ಸ್ಪೆಕ್ಟ್ರಮ್ ಹಗರಣ ರಾಜಾ ಸ್ಥಾನಕ್ಕೆ ಯಾರು ?
ರಾಜಾ ಅವರ ಸ್ಥಾನಕ್ಕೆ ಮಾಜಿ ಸಚಿವ ಟಿ.ಆರ್ ಬಾಲು, ಡಿಎಂಕೆ ವಕ್ತಾರ ಟಿ.ಕೆ.ಎಸ್ ಇಳಂಗೋವನ್, ಸಂಸದ ಎ.ಕೆ.ಎಸ್ ವಿಜಯನ್ ಅಲ್ಲದೆ ಕರುಣಾನಿಧಿ ಅವರ ಪುತ್ರಿ ಕನ್ನಿಮೋಳಿ ಕೂಡಾ ರೇಸ್ ನಲ್ಲಿದ್ದಾರೆ. ಆದರೆ, ಕೇಂದ್ರ ಸಂಪುಟದಲ್ಲಿ ಕರುಣಾನಿಧಿ ಕುಟುಂಬಸ್ಥರ ಸಂಖ್ಯೆ ಹೆಚ್ಚಾಗಿರುವ ಕಾರಣ ಕನ್ನಿಮೋಳಿಗೆ ಸ್ಥಾನ ನೀಡುವ ಸಾಧ್ಯತೆ ಕಮ್ಮಿ ಎನ್ನಲಾಗಿದೆ.
ಅಯಮ್ ರಾಜಾ ಕಾಲಿಂಗ್ : ಸರಕಾರಕ್ಕೆ ಮುಜುಗರವನ್ನು ತಪ್ಪಿಸಲು ಹಾಗೂ ಸಂಸತ್ತಿನಲ್ಲಿ ಶಾಂತಿ-ಸೌಹಾರ್ದ ಉಳಿಸಲು ತನ್ನ ನಾಯಕ, ಡಿಎಂಕೆ ವರಿಷ್ಠ ಎಂ. ಕರುಣಾನಿಧಿಯವರ ಸಲಹೆಯಂತೆ ತಾನು ಸಚಿವ ಪದವಿಗೆ ರಾಜೀನಾಮೆ ನೀಡಿದ್ದೇನೆಂದು ರಾಜಾ ಪತ್ರಕರ್ತರಿಗೆ ತಿಳಿಸಿದರು. ರಾಜಾರ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ಸಹಿತ ವಿಪಕ್ಷಗಳು ಚಳವಳಿಯನ್ನು ಬಲಗೊಳಿಸುವ ಯೋಜನೆ ರೂಪಿಸಿದ್ದವು.
ರಾಜಗೆ ಮುಳುವಾದ ಸಿಎಜಿ ವರದಿ: 2ಜಿ ಸ್ಪ್ರೆಕ್ಟ್ರಂ ವಿತರಣೆಯನ್ನು ಹರಾಜು ನಡೆಸದೆ ಮಾಡಿರುವುದರಿಂದ ಬೊಕ್ಕಸಕ್ಕೆ ರೂ.1.76 ಲಕ್ಷ ಕೋಟಿ ನಷ್ಟ ಉಂಟಾಗಿದೆ. ಇದಕ್ಕೆ ಟೆಲಿಕಾಂ ಸಚಿವಾಲಯವೇ ಮುಖ್ಯ ಹೊಣೆಯೆಂದು ಸಿಎಜಿ ವರದಿ ಸಲ್ಲಿಸಿದ್ದು, ಅದು ಸದ್ಯವೇ ಸಂಸತ್ತಿನ ಮುಂದೆ ಮಂಡನೆಯಾಗಲಿತ್ತು. ಆದರೂ, ತಾನು ಹಿಂದಿನಿಂದ ನಡೆದುಕೊಂಡು ಬಂದ ಕ್ರಮದಂತೆಯೇ ನಿರ್ಧಾರ ಕೈಗೊಂಡಿದ್ದು, ರಾಜೀನಾಮೆ ನೀಡುವುದಿಲ್ಲವೆಂದು ರಾಜಾ ಇದುವರೆಗೂ ಪಟ್ಟು ಹಿಡಿದಿದ್ದರು. ಅವರಿಗೆ ಡಿಎಂಕೆ ವರಿಷ್ಠ ಕರುಣಾನಿಧಿಯವರೂ ಬೆಂಬಲ ನೀಡಿದ್ದರು.
ರಾಜಾರ ವಿರುದ್ಧ ಸಲ್ಲಿಸಲಾಗಿರುವ ಎರಡು ದೂರುಗಳು ನಾಳೆ ಸುಪ್ರೀಂ ಕೋರ್ಟ್ನಲ್ಲಿ ವಿಚಾರಣೆಗೆ ಬರಲಿದ್ದು, ನ್ಯಾಯಾಲಯದ ಅಭಿಪ್ರಾಯ ತಿಳಿದ ಬಳಿಕ ಮುಂದಿನ ನಿರ್ಧಾರ ಕೈಗೊಳ್ಳುವುದಾಗಿ ಡಿಎಂಕೆ ಘೋಷಿಸಿತ್ತು.