ಕೆಐಎಡಿಬಿ ಹಗರಣ : ಇಬ್ಬರಿಗೆ ಜಾಮೀನು
ಅಧೀನ ನ್ಯಾಯಾಲಯ ಜಾಮೀನು ನೀಡಲು ನಿರಾಕರಿಸಿದ್ದರಿಂದ ಮುನಿನಾರಾಯಣಪ್ಪ ಹಾಗೂ ಸಂತೋಷ್ ಪರ ವಕೀಲರು ರಜಾ ಕಾಲದ ಪೀಠದಲ್ಲಿ ಅರ್ಜಿ ಸಲ್ಲಿಸಿದ್ದರು. ನ್ಯಾ.ಜಗನ್ನಾಥನ್ ಅವರ ಪೀಠ ವಿಚಾರಣೆ ನಡೆಸಿ, ಷರತ್ತುಬದ್ಧ ಜಾಮೀನು ನೀಡಿದೆ. ಎರಡು ದಿನದ ಹಿಂದೆ ಇದೇ ಪೀಠವು ಕಟ್ಟಾ ಜಗದೀಶ್ಗೂ ಜಾಮೀನು ನೀಡಿತ್ತು.
ಆರೋಪಿಗಳು 42 ಕೋಟಿ ರೂ.ಗೂ ಅಧಿಕ ಅವ್ಯವಹಾರ ನಡೆಸಿದ್ದಾರೆ. ಇನ್ನಷ್ಟು ಅಕ್ರಮ ನಡೆಸಿರುವ ಬಗ್ಗೆ ಮಾಹಿತಿಯಿದೆ. ಜಾಮೀನು ನೀಡಿದರೆ ಸಾಕ್ಷ್ಯ ನಾಶವಲ್ಲದೆ, ತನಿಖೆಗೆ ಅಡ್ಡಿ ಉಂಟು ಮಾಡುತ್ತಾರೆ ಎಂದು ಲೋಕಾಯುಕ್ತ ಪರ ವಕೀಲರು ವಾದಿಸಿದರು. ಮುನಿನಾರಾಯಣಪ್ಪ ಹಾಗು ಸಂತೋಷ್ ಅವ್ಯವಹಾರದಲ್ಲಿ ಭಾಗಿಯಾಗಿದ್ದಾರೆ ಎಂದು ತನಿಖೆ ಆರಂಭದಲ್ಲೇ ಹೇಳಲು ಸಾಧ್ಯವಿಲ್ಲ ಎಂದು ಆರೋಪಿಗಳ ಪರ ವಕೀಲರು ವಾದಿಸಿದರು.
ಷರತ್ತುಗಳೇನು?: ಒಂದು ಲಕ್ಷ ರೂ.ಗಳ ವೈಯಕ್ತಿಕ ಹಾಗೂ ಪರಿಚಯಸ್ಥರಿಂದ ಒಂದು ಲಕ್ಷ ರೂ.ಭದ್ರತಾ ಠೇವಣಿ ಇಡಬೇಕು. ಪ್ರತಿ ಬುಧವಾರ ಹಾಗೂ ಶನಿವಾರ ಲೋಕಾಯುಕ್ತ ಎಸ್ಪಿ ಕಚೇರಿಗೆ ತೆರಳಿ ಸಹಿ ಮಾಡಬೇಕು. ಬೆಂಗಳೂರನ್ನು ತೊರೆಯಬಾರದು. ಅನಿವಾರ್ಯ ಸಂದರ್ಭದಲ್ಲಿ ಅಧೀನ ನ್ಯಾಯಾಲಯದ ಅನುಮತಿ ಪಡೆಯಬೇಕು. ಪಾಸ್ಪೋಟ್ ಅನ್ನು ಲೋಕಾಯುಕ್ತ ಪೊಲೀಸರಿಗೆ ನೀಡಬೇಕು. ಸಾಕ್ಷಿಗಳನ್ನು ನಾಶ ಪಡಿಸಬಾರದು. ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಸಾಕ್ಷಿಗಳನ್ನು ಬೆದರಿಸಬಾರದು. ತನಿಖೆಗೆ ಸಹಕರಿಸಬೇಕು. ಮೇಲಿನ ಯಾವುದೇ ಷರತ್ತು ಉಲ್ಲಂಘಿಸಿದಲ್ಲಿ ಜಾಮೀನು ವಜಾಗೊಳಿಸಲಾಗುವುದು ಎಂದು ಕೋರ್ಟ್ ಎಚ್ಚರಿಸಿದೆ.