ಕಾಂಗ್ರೆಸ್ ಶಾಸಕರಿಗೆ 50 ಕೋಟಿ, ಮಂತ್ರಿಗಿರಿ ಆಮಿಷ
ಕಾಂಗ್ರೆಸ್ ಶಾಸಕಾಂಗ ಸಭೆಯ ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಕಾಂಗ್ರೆಸ್ ನಾಯಕರು, ಆಪರೇಶನ್ ಕಮಲದ ಮೂಲಕ ಬಿಜೆಪಿ ಕುದುರೆ ವ್ಯಾಪಾರ ಆರಂಭಿಸಿರುವುದು ಸಾಬೀತಾಗಿದ್ದು, ಶಾಸಕರ ಕುದುರೆ ವ್ಯಾಪಾರದ ಸಂಪೂರ್ಣ ಮಾಹಿತಿಯನ್ನು ಕೂಡಲೇ ಬಹಿರಂಗಗೊಳಿಸುವುದಲ್ಲದೇ, ಈ ಬಗ್ಗೆ ರಾಜ್ಯಪಾಲ ಎಚ್ ಆರ್ ಭಾರದ್ವಾಜ್ ಅವರಿಗೂ ಮಾಹಿತಿ ನೀಡಲಾಗುವುದು ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
ಕಾಂಗ್ರೆಸ್ಸಿನ 73 ಶಾಸಕರ ಪೈಕಿ 20 ಶಾಸಕರನ್ನು ಹೊರತುಪಡಿಸಿ ಉಳಿದ 53 ಶಾಸಕರಿಗೆ ಬಿಜೆಪಿ ಗಾಳ ಹಾಕಿದೆ. ಬಿಜೆಪಿಗೆ ಬಂದಲ್ಲಿ 50 ಕೋಟಿ ರುಪಾಯಿ ಹಾಗೂ ಮಂತ್ರಿಗಿರಿಯನ್ನು ನೀಡುವುದಾಗಿ ಭರವಸೆ ನೀಡಿದೆ. ಬಳ್ಳಾರಿಯ ರೆಡ್ಡಿ ಸಹೋದರರು, ಸಚಿವರಾದ ಅಶೋಕ, ಬಸವರಾಜ ಬೊಮ್ಮಾಯಿ ಅವರುಗಳು ಆಪರೇಷನ್ ಕಮಲದಲ್ಲಿ ಮುಂಚೂಣಿಯಲ್ಲಿದ್ದು, ಕಾಂಗ್ರೆಸ್ ಶಾಸಕರಿಗೆ ಗಾಳ ಹಾಕಲು ಯತ್ನಿಸಿರುವ ಸಚಿವರ ಪಟ್ಟಿಯನ್ನು ಬಿಡುಗಡೆ ಮಾಡಲಾಗುವುದು ಹಾಗೂ ರಾಜ್ಯಪಾಲರಿಗೆ ಈ ಪಟ್ಟಿಯನ್ನು ಸಲ್ಲಿಸಲಾಗುವುದು ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
ಕುಣಿಗಲ್ ನ ಕಾಂಗ್ರೆಸ್ ಶಾಸಕ ರಾಮಚಂದ್ರಗೌಡ ನಾಪತ್ತೆಯಾಗಿದ್ದಾರೆ ಎಂದು ಹೇಳಲಾಗಿದೆ. ಆಪರೇಷನ್ ಕಮಲಕ್ಕೆ ಅವರು ಬಲಿಯಾಗಿದ್ದಾರೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ. ಸಂಜೆ ಬಿಜೆಪಿ ಶಾಸಕಾಂಗ ಸಭೆ ನಡೆಯಲಿದೆ.
ಇಂಗ್ಲಿಷ್ ಲಿಪಿಯಲ್ಲಿ ಕನ್ನಡ ಎಸ್ಎಮ್ಎಸ್ | ದಟ್ಸ್ ಕನ್ನಡ ಫ್ಯಾನ್ ಕ್ಲಬ್ ಸೇರಿರಿ | ಮೊಬೈಲಲ್ಲಿ ಕನ್ನಡ ಸುದ್ದಿ ಓದಿರಿ | ಹೂವಿನಂಗಡಿ 24/7