ಬನಶಂಕರಿ ಜೆಡಿಎಸ್ ಕಾರ್ಪೋರೇಟರ್ ಕಗ್ಗೊಲೆ

ಅಲಿ ಜೊತೆಗಿದ್ದ ಖಲೀಂ ಮತ್ತು ಉಮರ್ ಎಂಬುವವರ ಮೇಲೆಯೂ ದಾಳಿ ನಡೆದಿದೆ. ಇದರಲ್ಲಿ ಉಮರ್ ಅವರ ಪರಿಸ್ಥಿತಿ ಚಿಂತಾಜನಕವಾಗಿದೆ. ತಿಲಕ್ ನಗರದಲ್ಲಿರುವ ಸಾಗರ್ ಅಪೋಲೋ ಆಸ್ಪತ್ರೆಯಲ್ಲಿ ಉಮರ್ ಅವರನ್ನು ದಾಖಲಿಸಲಾಗಿದೆ. ನಾಲ್ಕು ಮಂದಿ ಬೈಕ್ ನಲ್ಲಿ ಬಂದು ಇಬ್ಬರು ಅಲಿ ಮೇಲೆ ಟಾರ್ಗೆಟ್ ಮಾಡಿದ್ದರೆ, ಇನ್ನಿಬ್ಬರು ಖಲೀಂ ಮತ್ತು ಉಮರ್ ಅವರ ಮೇಲೆ ಮಾರಾಕಾಸ್ತ್ರಗಳಿಂದ ದಾಳಿ ನಡೆಸಿದ್ದಾರೆ. ಉಮರ್ ಅವರ ತಲೆಗೆ ಭಾರಿ ಪೆಟ್ಟು ಬಿದ್ದಿದೆ ಎಂದು ವೈದ್ಯರು ತಿಳಿಸಿದ್ದಾರೆ.
ಇತ್ತೀಚೆಗೆ ನಡೆದ ಬಿಬಿಎಂಪಿ ಚುನಾವಣೆಯಲ್ಲಿ ದಿವಾನ್ ಅಲಿ ಅವರು ಬನಶಂಕರಿ ವಾರ್ಡ್ ನಿಂದ ಜೆಡಿಎಸ್ ಪಕ್ಷದ ಮೂಲಕ ಆಯ್ಕೆಯಾಗಿದ್ದರು. ದಿವಾನ್ ಅಲಿ ಅವರ ಕೊಲೆಗೆ ಹಳೆ ವೈಷಮ್ಯವೇ ಕಾರಣ ಎನ್ನಲಾಗಿದೆ. ದಿವಾನ್ ಅಲಿ ಮಾಜಿ ರೌಡಿ ಎಂದು ಹೇಳಲಾಗಿದ್ದು, ಕಳೆದ 10 ವರ್ಷಗಳಿಂದ ಭೂಗತ ಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದ ಎಂದು ಪೊಲೀಸರು ಹೇಳಿದ್ದಾರೆ. ಅಲಿ ಮೇಲೆ ಒಟ್ಟು ಕೊಲೆ, ಕೊಲೆ ಯತ್ನ, ಗಾಂಜಾ ಮಾರಾಟ ಸೇರಿದಂತೆ 27 ಕೇಸ್ ಗಳು ಇದ್ದವು.
ಬಿದರಿ ಹೇಳಿಕೆ : ಘಟನೆಗೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿರುವ ಬೆಂಗಳೂರು ಪೊಲೀಸ್ ಆಯುಕ್ತ ಶಂಕರ ಬಿದರಿ, ದಿವಾನ್ ಅಲಿ ಗುಂಪು ಮತ್ತು ಸುಧಾಮನಗರದ ರೌಡಿ ಮಾಹಿಮ್ ನಡುವೆ ವೈಷಮ್ಯ ಇತ್ತು. ಈ ಬಗ್ಗೆ ನಮಗೆ ಮಾಹಿತಿ ಇತ್ತು. ದಿವಾನ್ ಅಲಿ ಬಿಬಿಎಂಪಿ ಸದಸ್ಯರಾದ ನಂತರವೂ ರೌಡಿ ಚಟುವಟಿಕೆಗಳನ್ನು ಮುಂದುವರಿಸಿದ್ದರು. ಇದರಿಂದ ಅಲಿ ಮತ್ತು ಮಾಹಿಮ್ ಹಗೆತನ ಮುಂದುವರಿದಿತ್ತು. ಹೀಗಾಗಿ ಕೆಲವೆ ದಿನಗಳಲ್ಲಿ ಈ ಇಬ್ಬರನ್ನು ಗೂಂಡಾ ಕಾಯ್ದೆಯಲ್ಲಿ ಬಂಧಿಸಲು ಎಲ್ಲ ಸಿದ್ಧತೆ ಮಾಡಿಕೊಳ್ಳಲಾಗಿತ್ತು. ಈ ಘಟನೆಗೆ ಯಾರು ಕಾರಣ ಎಂಬುದು ಗೊತ್ತಿದೆ. ಶೀಘ್ರದಲ್ಲೇ ಆರೋಪಿಗಳ ಬಂಧಿಸಲಾಗುವುದು ಎಂದು ಬಿದರಿ ಮಾಧ್ಯಮ ಪ್ರತಿನಿಧಿಗಳಿಗೆ ವಿವರಿಸಿದರು.
ರಾಜಕೀಯ ದ್ವೇಷ : ದಿವಾನ್ ಅಲಿ ಕಾರ್ಪೋರೇಟರ್ ಆದ ನಂತರ ಅವರ ವರ್ತನೆ ಬದಲಾಗಿತ್ತು. ಅಲಿ ಕೊಲೆಯಲ್ಲಿ ರಾಜಕೀಯ ನಾಯಕರ ಕೈವಾಡ ಇದೆ ಎನ್ನುವ ಸಂಶಯ ಬಂದಿದೆ. ಅಲಿ ಮೇಲೆ ಕೆಲ ಪೊಲೀಸ್ ಅಧಿಕಾರಿಗಳು ದ್ವೇಷ ಸಾಧಿಸುತ್ತಿದ್ದರು. ಬೆಂಗಳೂರು ಪೊಲೀಸ್ ಆಯುಕ್ತರು ಇದರ ಬಗ್ಗೆ ಸ್ಪಷ್ಟೀಕರಕಣ ನೀಡಬೇಕು. ನಾನೀಗ ಲಂಡನ್ ನಲ್ಲಿದ್ದು ಬೆಂಗಳೂರಿಗೆ ಬಂದ ನಂತರ ವಿವರವಾಗಿ ತಿಳಿಸುವೆ ಎಂದು ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಹೇಳಿದ್ದಾರೆ.(ಕ್ರೈಂ)












Click it and Unblock the Notifications