ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಮ್ಮ ರಾಜಕಾರಣಿಗಳು ಬರಾಕ್ ಒಬಾಮಾರಂತೇಕಿಲ್ಲ?

By * ಬಿಜಿ ಮಹೇಶ್
|
Google Oneindia Kannada News

Barack Obama, President of America
ಅಮೆರಿಕಾದ ಅಧ್ಯಕ್ಷ ಬರಾಕ್ ಒಬಾಮಾ ಭಾರತಕ್ಕೆ ಬಂದಾಗಿನಿಂದ ಭಾರತದ ಮಾಧ್ಯಮಗಳು ದಿನದ 24 ಗಂಟೆಗಳನ್ನು ಬರಾಕ್ ಭೋಪರಾಕ್ ಗೆ ಮೀಸಲಿಟ್ಟಿವೆ. ಇದು ಇಂಗ್ಲಿಷ್ ಮಾಧ್ಯಮಗಳಿಗೆ ಮಾತ್ರ ನೂರಕ್ಕೆ ನೂರು ಸತ್ಯ. ಇದೇ ಮಾತು, ಪ್ರಾದೇಶಿಕ ಟಿವಿ ಚಾನಲ್ಲುಗಳಿಗೆ ಅನ್ವಯಿಸುವುದಿಲ್ಲ.

ದೀಪಾವಳಿಯ ದಿನ ಹೋಲಿ ಸ್ಕೂಲ್ ಗೆ ಭೇಟಿ ನೀಡಿದ ದಂಪತಿಗಳು ಯಾವುದೇ ಹಮ್ಮುಬಿಮ್ಮುಗಳಿಲ್ಲದೆ ಮಕ್ಕಳು, ಜನತೆಯೊಂದಿಗೆ ಬೆರೆತು ಕುಣಿದು ನಲಿದಾಡಿದರು. ಮಕ್ಕಳ ಉತ್ಸಾಹವೇ ಬರಾಕ್ ಅವರನ್ನು ಕೂಡ ನಾಲ್ಕು ಹೆಜ್ಜೆ ಹಾಕಲು ಪ್ರೇರೇಪಿಸಿತು. ಈ ಮಟ್ಟಿಗೆ ಭಾರತದ ಭವಿಷ್ಯ ಉಜ್ವಲವಾಗಿರುವುದು ಸಾಬೀತಾಯಿತು.

ಬರಾಕ್ ಒಬಾಮಾ ಅವರು ಸಾರ್ವಜನಿಕರೊಂದಿಗೆ ಬೆರೆತು ಮಾತುಕತೆ ನಡೆಸುತ್ತಿರುವುದರ ಬಗ್ಗೆ ಟ್ವಿಟ್ಟರಲ್ಲಿ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ. ಹಿಂದೆ, ಮಾಜಿ ಪ್ರಧಾನಿಗಳಾದ ಇಂದಿರಾ ಗಾಂಧಿ ಮತ್ತು ರಾಜೀವ್ ಗಾಂಧಿ ಈ ರೀತಿ ಬೆರೆತು ನರ್ತನ ಮಾಡಿದ್ದು ನೆನಪಿದೆ. ಆದರೆ, ಇದು ಇಲ್ಲಿಗೇ ಮುಕ್ತಾಯವಾಗುತ್ತದೆ. ನಮ್ಮ ನಾಯಕರುಗಳೇಕೆ ಹೀಗೆ? ಯಾಕೆ ಜನತೆಯೊಂದಿಗೆ ಬೆರೆಯುವುದಿಲ್ಲ ಎಂಬುದಕ್ಕೆ ಉತ್ತರವಿಲ್ಲ. ಆದರೆ, ಅವರೇ ನಮ್ಮನ್ನು ತಮ್ಮ ತಾಳಕ್ಕೆ ಕುಣಿಸುತ್ತಾರೆಂಬುದು ಮಾತ್ರ ಜಗತ್ ಸತ್ಯ.

ಮುಂದೆ, ಸೇಂಟ್ ಕ್ಸೇವಿಯರ್ ಕಾಲೇಜಿನಲ್ಲಿ ಮಿಷೆಲ್ ಒಬಾಮಾ ಪರಿಚಯಾತ್ಮಕ ಮಾತುಗಳಾಡಿ ಅತ್ಯಂತ ಕ್ಲಿಷ್ಟಕರ ಪ್ರಶ್ನೆಗಳನ್ನು ಅಮೆರಿಕಾದ ಅಧ್ಯಕ್ಷರಿಗೆ ಕೇಳಬೇಕೆಂದು ಆಗ್ರಹಿಸಿದರು. ಎಂಟತ್ತು ಪ್ರಶ್ನೆಗಳಿಗೆ ಒಬಾಮಾ ನೀಡಿದ ಉತ್ತರಗಳು ಕನಿಷ್ಠ ನೂರು ಪ್ರಶ್ನೆಗಳಿಗೆ ಉತ್ತರ ನೀಡಿದಂತಿತ್ತು. ಇದು ಭಾರತದ ರಾಜಕಾರಣಿಗಳಿಂದ ಸಾಧ್ಯವೆ? ನಮ್ಮ ರಾಜಕಾರಣಿಗಳು ಈ ರೀತಿ ಜನರನ್ನು ಎದುರಿಸುವುದು ಯಾವಾಗ? ಚುನಾವಣೆ ಬಂದಾಗಲೆ? ಬಹುಶಃ!

