ಸಿಇಸಿ ಇಂದ ಓಎಂಸಿ ಸೇರಿ 6 ಗಣಿಗಳ ಪರಿಶೀಲನೆ

ಸಿಇಸಿ ಸಮಿತಿ ಅಂತರಗಂಗಮ್ಮ ಕೊಂಡ (ಎಜಿಕೆ) ಪ್ರದೇಶಕ್ಕೆ ಭೇಟಿ ನೀಡಿದಾಗ ನೆರೆಯ ಕರ್ನಾಟಕದ ಟಿಎನ್ನಾರ್ ಗಣಿ ಗುತ್ತಿಗೆದಾರ ಟಪಾಲ್ ಗಣೇಶ್ ಅವರು ಅಹವಾಲು - ಅಭಿಪ್ರಾಯ ಮಂಡಿಸಲು ಮುಂದಾದಾಗ 'ತಾವು ಅಭಿಪ್ರಾಯಗಳನ್ನು, ಆಕ್ಷೇಪಣೆಗಳನ್ನು ಲಿಖಿತವಾಗಿ ಸಲ್ಲಿಸಿ. ನಾವು ಪರಿಶೀಲಿಸಿ ಸುಪ್ರೀಂಕೋರ್ಟ್ಗೆ ವರದಿ ಸಲ್ಲಿಸುತ್ತೇವೆ" ಎಂದರು. ಅಲ್ಲದೇ, ಎಜಿಕೆಯಲ್ಲಿ ನಡೆದಿರುವ ಗಣಿಗಾರಿಕೆ ಕುರಿತು ಅಧಿಕಾರಿಗಳ ಜೊತೆ ಚರ್ಚೆ ನಡೆಸಿ ಮಾಹಿತಿ ಸಂಗ್ರಹ ಮಾಡಿದರು.
ಓಎಂಸಿ ವಕೀಲರಾದ ರಾಘವಾಚಾರ್ಯಲು, ಓಎಂಸಿಯ ನಿರ್ದೇಶಕರಾದ ಆಂಧ್ರದ ಕಾಂಗ್ರೆಸ್ ಶಾಸಕ ಕೆ. ರಾಮಚಂದ್ರಾರೆಡ್ಡಿ, ಬಿ. ಶ್ರೀನಿವಾಸರೆಡ್ಡಿ ಸಿಇಸಿ ತಂಡದ ಪ್ರಶ್ನೆಗಳಿಗೆ ಉತ್ತರಿಸಿದರು. ಬಳ್ಳಾರಿ ಐರನ್ ಓರ್ಸ್ ಪ್ರೈವೇಟ್ ಲಿಮಿಟೆಡ್ನ ವ್ಯವಸ್ಥಾಪಕ ನಿರ್ದೇಶಕ ಎಸ್.ಕೆ. ಮೋದಿ ಅವರು ಸಮಿತಿಯನ್ನು ಭೇಟಿ ಮಾಡಿದರು. ಈ ಕಂಪನಿಯ ಗಣಿ ವಿಭಾಗದ ಪ್ರಧಾನ ವ್ಯವಸ್ಥಾಪಕ ಯುವರಾಜ್ ಕಡಾಡಿ ಅವರು ಸಮಿತಿಯ ಪ್ರಶ್ನೆಗಳಿಗೆ ಉತ್ತರ ನೀಡಿದರು.
ಅಕ್ಷೇಪಣೆ ಇದ್ದರೆ ಮೂಲ ನಕ್ಷೆ ಸಮೇತ ಬನ್ನಿ: ಓಎಂಸಿ ಪರ ವಕೀಲ ರಾಘವಾರ್ಚಾಲು ನೀಡಿದ ನಕ್ಷೆಗಳನ್ನು ತಿರಸ್ಕರಿಸಿದ ಸಿಇಸಿ ತಂಡ, ಒತ್ತುವರಿ ಆಗಿರುವುದನ್ನು ಕರ್ನಾಟಕ ಅರಣ್ಯ ಹಾಗೂ ಗಣಿಗಾರಿಕೆ ಇಲಾಖೆ ಸ್ಪಷ್ಟಪಡಿಸಿದೆ. ನಿಮಗೆ ಆಕ್ಷೇಪಣೆಗಳಿದ್ದಲ್ಲಿ ಜಿಪಿಎಸ್ ಆಧಾರಿತ ಮೂಲ ಲೀಸ್ ನಕ್ಷೆ ಪ್ರತಿಗಳನ್ನು ತೆಗೆದುಕೊಂಡು ಬನ್ನಿ ಎಂದು ಪರಿಶೀಲನಾ ತಂಡ ಹೇಳಿದೆ.
ಸಿಇಸಿಯ ಸದಸ್ಯ ಕಾರ್ಯದರ್ಶಿ ಎಂ.ಕೆ. ಜೀವ್ರಾಜಕ, ಸದಸ್ಯರಾದ ಮಹೇಂದ್ರ ವ್ಯಾಸ್ ಮತ್ತು ಎ.ಡಿ.ಎನ್. ರಾವ್, ಆಂಧ್ರದ ಸಿಸಿಎಫ್ ಪದ್ಮನಾಭನ್, ಸರ್ವೆ ಮತ್ತು ಭೂ ದಾಖಲೆಗಳ ಡೆಪ್ಯುಟಿ ಡೈರೆಕ್ಟರ್ ಚಲಪತಿ, ಸರ್ವೆ ಇಲಾಖೆಯ ಆಯುಕ್ತ ಶಿವಶಂಕರ್, ಪಿಸಿಸಿಎಫ್ ಮಧುಕರ್, ಸಮ್ಮಿರೆಡ್ಡಿ ಸೇರಿ ವಿವಿಧ ಅಧಿಕಾರಿಗಳು ಸಿಇಸಿ ಜೊತೆ ಕರ್ನಾಟಕದಿಂದ ಬಳ್ಳಾರಿಯ ಅರಣ್ಯ, ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ್ದರು. [ಅಕ್ರಮ ಗಣಿಗಾರಿಕೆ]











Click it and Unblock the Notifications