Get Updates
Get notified of breaking news, exclusive insights, and must-see stories!

ಪ್ರತಿಭಾವಂತರಿಗೆ ಶಿಕ್ಷಣ ಇಲಾಖೆಯ 'ಪುರಸ್ಕಾರ'

Education dept treats children like this in Savanur
ಸವಣೂರ, ಡಿ. 11 : ಸರ್ವಶಿಕ್ಷಣ ಅಭಿಯಾನ ಆರಂಭಗೊಂಡ ಬಳಿಕ ಅಗಾಧವಾದ ಪ್ರಮಾಣದಲ್ಲಿ ಅನುದಾನದ ಒಳಹರಿವನ್ನು ಕಂಡಿರುವ ಶಿಕ್ಷಣ ಇಲಾಖೆ, ಮಾನವೀಯತೆಯ ಸೂಕ್ಷ್ಮ ಸಂವೇದನೆಗಳನ್ನೇ ಕಳೆದುಕೊಂಡಿರುವದಕ್ಕೆ ಈ ಚಿತ್ರಗಳೇ ಸಾಕ್ಷಿ ನುಡಿಯುತ್ತದೆ.

ಮಕ್ಕಳನ್ನು ದೇವರೆಂದು ಕರೆಯುವ, ಅವರಿಂದಲೇ ದೇಶದ ಭವಿಷ್ಯ ಎಂಬ ಸವಕಲು ನುಡಿಗಳನ್ನು ಆಡುವ ಇಲಾಖೆ, ವಾಸ್ತವದಲ್ಲಿ ಮಾತ್ರ ಮಕ್ಕಳನ್ನು ಇನ್ನಿಲ್ಲದಂತೆ ಕಡೆಗಣಿಸಲು ಆರಂಭಿಸಿದೆ. ಪ್ರತಿಯೊಂದು ಯೋಜನೆ, ಕಾರ್ಯಕ್ರಮಗಳಲ್ಲಿಯೂ ಮಕ್ಕಳಿಗೆ ಹಿಂಸೆಯೊಂದಿಗೆ, ಶೋಷಣೆ ಮಾಡಲಾಗುತ್ತಿದೆ.

ಗುರುವಾರ 9ರಿಂದ ಆರಂಭಗೊಂಡಿರುವ ತಾಲೂಕಾ ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ತಾಲೂಕಿನ ಎಲ್ಲ ಮೂಲೆಗಳಿಂದಲೂ ಮಕ್ಕಳನ್ನು ಕರೆತರಲಾಗಿತ್ತು. ಸಾಮೂಹಿಕ ಸ್ಪರ್ಧೆಯ ಆರು ವಿಭಾಗಗಳಲ್ಲಿ ಭಾಗವಹಿಸಲು, ಪ್ರತಿ ಕ್ಲಸ್ಟರ್‌ಗಳಿಂದಲೂ ಮಕ್ಕಳನ್ನು ಕಟಮಾಗಳಲ್ಲಿ ತುಂಬಿಕೊಂಡು ತಂದಿದ್ದ ಇಲಾಖೆ, 250ಕ್ಕೂ ಹೆಚ್ಚು ಮಕ್ಕಳ ಜೀವದೊಂದಿಗೆ ಚೆಲ್ಲಾಟವಾಡಿದೆ.

ಪ್ರತಿ ಕ್ಲಸ್ಟರ್‌ದಿಂದ ಗಂಡು-ಹೆಣ್ಣು ಸೇರಿದಂತೆ 45ರಿಂದ 50 ಮಕ್ಕಳನ್ನು, ಸಂಗೀತ ವಾದ್ಯ ಉಪಕರಣಗಳನ್ನು ಜೊತೆಯಲ್ಲಿ ಒಂದಿಬ್ಬರು ಮಹಿಳಾ ಶಿಕ್ಷಕರನ್ನು ಕಟಮಾಗಳು ಹೊತ್ತುಕೊಂಡು ಬಂದಿದ್ದವು. ಪುನಃ ಪ್ರತಿಭಾ ಕಾರಂಜಿ ಎಂಬ ಜಾತ್ರೆ ಮುಗಿಯುತ್ತಿದ್ದಂತೆ, ಬಳಲಿದ್ದ ಮಕ್ಕಳನ್ನು ಕಟಮಾಗಳಲ್ಲಿ ತುಂಬಿಸಿ, ಜೋತಾಡಿಸಿ ಸಾಗಿಸಲಾಗಿದ್ದು, ಇಲಾಖೆಯ ಬೇಜವಾಬ್ದಾರಿತನಕ್ಕೆ ಸಾಕ್ಷಿಯಾಯಿತು. ಕಟಮಾಗಳಲ್ಲಿ ನಿಲ್ಲಲೂ ಸ್ಥಳ ಇಲ್ಲದ ರೀತಿಯಲ್ಲಿ ತಮ್ಮ ಊರಿಗೆ ತೆರಳಿದ ಮಕ್ಕಳಲ್ಲಿ ಪ್ರತಿಭೆಯನ್ನು ಹುಡುಕುವ ಸಾಹಸ ಮಾಡಿದ್ದ ಇಲಾಖೆ ಮಾತ್ರ, ಹಣ ಉಳಿಸಿದ ತೃಪ್ತಿ ಕಂಡುಕೊಂಡಿತು.

