ಅಬಕಾರಿ ಇಲಾಖೆಯ ಹಿರಿಯ ಅಧಿಕಾರಿಗಳೊಂದಿಗೆ ನಡೆಸಿದ ಸಮಾಲೋಚನಾ ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ರೇಣುಕಾ, ಇದೇ ಮೊದಲ ಬಾರಿಗೆ ಕರ್ನಾಟಕದಲ್ಲಿ ಇಂಥ ಆಲೋಚನೆ, ಯೋಜನೆ ಜಾರಿಯಾಗಲಿದೆ ಎಂದು ಹೆಮ್ಮೆಯಿಂದ ಹೇಳಿದರು.
ಅಕ್ರಮ ಮದ್ಯ ಉತ್ಪಾದನೆ ಮತ್ತು ಮಾರಾಟ ವ್ಯವಸ್ಥೆಯನ್ನು ಹತ್ತಿಕ್ಕುವುದಕ್ಕೆ ಈ ಯೋಜನೆ ನೆರವಾಗುತ್ತದೆ ಎಂದು ಅಭಿಪ್ರಾಯಪಟ್ಟ ಅವರು, ಮಹಾರಾಷ್ಟ್ರ ಮತ್ತು ಹರಿಯಾಣದ ನಂತರ ಇಂಥ ಯೋಜನೆಯನ್ನು ಕೈಗೆತ್ತಿಕೊಳ್ಳುತ್ತಿರುವ ಮೂರನೇ ರಾಜ್ಯ ಕರ್ನಾಟಕವಾಗಿದೆ ಎಂದು ರೇಣುಕಾಚಾರ್ಯ ನುಡಿದರು.
ತಾಜಾ ಬೀರು ಉತ್ಪಾದನೆ ಮಾಡಬಯಸುವ ಖಾಸಗಿಯವರಿಗೆ ಮೈಕ್ರೊ ಬ್ರೂವರಿ ಲೈಸನ್ಸ್ ಕೊಡಲಾಗುತ್ತದೆ. ಇದನ್ನು ಬಳಸಲು ಇಚ್ಛಿಸುವವರು ತೆರಿಗೆಯನ್ನು ಮುಂಗಡವಾಗಿ ಕೊಟ್ಟು ಪರವಾನಗಿ ಪಡೆಯಬಹುದು ಎಂದು ರೇಣುಕಾ ಹೇಳಿದರು. ಆರಂಭಿಕವಾಗಿ ಮೊದಲ ವರ್ಷದಲ್ಲಿ 30 ಅಥವಾ 40 ಮೈಕ್ರೊ ಬ್ರೂವರಿಗಳಿಗೆ ಪರವಾನಗಿ ನೀಡಲಾಗುತ್ತದೆ. ಈ ಯೋಜನೆಯಿಂದ ಬೊಕ್ಕಸಕ್ಕೆ ನಾಲ್ಕೈದು ಕೋಟಿ ರೂಪಾಯಿ ಹೆಚ್ಚು ಆದಾಯ ಬರುತ್ತದೆ ಎಂದೂ ಸಚಿವರು ತಿಳಿಸಿದರು.
* ಅಕ್ರಮ ಮದ್ಯ ಮಾರಾಟವನ್ನು ಈ ಯೋಜನೆಯಿಂದ ತಡೆಯಲು ಸಾಧ್ಯವೆ?
* ಬೆಂಗಳೂರು ಪೊಲೀಸ್ ಆಯುಕ್ತರು ಇದಕ್ಕೆ ಏನಂತಾರೆ?
* ಅಬಕಾರಿ ಸಚಿವರ ಈ ಹೊಸ ಯೋಜನೆಗೆ ನೀವು ಏನೆನ್ನುತ್ತೀರಿ? [ರೇಣುಕಾಚಾರ್ಯ]












Click it and Unblock the Notifications