ಗೋವಾದಲ್ಲಿ ಕುಮಾರಸ್ವಾಮಿ v/s ಜನಾರ್ದನ ರೆಡ್ಡಿ
ತಾಜ್ ಎಕ್ಸೋಟಿಕಾದಲ್ಲಿ ಬೀಡುಬಿಟ್ಟಿರುವ ಭಿನ್ನಮತೀಯ 14 ಶಾಸಕರು ಅಭಿನಯಕ್ಕಾಗಿ ಬಣ್ಣಹಚ್ಚಿಕೊಳ್ಳುತ್ತಿದ್ದಿದ್ದು, ಕ್ಯಾಮೆರಾ ಮುಂದೆ ಬರುತ್ತಿದ್ದಂತೆ ಬಣ್ಣ ಯಾವುದೇ ರೀತಿ ಬದಲಾಯಿಸಿಕೊಳ್ಳಬಹುದು ಅಥವಾ ಅವರ ನಿಜವಾದ ಬಣ್ಣವೇ ಬಯಲಾಗಬಹುದು. ಕಾಲಾಯ ತಸ್ಮೈನ್ನಮಃ.
ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಟಾಂಗ್ ಕೊಟ್ಟಿರುವ 14 ಭಿನ್ನಮತೀಯ ಶಾಸಕರು ಸದ್ಯಕ್ಕೆ ರೆಸಾರ್ಟಿನ ಒಂದು ರೂಮಿನಲ್ಲಿ ರಹಸ್ಯವಾಗಿ ಚರ್ಚೆ ನಡೆಸುತ್ತಿದ್ದಿದ್ದು, ಯಾವ ರೀತಿ ಹೇಳಿಕೆ ನೀಡಬೇಕು ಎಂಬ ಕುರಿತು ತಾಲೀಮು ನಡೆಸುತ್ತಿದ್ದಾರೆ. ಅವರನ್ನು ಮನವೊಲಿಸಿಕೊಳ್ಳಲು ರಾಜಕೀಯ ಬದ್ಧ ವೈರಿಗಳಾದ ಬಿಜೆಪಿಯ ಜನಾರ್ದನ ರೆಡ್ಡಿ ರೂಂ ನಂ.609 ಮತ್ತು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್ ಡಿ ಕುಮಾರಸ್ವಾಮಿ ರೂಂ ನಂ.603ರಲ್ಲಿ ಬೀಡುಬಿಟ್ಟಿದ್ದಾರೆ.
ಭಿನ್ನಮತೀಯರು 603ರ ಬಳಿಗೆ ಅಥವಾ 609ರ ಬಳಿಗೆ ಹೋಗುವರೋ ಎಂಬ ಬಗ್ಗೆ ಇನ್ನೂ ಯಾವುದೇ ನಿರ್ಧಾರಕ್ಕೆ ಬಂದಿಲ್ಲ. ಸಂಪುಟದಿಂದ ಕೈಬಿಟ್ಟಿರುವ ಪಕ್ಷೇತರರು ಮತ್ತು ಇನ್ನೊಂದಿಬ್ಬರನ್ನು ಹೊರತುಪಡಿಸಿ ಉಳಿದವರು ಜನಾರ್ದನ ರೆಡ್ಡಿ ಪಾಳಯಕ್ಕೆ ನಡೆದುಬರಬಹುದೆಂದು ಹೇಳಲಾಗುತ್ತಿದೆ. ಕಳೆದ ಎರಡು ದಿನಗಳಿಂದ ರೆಸಾರ್ಟಿನಲ್ಲಿ ಇದ್ದು ಮಾತುಕತೆ ನಡೆಸುತ್ತಿರುವ ಜನಾರ್ದನ ರೆಡ್ಡಿ ಸಂಧಾನ ಯತ್ನವನ್ನು ಭಿನ್ನಮತೀಯರು ಎಷ್ಟೇ ವಿರೋಧಿಸಿದರೂ ಕೈಬಿಡುತ್ತಿಲ್ಲ. ಜೆಡಿಎಸ್ ನ ನಾಯಕ ಜಮೀರ್ ಅಹ್ಮದ್ ಕೂಡ ಎಚ್ಡಿಕೆ ಜೊತೆಗಿದ್ದು, ಎಲ್ಲ 14 ಶಾಸಕರು ತಮ್ಮ ಜೊತೆ 4 ಗಂಟೆಗೆ ಬೆಂಗಳೂರು ವಿಮಾನ ಹತ್ತಲಿದ್ದಾರೆ ಎಂದು ವಿಸ್ವಾಸದಿಂದ ಹೇಳಿದ್ದಾರೆ.
ಈ ನಡುವೆ ಗೋವಾಗೆ ತೆರಳಿ ಭಿನ್ನಮತೀಯರನ್ನು ತಮ್ಮೆಡೆ ಸೆಳೆಯಲು ಯತ್ನಿಸುತ್ತಿರುವ ಕುಮಾರಸ್ವಾಮಿ ಇದನ್ನು ಪ್ರತಿಷ್ಠೆಯ ಪ್ರಶ್ನೆ ಮಾಡಿಕೊಂಡಿದ್ದಾರೆ. ಬಳ್ಳಾರಿ ಗಣಿಗಾರಿಕೆ ವಿಷಯದಲ್ಲಿ ಕತ್ತಿ ಸೆಳೆದು ಸೆಣಸಾಡುತ್ತಿರುವ ಜನಾರ್ದನ ರೆಡ್ಡಿ ಮತ್ತು ಕುಮಾರಸ್ವಾಮಿ ನಡುವೆ ಯಾರಿಗೆ ಜಯ ಸಿಗಲಿದೆ ಎಂಬುದು ಸದ್ಯದಲ್ಲೇ ತಿಳಿಯಲಿದೆ.
ಸೆಲ್ ಫೋನಿನಲ್ಲಿ ಕನ್ನಡ ಓದುವ ಸಂಭ್ರಮ | ದಟ್ಸ್ ಕನ್ನಡ ಹೂವಿನಂಗಡಿ 24/7 | ಕನ್ನಡ ಸಿನಿಮಾ SMS | ಕನ್ನಡ ಸುದ್ದಿಗಳ SMS