ಭೂಹಗರಣ : ಬಿಜೆಪಿ ನಾಯಕರ ಮಹತ್ವದ ಸಭೆ
ಬಿಜೆಪಿಯ ಹಿರಿಯ ನಾಯಕ ಲಾಲ್ ಕೃಷ್ಣ ಅಡ್ವಾಣಿ ಅವರ ಸಂಸತ್ತಿನ ಕೊಠಡಿಯಲ್ಲಿ ನಡೆದಿರುವ ಸಭೆಯಲ್ಲಿ ಅಡ್ವಾಣಿ, ವೆಂಕಯ್ಯ ನಾಯ್ಡು, ಸುಷ್ಮಾ ಸ್ವರಾಜ್, ಅರುಣ್ ಜೇಟ್ಲಿ, ರಾಜನಾಥ್ ಸಿಂಗ್ ಮತ್ತು ಅನಂತ್ ಕುಮಾರ್ ಭಾಗವಹಿಸಿದ್ದಾರೆ. ರಾಷ್ಟ್ರಾಧ್ಯಕ್ಷ ನಿತೀನ್ ಗಡ್ಕರಿ ಭಾಗವಹಿಸಿಲ್ಲ.
ರಾಜ್ಯದಲ್ಲಿ ಬಿರುಗಾಳಿ ಎಬ್ಬಿಸಿರುವ ಭೂಹಗರಣದ ವಿವಾದ ಕೇಂದ್ರವನ್ನೂ ತಲುಪಿ ಬಿಜೆಪಿಯನ್ನು ಇಕ್ಕಟ್ಟಿಗೆ ಸಿಲುಕಿಸಿರುವುದು ಬಿಜೆಪಿ ಕೇಂದ್ರ ನಾಯಕರಿಗೆ ಭಾರೀ ತಲೆನೋವು ತಂದಿರುವುದಂತೂ ಸತ್ಯ. ಈ ಹಿನ್ನೆಲೆಯಲ್ಲಿ ಬಿಜೆಪಿಯ ಇಂದಿನ ಸಭೆಯತ್ತ ಎಲ್ಲರ ಕಣ್ಣು ನೆಟ್ಟಿವೆ.
ತಾವು ತಮ್ಮ ಕುಟುಂಬದವರಿಗಾಗಿ 'ನ್ಯಾಯಬದ್ಧವಾಗಿ' ಪಡೆದಿರುವ ಜಮೀನುಗಳನ್ನು ವಾಪಸ್ ನೀಡಿ ನ್ಯಾಯಾಂಗ ತನಿಖೆಗೆ ವಹಿಸುವುದಾಗಿ ಯಡಿಯೂರಪ್ಪ ಹೈಕಮಾಂಡ್ ಗೆ ಹೇಳಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಆದರೆ, ಯಡಿಯೂರಪ್ಪ ವಿರೋಧಿಗಳು ಅವರನ್ನು ಕೆಳಗಿಳಿಸದೇ ಬಿಡುವುದಿಲ್ಲ ಎಂದು ಪಟ್ಟು ಹಿಡಿದಿದ್ದಾರೆ.
ಈ ಸಭೆಯಲ್ಲಿ ಯಡಿಯೂರಪ್ಪ ವಿರುದ್ಧ ಪದಚ್ಯುತಿಗೆ ಒಳಗಿಂದಲೇ ಯತ್ನ ನಡೆಸಿದ್ದಾರೆ ಎಂದು ಆರೋಪ ಹೊತ್ತಿರುವ ಅನಂತ್ ಕುಮಾರ್ ಭಾಗವಹಿಸಿರುವುದು ಅನೇಕರ ಹುಬ್ಬೇರುವಂತೆ ಮಾಡಿದೆ. ಜೊತೆಗೆ 60ಕ್ಕೂ ಹೆಚ್ಚು ಶಾಸಕರು ಕಳಂಕಿತ ಮುಖ್ಯಮಂತ್ರಿ ಯಡಿಯೂರಪ್ಪನವರನ್ನು ಕೆಳಗಿಳಿಸಿ ಬೇರೆಯವರನ್ನು ಪಟ್ಟದಲ್ಲಿ ಕೂರಿಸಬೇಕೆಂದು ಸಹಿ ಹಾಕಿ ಹೈಕಮಾಂಡಿಗೆ ಕಳಿಸಿದ್ದಾರೆ ಎಂಬ ಮಾತುಗಳೂ ಕೇಳಿಬಂದಿವೆ. ಸದ್ಯಕ್ಕೆ, ಬರೀ ಊಹಾಪೋಹಗಳದ್ದೇ ಕಾರುಬಾರು.