ಪ್ರತಿಯೊಂದು ಶಾಲೆಗೆ ನೀಡಲಾಗುವ 12 ಸಾವಿರ ರು.ಗಳ ಶಾಲಾ ಅನುದಾನದಲ್ಲಿ, ಪ್ರತಿಭಾ ಕಾರಂಜಿ ಸ್ಪರ್ಧೆಗಳಿಗಾಗಿ ಗರಿಷ್ಟ 1500 ರು.ಗಳನ್ನು ಬಳಸಲು ಸರಕಾರ ಅವಕಾಶ ಕಲ್ಪಿಸಿದೆ. ಇದರಲ್ಲಿ ಪ್ರತಿ ಮಗುವಿನ ಎರಡೂ ಮಾರ್ಗದ ಬಸ್ ಚಾರ್ಜ್ ಸೇರಿದಂತೆ ಎಲ್ಲ ಅಗತ್ಯತೆಗಳನ್ನೂ ಪೂರೈಸಲು ಅವಕಾಶ ಇದೆ. ಆದರೆ, ಹಣ ಉಳಿಸುವ ಅದ್ಬುತ ಪ್ರತಿಭೆ ಬೆಳೆಸಿಕೊಂಡಿರುವ ಇಲಾಖೆ ಇಲ್ಲಿಯೂ ತನ್ನ ಜಾಣ್ಮೆಯನ್ನು ಮೆರೆದಿದೆ. ಸರಿಯಾದ ನೊಂದಣಿ ಇಲ್ಲದ, ಪರವಾನಿಗೆ ಇಲ್ಲದ ಹತ್ತಾರು ಖಾಸಗಿ ಕಟಮಾ ಮೊದಲಾದ ವಾಹನಗಳಲ್ಲಿ ಮಕ್ಕಳನ್ನು ಕುರಿಗಳಂತೆ ತುಂಬಿ ಕರೆದಂದಿದ್ದು, ಪ್ರತಿಭಾ ಕಾರಂಜಿಯ ಮೊದಲ ಅಂಕವನ್ನು ಪೂರ್ಣಗೊಳಿಸಿದೆ.

ಮುಖ್ಯ ಶಿಕ್ಷಕರೇ ಹೊಣೆ : ವಾಹನ ಚಾಲಕ ಸೇರಿದಂತೆ ಮೂವರು ವ್ಯಕ್ತಿಗಳು ಮಾತ್ರ ಪ್ರಯಾಣಿಸಬಹುದಾದ ಸರಕು ಸಾಗಾಣಿಕೆಯ ಕಟಮಾಗಳಲ್ಲಿ ಮೂವತ್ತು ಪ್ಲಸ್ ಹತ್ತು ಎಂಬ ಲೆಕ್ಕಾಚಾರದಂತೆ ಮಕ್ಕಳನ್ನು ತುಂಬಿದ್ದ ಇಲಾಖೆ, ಇದರ ಹೊಣೆಯನ್ನು ಮಾತ್ರ ಶಾಲಾ ಮುಖ್ಯ ಶಿಕ್ಷಕರ ಮೇಲೆ ಹಾಕಿದೆ. ಮಕ್ಕಳ ಈ ಕಟಮಾ ಪ್ರಯಾಣದ ಬಗ್ಗೆ ತಮಗೆ ಗೊತ್ತೇ ಇರಲಿಲ್ಲ ಎಂದು ತಿಳಿಸಿರುವ ಕ್ಷೇತ್ರ ಶಿಕ್ಷಣಾಧಿಕಾರಿ ಹಾಗೂ ಕ್ಷೇತ್ರ ಸಮನ್ವಯಾಧಿಕಾರಿಗಳು, ಇಂತಹ ಕಟಮಾ ಅಪಘಾತವಾದಲ್ಲಿ ಅದರ ಸಂಪೂರ್ಣ ಹೊಣೆ ಆಯಾ ಶಾಲೆಯ ಮುಖ್ಯ ಶಿಕ್ಷಕರ ಮೇಲಿದೆ ಎಂದು ನುಣುಚಿಕೊಂಡಿದ್ದಾರೆ.

ಈ ಕಟಮಾ ಸವಾರಿಯನ್ನು ತಕ್ಷಣದಿಂದ ನಿಲ್ಲಿಸಲಾಗುತ್ತದೆ. ಯಾವದೇ ಶಾಲೆಗಳ ಮಕ್ಕಳನ್ನು ಕಟಮಾಗಳಲ್ಲಿ ಕರೆ ತರದಂತೆ ಶಿಕ್ಷಕರಿಗೆ ಸೂಚನೆ ನೀಡಲಾಗುತ್ತದೆ ಎಂಬ ಗಿಳಿಪಾಠವನ್ನು ಇಲಾಖೆ ಉದುರಿಸಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+