ಯಡಿಯೂರಪ್ಪಗೆ ಭೂಮಿ, ಹಣ, ಪುತ್ರ ವ್ಯಾಮೋಹ
ರವಿವಾರ ನಗರದ ಪ್ರೆಸ್ಕ್ಲಬ್ನಲ್ಲಿ ಆಯೋಜಿಸಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಾಂಗ್ರೆಸ್ನ ಹಿರಿಯ ಮುಖಂಡ ಜನಾರ್ದನ ಪೂಜಾರಿ,ಭೂ ಹಗರಣದ ಪ್ರಮುಖ ಆರೋಪಿಯಾಗಿರುವ ಸಿಎಂ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ತನಿಖೆ ಎದುರಿಸಲು ಸಿದ್ಧರಾಗಬೇಕು ಎಂದು ಸವಾಲು ಹಾಕಿದ್ದಾರೆ.
ಸೂಟ್ ಕೇಸ್ ರಾಜಕಾರಣ: ಸಂಪುಟದಲ್ಲಿ ಕಳ್ಳರು, ಸುಳ್ಳರು, ಲೂಟಿಕೋರರಿದ್ದಾರೆ. ಸಚಿವ ಸ್ಥಾನ ಪಡೆಯಲು ಯಡಿಯೂರಪ್ಪರಿಗೆ ಸೂಟ್ಕೇಸ್ ನೀಡಬೇಕೆಂದು ಶಾಸಕ ಶಂಕರಲಿಂಗೇಗೌಡ ಗಂಭೀರ ಆರೋಪ ಮಾಡಿದ್ದಾರೆ. ಸಿಎಂ ಇದುವರೆಗೆ ಎಷ್ಟು ಸೂಟ್ಕೇಸ್ ಹಣ ಪಡೆದುಕೊಂಡಿದ್ದಾರೆಂಬ ಬಗ್ಗೆ ತನಿಖೆಯಾಗಬೇಕು ಎಂದು ಪೂಜಾರಿ ಲೇವಡಿ ಮಾಡಿದರು.
ಭ್ರಷ್ಟ ಸರ್ಕಾರಕ್ಕೆ ಧಿಕ್ಕಾರ: ಬಿಜೆಪಿ ಸರ್ಕಾರದ ಒಂದೊಂದೆ ಹಗರಣಗಳು ಬೆಳಕಿಗೆ ಬರುತ್ತಿವೆ. ವೈದ್ಯಕೀಯ ಶಿಕ್ಷಣ ಸಚಿವ ರಾಮಚಂದ್ರಗೌಡ ಅಯೋಗ್ಯ ರೆಂದು ಸಂಪುಟದಿಂದ ಕೈಬಿಟ್ಟು ಯೋಜನಾ ಆಯೋಗದ ಉಪಾಧ್ಯಕ್ಷರನ್ನಾಗಿ ಮಾಡಿದ್ದೇಕೆ ಎಂದು ಖಾರವಾಗಿ ಮುಖ್ಯಮಂತ್ರಿ ಯಡಿಯೂರಪ್ಪರನ್ನು ಪ್ರಶ್ನಿಸಿದರು.
ತಮ್ಮ ಇಬ್ಬರು ಪುತ್ರರು, ಅಳಿಯನಿಗೆ ಕೋಟ್ಯಂತರ ರೂ. ಬೆಲೆ ಬಾಳುವ ಭೂಮಿ ಖರೀದಿಸಲು ಸಹಾಯ ಮಾಡಿದ್ದಾರೆ. ಸಂಸದ ಬಿ.ವೈ.ರಾಘವೇಂದ್ರ ಚುನಾವಣಾ ಆಯೋಗಕ್ಕೆ ಸುಳ್ಳು ಪ್ರಮಾಣ ಪತ್ರ ನೀಡಿದ್ದು, ಗಂಭೀರ ಲೋಪವೆಸಗಿದ್ದಾರೆ.
ಅವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡಬೇಕು ಎಂದು ಆಗ್ರಹಿಸಿದ ಜನಾರ್ದನ ಪೂಜಾರಿ, ಮಕ್ಕಳ ಅಭಿವೃದ್ಧಿಯನ್ನು ಯಡಿಯೂರಪ್ಪ ರಾಜ್ಯದ ಅಭಿವೃದ್ಧಿ ಎಂದು ಭಾವಿಸಿದ್ದಾರೆ ಎಂದು ಸಿಎಂ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.