ಯಡಿಯೂರಪ್ಪನವರನ್ನು ಪಾರು ಮಾಡಿದ ಶಕ್ತಿ ಯಾವುದು?

ಎಲ್ಲ ವಿರೋಧ ಪಕ್ಷಗಳಿಗೆ, ಬಿಜೆಪಿ ಪಕ್ಷದಲ್ಲೇ ಇದ್ದ ವಿರೋಧಿಗಳಿಗೆ ನಿರಾಶೆಯಾಗುವಂತೆ ಭಾರತೀಯ ಜನತಾ ಪಕ್ಷದ ಹೈಕಮಾಂಡ್ ಯಡಿಯೂರಪ್ಪನವರನ್ನು ಮತ್ತೊಂದು ಜೀವದಾನ ನೀಡಿ ಮುಖ್ಯಮಂತ್ರಿ ಪೀಠದಲ್ಲಿ ಕುಳ್ಳಿರಿಸಿದೆ.
ಕರ್ನಾಟಕದಲ್ಲಿನ ವಿರೋಧ ಪಕ್ಷಗಳಾದ ಕಾಂಗ್ರೆಸ್ ಮತ್ತು ಜೆಡಿಎಸ್ ಬಿಜೆಪಿ ಹೈಕಮಾಂಡ್ ನ ಈ ನಿರ್ಧಾರವನ್ನು ಹೀನಾಯವಾಗಿ ತೆಗಳುತ್ತಿವೆ. ಜೆಡಿಎಸ್ ನಾಯಕ ಕುಮಾರಸ್ವಾಮಿ ಈ ನಿರ್ಧಾರವನ್ನು ರಾಷ್ಟ್ರೀಯ ಅವಮಾನ ಎಂದು ಬಣ್ಣಿಸಿದ್ದಾರೆ. ಕಾಂಗ್ರೆಸ್ ರಾಜ್ಯಾಧ್ಯಕ್ಷ ಡಾ. ಪರಮೇಶ್ವರ್ ಅವರು ಯಡಿಯೂರಪ್ಪ ವಿರುದ್ಧವಾಗಿ ನ್ಯಾಯಾಲಯದಲ್ಲಿ ಸಮರ ಮುಂದುವರಿಸುವುದಾಗಿ ಹೇಳಿದ್ದಾರೆ.
ಬಿಜೆಪಿ ಹೈಕಮಾಂಡ್ ನಿಂದಲೂ ತೀವ್ರ ತರಾಟೆಗೆ ಗುರಿಯಾಗಿದ್ದ ಯಡಿಯೂರಪ್ಪ ಅವರ ಕುರ್ಚಿ ಉಳಿದಿದ್ದು ಹೇಗೆ ಎಂಬುದು ಚಿದಂಬರ ರಹಸ್ಯವಾಗೇನೂ ಉಳಿದಿಲ್ಲ. ಪರ್ಯಾಯ ನಾಯಕನಿಲ್ಲದಿರುವುದು, ಕೇಂದ್ರದಲ್ಲಿಯೇ ಬಿಜೆಪಿ ಇಕ್ಕಟ್ಟಿನಲ್ಲಿ ಸಿಲುಕಿರುವುದು, ಕೆಲ ನಾಯಕರ ಬಂಡವಾಳ ಬಯಲುಗೊಳಿಸುವುದಾಗಿ ಯಡಿಯೂರಪ್ಪನವರೇ ಬೆದರಿಸುತ್ತಿರುವುದು ಹೈಕಮಾಂಡ್ ನ ಈ ನಿರ್ಧಾರಕ್ಕೆ ಕಾರಣ ಎನ್ನುವುದು ಸುಸ್ಪಷ್ಟ.
ಬಿಎಸ್ ವೈಗೆ ಜೀವದಾನ ನೀಡಿದ ಅಂಶಗಳು
* ತಾಲೂಕಾ ಪಂಚಾಯತ್ ಮತ್ತು ಜಿಲ್ಲಾ ಪಂಚಾಯತ್ ಚುನಾವಣೆ ಹತ್ತಿರದಲ್ಲೇ ಇರುವುದು.
* ಯಡಿಯೂರಪ್ಪಗೆ ಪರ್ಯಾಯ ನಾಯಕ ಯಾರೆಂಬ ದ್ವಂದ್ವ ಮತ್ತು ಅವರಲ್ಲಿ ವಿಶ್ವಾಸ ಇಲ್ಲದಿರುವುದು.
* ವಿವಾದಿತ ನಿವೇಶನಗಳನ್ನು ವಾಪಸ್ ನೀಡಿ ತನಿಖೆಗೆ ಆದೇಶಿಸಿರುವುದು.
* ಯಾವುದೇ ವಿವಾದಗಳಿಗೆ ಅವಕಾಶ ನೀಡುವುದಿಲ್ಲ ಎಂಬ ಅಭಯ.
* ಕೇಂದ್ರ ನಾಯಕರಲ್ಲಿಯೇ ಯಡಿಯೂರಪ್ಪ ಕುರಿತು ವಿಭಿನ್ನ ನಿಲುವು.
* ಅನಂತ್ ಕುಮಾರ್, ಸುಷ್ಮಾ ಸ್ವರಾಜ್, ರೆಡ್ಡಿ ಸಹೋದರರ ಬಂಡವಾಳ ಬಯಲು ಮಾಡುವುದಾಗಿ ಬೆದರಿಕೆ.
* ಪಕ್ಷ ತೊರೆದು ಹಿಂಬಾಲಕರನ್ನು ಎಳೆದೊಯ್ದು ಸರಕಾರವನ್ನೇ ಕೆಡವುವ ಹುನ್ನಾರ.
* ಯಡಿಯೂರಪ್ಪನವರನ್ನು ಉಳಿಸುವುದಕ್ಕಿಂತ ಕಿತ್ತುಹಾಕಿದರೆ ಪಕ್ಷಕ್ಕೆ ಹೆಚ್ಚಿನ ಧಕ್ಕೆ ಆಗುತ್ತದೆಂಬ ದೂರಾಲೋಚನೆ.
ಕರ್ನಾಟಕದಲ್ಲಿ ಯಡಿಯೂಪ್ಪನವರನ್ನು ಮುಖ್ಯಮಂತ್ರಿಯಾಗಿ ಉಳಿಸುವಂತೆ ವೀರಶೈವ ಮಠಾಧಿಪತಿಗಳು ಮಾಡಿದ ಆಗ್ರಹ ಕೂಡ ಕೆಲಸ ಮಾಡಿದಂತಿದೆ. ಎಲ್ಲಕ್ಕಿಂತ ಮುಖ್ಯವಾಗಿ, ಯಡಿಯೂರಪ್ಪನವರನ್ನು ಕಿತ್ತುಹಾಕಲೇಬೇಕೆಂದು ಟೊಂಕಕಟ್ಟಿ ನಿಂತಿದ್ದ ಬಿಜೆಪಿ ಹೈಕಮಾಂಡ್ ಯಾವುದೋ 'ಶಕ್ತಿ' ಎರಚಿದ ಮಂಕುಬೂದಿಗೆ ಮರುಳಾದಂತೆ ಕಂಡುಬಂದಿದೆ. ಆ ಶಕ್ತಿ ಯಾವುದು?












Click it and Unblock the Notifications