ಬಿಜೆಪಿಯಿಂದ ಪ್ರಜಾಪ್ರಭುತ್ವದ ಕಗ್ಗೊಲೆ; ವಿಪಕ್ಷಗಳ ಆಕ್ರೋಶ

"ಇದು ಲಜ್ಜೆಗೆಟ್ಟ ರಾಜಕೀಯಕ್ಕೆ ನಿದರ್ಶನ. ಇಂತಹ ನಾಚಿಕೆಗೇಡಿ ಮುಖ್ಯಮಂತ್ರಿಯನ್ನು ನೋಡಿಲ್ಲ. ಸ್ಪೀಕರ್ ಸ್ಥಾನಕ್ಕೆ ಬೋಪಯ್ಯ ಅಪಚಾರ ಎಸಗಿದ್ದಾರೆ. ಸ್ಪೀಕರ್ ಸ್ಥಾನದ ಗೌರವನ್ನು ಮೂರು ಕಾಸಿಗೆ ಹರಾಜಾಕಿದ್ದಾರೆ" ಎಂದು ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ಗರಂ ಆಗಿ ಮಾತನಾಡಿದರು. ಅಕ್ಟೋಬರ್ 6ರ ಬಲಾಬಲದ ಪ್ರಕಾರವೇ ವಿಶ್ವಾಸಮತ ನಡೆಯಬೇಕು ಎಂಬುದನ್ನು ಧಿಕ್ಕರಿಸಲಾಗಿದೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.
ಬಿಜೆಪಿಯಿಂದ ಪ್ರಜಾಪ್ರಭುತ್ವದ ಕಗ್ಗೊಲೆಯಾಗಿದೆ. ಇಂದು ಕರ್ನಾಟಕಕ್ಕೆ ಕರಾಳ ದಿನ. ಸರಕಾರವನ್ನು ಕೂಡಲೆ ವಜಾ ಮಾಡಬೇಕು. ವಿಶ್ವಾಸಮತ ಗಳಿಸಿದ ಕ್ರಮ ಅಕ್ರಮ. ಸ್ಪೀಕರ್ ಬೋಪಯ್ಯ ಅವರು ಹೇಡಿತನ ಪ್ರದರ್ಶಿಸಿದ್ದಾರೆ ಎಂದು ಎಂದು ಸಂಸದ, ಜೆಡಿಎಸ್ ರಾಜ್ಯಾಧ್ಯಕ್ಷ ಎಚ್ ಡಿ ಕುಮಾರಸ್ವಾಮಿ ಕಿಡಿಕಾರಿದ್ದಾರೆ. ಸ್ಪೀಕರ್ ಬೋಪಯ್ಯ ಅವರ ಕ್ರಮವನ್ನು ವಿಪಕ್ಷದ ನಾಯಕ ಸಿದ್ದರಾಮಯ್ಯ ವಿರೋಧಿಸಿದ್ದು, ರಾಜ್ಯಪಾಲರು ಸಂವಿಧಾನಾತ್ಮಕ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಮಾಧ್ಯಮಗಳೊಂದಿಗೆ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಆರ್ ವಿ ದೇಶಪಾಂಡೆ, ಶಾಸಕಾಂಗದ ಇತಿಹಾಸದಲ್ಲೇ ಇದು ಕಳಂಕ. ಸಂವಿಧಾನದ ಕಗ್ಗೊಲೆಯಾಗಿದೆ. ಪಕ್ಷದ ಕೈಗೊಂಬೆಯಂತೆ ವರ್ತಿಸಿರುವ ಸ್ಪೀಕರ್ ದೊಡ್ಡ ಅಪರಾಧ ಎಸಗಿದ್ದಾರೆ. ರಾಜ್ಯದ ಜನತೆಗೆ ಅನ್ಯಾಯ ಮಾಡಿದ್ದಾರೆ ಎಂದು ಟೀಕಿಸಿದರು.












Click it and Unblock the Notifications