ಭಾರೀ ಮಳೆಗೆ ದಾವಣಗೆರೆ ಜಿಲ್ಲೆ ಜನತೆ ತತ್ತರ

ಮಂಗಳವಾರ ಸುರಿದ ಮಳೆ ಸಾಕಷ್ಟು ಹಾನಿ ಉಂಟುಮಾಡಿತ್ತು. ಬುಧವಾರ ರಾತ್ರಿ ಕೂಡ ಬಿದ್ದ ಭಾರೀ ಮಳೆಗೆ ದಾವಣಗೆರೆಯಲ್ಲಿ 60ಕ್ಕೂ ಹೆಚ್ಚಿನ ಮನೆಗಳು ಕುಸಿದು ನೆಲಸಮವಾಗಿವೆ. ಕೆರೆಕಟ್ಟೆಗಳು ಒಡೆದ ಕಾರಣ ಸಾವಿರಾರು ಎಕರೆ ಬೆಳೆ ಮಳೆಯಲ್ಲಿ ಕೊಚ್ಚಿಹೋಗಿದೆ. ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆಯಲ್ಲಿ ಮನೆ ಕುಸಿದು ಜಯಮ್ಮ ಎಂಬ ಮಹಿಳೆ ಮೃತರಾಗಿದ್ದಾರೆ. ನಿನ್ನೆ ಇದೇ ಜಿಲ್ಲೆಯಲ್ಲಿ ಒಂದೇ ಕುಟುಂಬದ ಮೂವರು ಮೃತ್ಯುವಿಗೀಡಾಗಿದ್ದರು.
ದಾವಣಗೆರೆಯ ಚನ್ನಗಿರಿ, ಹರಪನಹಳ್ಳಿ ಮುಂತಾದ ಪ್ರದೇಶದಲ್ಲಿ ಹೆಚ್ಚಿನ ಹಾನಿ ಸಂಭವಿಸಿದೆ. ಸುಮಾರು 6 ಸೆಂ.ಮೀ. ಮಳೆ ಸುರಿದ ಕಾರಣ ಎಲ್ಲೆಡೆ ನೀರು ಆವರಿಸಿಕೊಂಡಿದ್ದು ಜನ ಮನೆಮಠ ಕಳೆದುಕೊಂಡಿರುವುದು ಮಾತ್ರವಲ್ಲ ರೋಗರುಜಿನಗಳಿಗೆ ತುತ್ತಾಗುವ ಅಪಾಯ ಎದುರಿಸುತ್ತಿದ್ದಾರೆ.
ಚನ್ನಗಿರಿಯಲ್ಲಿ 18, ಹರಪನಹಳ್ಳಿಯಲ್ಲಿ 32 ಮತ್ತು ಹರಿಹರದಲ್ಲಿ 12 ಮನೆಗಳು ಸಂಪೂರ್ಣವಾಗಿ ನೆಲಕಚ್ಚಿವೆ. ಚನ್ನಗಿರಿ ತಾಲೂಕಿನಲ್ಲಿರುವ ಸೂಳೆಕೆರೆ (ಶಾಂತಿಸಾಗರ) ಕೋಡಿಹರಿದಿದ್ದರಿಂದ ಸುತ್ತಮುತ್ತಲಿನ ಬೆಳೆಗಳು ನಾಶವಾಗಿವೆ. ಕಟಾವಿನ ನಿರೀಕ್ಷೆಯಲ್ಲಿದ್ದ ರೈತರು ಕಂಗಾಲಾಗಿದ್ದಾರೆ.
ಜಿಲ್ಲಾಡಳಿತ ಕೂಡ ಸಂತ್ರಸ್ತರಿಗೆ ನೆಲೆ ಒದಗಿಸಲು ಮತ್ತು ಆಹಾರ ಒದಗಿಸಲು ಕಾರ್ಯನಿರತವಾಗಿದೆ. ಅನೇಕ ಪ್ರದೇಶಗಳಲ್ಲಿ ಗಂಜಿ ಕೇಂದ್ರಗಳನ್ನು ತೆರೆಯಲಾಗಿದ್ದು, ಶಾಲೆಗಳಲ್ಲಿ ಮನೆ ಕಳೆದುಕೊಂಡವರಿಗೆ ಆಶ್ರಯ ನೀಡಲಾಗಿದೆ. ಕಳೆದ ವರ್ಷ ಉತ್ತರ ಕರ್ನಾಟಕದಲ್ಲಿ ಸಂಭವಿಸಿದ ಜಲಪ್ರಳಯದ ರೀತಿಯಲ್ಲಿ ಈ ಜಿಲ್ಲೆಯಲ್ಲಿಯೂ ಅತಿವೃಷ್ಟಿ ಸಂಭವಿಸಿದೆ. ಇಡೀ ಕನ್ನಡ ನಾಡಿಗೆ ನಾಡೇ ದೀಪಾವಳಿಯ ಸಂಭ್ರಮದಲ್ಲಿದ್ದರೆ ದಾವಣಗೆರೆ ಜಿಲ್ಲೆಯ ಜನ ಮಾತ್ರ ಸಹಾಯಹಸ್ತ ಚಾಚಿ ನಿಂತಿದ್ದಾರೆ.












Click it and Unblock the Notifications