ನಂತರ ಒಬಾಮಾ ಸಾಕಷ್ಟು ಜನರನ್ನು ಖುದ್ದು ಭೇಟಿ ಮಾಡಿ ಹಸ್ತಲಾಘವ ಮಾಡಿ ಉಭಯ ಕುಶಲೋಪರಿ ವಿಚಾರಿಸಿದರು. ಅವರ ಭದ್ರತಾದಳ ಜನತೆಯನ್ನು ನಿಯಂತ್ರಿಸುವ ಗೋಜಿಗೆ ಹೋಗದೆ ಸಾರ್ವಜನಿಕ ಮಿಲನಕ್ಕೆ ಅವಕಾಶ ನೀಡಿತ್ತು. ಭಾರತದ ಭದ್ರತಾ ಸಿಬ್ಬಂದಿಗಳು ಮೂಕವಿಸ್ಮಿತರಾಗಿ ನೋಡುತ್ತಿದ್ದರು. ಮತ್ತದೇ ಪ್ರಶ್ನೆ. ರಾಜಕಾರಣಿಗಳು ಜನತೆಯೊಂದಿಗೆ ಮುಕ್ತವಾಗಿ ಇರಲು ಭಾರತೀಯ ಪೊಲೀಸರು ಯಾಕೆ ಅವಕಾಶ ಮಾಡಿಕೊಡುವುದಿಲ್ಲ? ಇದು ನಮ್ಮ ಭದ್ರತಾ ಸಿಬ್ಬಂದಿಗಳ ದೌರ್ಬಲ್ಯವೆ? ಅಥವಾ ನಾವು ಸಾರ್ವಜನಿಕರು ಪಾಶ್ಚಿಮಾತ್ಯ ರಾಜಕಾರಣಿಗಳೊಂದಿಗೆ ನಡೆದುಕೊಳ್ಳುವುದು ಹೀಗೆಯೆ?

ಒಬಾಮಾ ಅವರ ಹಾಸ್ಯಪ್ರಜ್ಞೆ ಕೂಡ ಭಾರತೀಯ ರಾಜಕಾರಣಿಗಳಿಂದ ಅವರನ್ನು ಬೇರೆಯಾಗಿ ನಿಲ್ಲಿಸುತ್ತದೆ. ಸಿಇಓಗಳನ್ನು ಉದ್ದೇಶಿಸಿ ಮುಂಬೈನಲ್ಲಿ ಮಾತನಾಡಿದಾಗ, ಅಮೆರಿಕಾದಲ್ಲಿ ಇತ್ತೀಚೆಗೆ ನಡೆದ ಮಧ್ಯಂತರ ಚುನಾವಣೆಯಲ್ಲಿ ಡೆಮಾಕ್ರೆಟ್ ಪಕ್ಷ ಹಿನ್ನೆಡೆ ಅನುಭವಿಸಿದ್ದನ್ನು ಪ್ರಸ್ತಾಪಿಸಿ, ಎಲ್ಲವೂ ನಾವು ಅಂದುಕೊಂಡತೆ ಆಗುವುದಿಲ್ಲ ಎಂದು ನುಡಿದು ಹಾಸ್ಯಪ್ರಜ್ಞೆ ಮೆರೆದರು. ಇಂಥ ಹಾಸ್ಯಪ್ರಜ್ಞೆ ಮತ್ತು ಕ್ರೀಡಾಮನೋಭಾವದಿಂದ ಚುನಾವಣೆಯಲ್ಲಿನ ಸೋಲು ಗೆಲುವುಗಳನ್ನು ನಮ್ಮ ರಾಜಕಾರಣಿಗಳು ಸ್ವೀಕರಿಸುವುದಿಲ್ಲ ಎಂಬುದಕ್ಕೆ ಕರ್ನಾಟಕದಲ್ಲಿ ನಡೆಯುತ್ತಿರುವ ಇತ್ತೀಚಿನ ವಿದ್ಯಮಾನಗಳೇ ಸಾಕ್ಷಿ.

ಮುಂದಿನ ದಿನಗಳಲ್ಲಿ ಅಮೆರಿಕದ ಅಧ್ಯಕ್ಷ ಮತ್ತು ನಮ್ಮ ರಾಜಕಾರಣಿಗಳ ನಡವಳಿಕೆಗಳ ಬಗ್ಗೆ ಸಾಕಷ್ಟು ಚರ್ಚೆ ನಡೆದೇ ನಡೆಯುತ್ತವೆ. ಇದನ್ನು ನಮ್ಮವರೂ ಗಮನಿಸುತ್ತಿದ್ದಾರೆ. ಆದರೆ, ಇದು ನಮ್ಮ ಪುಢಾರಿಗಳ ಮೇಲೆ ಪರಿಣಾಮ ಬೀರುವುದೆ?

ಇಂಗ್ಲಿಷ್ ಲಿಪಿಯಲ್ಲಿ ಕನ್ನಡ ಎಸ್ಎಮ್ಎಸ್ | ದಟ್ಸ್ ಕನ್ನಡ ಫ್ಯಾನ್ ಕ್ಲಬ್ ಸೇರಿರಿ | ಮೊಬೈಲಲ್ಲಿ ಕನ್ನಡ ಸುದ್ದಿ ಓದಿರಿ | ಹೂವಿನಂಗಡಿ 24/7

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X