ಬಿಜೆಪಿಯಿಂದ ಯಡಿಯೂರಪ್ಪ ಹಣೆಬರಹ ನಿರ್ಧಾರ ಇಂದು
ಮಂಗಳವಾರ ತಡರಾತ್ರಿ ಯಡಿಯೂರಪ್ಪ ಅವರೊಂದಿಗೆ ಮಾತುಕತೆ ನಡೆಸಿದ ಬಿಜೆಪಿ ವರಿಷ್ಠರು ಅವರಿಗೆ ಷರತ್ತು ಬದ್ಧ ಜೀವದಾನ ನೀಡಿದ್ದಾರೆ. ಅದರಂತೆ ಈವರೆಗೆ ಸ್ವಚ್ಛಂದವಾಗಿ ವಿಹರಿಸುತ್ತಿದ್ದ ಯಡಿಯೂರಪ್ಪ ಅವರಿಗೆ ಹಲವು ಕಠಿಣ ಕ್ರಮಗಳ ಮೂಲಕ ಮೂಗುದಾರ ತೊಡಿಸಲು ನಿರ್ಧರಿಸಿದ್ದಾರೆ. ಅವರ ಮೇಲಿನ ಭೂ ಹಗರಣಗಳ ತನಿಖೆಗೆ ಪಕ್ಷದ ಪ್ರಮುಖರನ್ನು ಒಳಗೊಂಡು ತನಿಖಾ ಸಮಿತಿ ರಚನೆಯೂ ಇದರಲ್ಲಿದೆ.
ರಾತ್ರಿ 11.30ರಿಂದ ಮಧ್ಯರಾತ್ರಿ 1.30ರ ತನಕ ಎರಡು ಗಂಟೆಗಳ ಕಾಲ ಪಕ್ಷದ ರಾಷ್ಟ್ರಾಧ್ಯಕ್ಷ ನಿತಿನ್ ಗಡ್ಕರಿ, ಹಿರಿಯ ನಾಯಕರಾದ ಅರುಣ್ ಜೈಟ್ಲಿ, ವೆಂಕಯ್ಯ ನಾಯ್ಡು ಜೊತೆ ಸುದೀರ್ಘ ಮಾತುಕತೆ ನಡೆಸಿದ ಯಡಿಯೂರಪ್ಪ ರಾಜಿ ಸೂತ್ರದ ಮೂಲಕ ಕುರ್ಚಿ ಉಳಿಸಿಕೊಂಡಿದ್ದಾರೆ.
ಒಂದು ವೇಳೆ ರಾಜೀನಾಮೆ ಪಡೆದುಕೊಂಡಿದ್ದೆ ಆದಲ್ಲಿ, ಯಡಿಯೂರಪ್ಪ ಪಕ್ಷದ ಹೈಕಮಾಂಡ್ ವಿರುದ್ಧ ತಿರುಗಿ ಬಿದ್ದು ಸೇಡು ತೀರಿಸಿಕೊಳ್ಳಬಹುದು. ಬೆಂಬಲಿಗ ಶಾಸಕರಿಂದ ರಾಜೀನಾಮೆ ಕೊಡಿಸಿ ಸರಕಾರ ಪತನಗೊಳಿಸಬಹುದು. ಚುನಾವಣೆ ಎದುರಾದಲ್ಲಿ ಸ್ವತಂತ್ರ ಪಕ್ಷ ಸ್ಥಾಪಿಸಬಹುದು. ಏಕಕಾಲದಲ್ಲಿ ಬಿಜೆಪಿ ಹಾಗೂ ಪ್ರತಿಪಕ್ಷಗಳ ವಿರುದ್ಧ ಹೋರಾಟ ಆರಂಭಿಸಬಹುದು.
ಯಡಿಯೂರಪ್ಪ ಕುರ್ಚಿ ಉಳಿಸಿಕೊಂಡರೆ ತಮ್ಮ ಮೇಲಿರುವ ಆರೋಪಗಳಿಂದ ಮುಕ್ತರಾಗಲು ಪ್ರಯತ್ನಿಸಬಹುದು. ಪ್ರತಿಪಕ್ಷಗಳ ನಾಯಕರ ಹಗರಣಗಳನ್ನು ಬಯಲಿಗೆಳೆಯಬಹುದು. ಜಿಪಂ, ತಾಪಂ ಚುನಾವಣೆಯಲ್ಲಿ ಹೆಚ್ಚು ಸ್ಥಾನ ಗಳಿಸಲು ಶ್ರಮಿಸಿ ತಮ್ಮ ಶಕ್ತಿ ಪ್ರದರ್ಶನ ಮಾಡಬಹುದು. ಹೈಕಮಾಂಡ್ ಆಶಯಕ್ಕೆ ತಕ್ಕಂತೆ ಆಡಳಿತ ನಡೆಸಬಹುದು.