ಬೆಂಗಳೂರಿಗರೆ ಭಯಪಡಬೇಡಿ : ಶಂಕರ ಬಿದರಿ
ಭಾನುವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಭೂಗತ ಪಾತಕಿಗಳನ್ನು ಸೆದೆಬಡಿಯಲು ಬೆಂಗಳೂರು ಪೊಲೀಸರು ಸಮರ್ಥರಾಗಿದ್ದಾರೆ ಎಂದರು. ನಗರದ ವಿಠ್ಠಲ್ ಮಲ್ಯ ರಸ್ತೆಯಲ್ಲಿರುವ ಮಂತ್ರಿ ಡೆವಪಲರ್ಸ್ ಸಂಸ್ಥೆಯ ಕಚೇರಿಯ ಮೇಲೆ ರವಿ ಪೂಜಾರಿಯ ಸಹಚರರು ಶನಿವಾರ ರಾತ್ರಿ ನಡೆಸಿದ ಪೂರ್ಣ ಮಾಹಿತಿಯನ್ನು ಬಿದರಿ ನೀಡಿದರು.
ದಾಳಿಯ ಹಿನ್ನೆಲೆಯಲ್ಲಿ ಪೊಲೀಸರು ಕ್ಷಿಪ್ರ ಕಾರ್ಯಾಚರಣೆ ನಡೆಸಿ ಎನ್ ಕೌಂಟರ್ ಮಾಡಿ ರವಿ ಪೂಜಾರಿಯ ಒಬ್ಬ ವ್ಯಕ್ತಿ ಚಂದ್ರು ಅಲಿಯಾಸ್ ಚಂದುನನ್ನು ಕೊಂದು ಹಾಕಲಾಯಿತು. ಗುಂಡು ಹಾರಿಸಿದ ಪ್ರಕರಣದ ಇನ್ನೊಬ್ಬ ಪ್ರಮುಖ ಆರೋಪಿ ತಲೆತಪ್ಪಿಸಿಕೊಂಡಿದ್ದು, ಆತನ ಬಂಧನಕ್ಕೆ ಮೂರು ವಿಶೇಷ ತಂಡಗಳನ್ನು ರಚಿಸಲಾಗಿದೆ ಎಂದು ಅವರು ವಿವರಿಸಿದರು.
ಘಟನೆ ವಿವರ : ಮಂತ್ರಿ ಹೌಸ್ ಕಚೇರಿ ಬಳಿಗೆ ಬಂದಿದ್ದ ರವಿ ಪೂಜಾರಿಯ ಇಬ್ಬರು ಬಂಟರು ರಾತ್ರಿ 9 ರಿಂದ 10 ಗಂಟೆ ಸುಮಾರಿಗೆ ರಿವಾಲ್ವರ್ನಿಂದ ಸುಮಾರು 6 ಸುತ್ತು ಬಾರಿ ಗುಂಡು ಹಾರಿಸಿ ರವಿ ಪೂಜಾರಿಯ ದುಬೈ ಸಂಪರ್ಕ ವಿಳಾಸವುಳ್ಳ ವಿಸಿಟಿಂಗ್ ಕಾರ್ಡ್ ಎಸೆದು ಪರಾರಿಯಾಗಿದ್ದರು. ಆಂಧ್ರಪ್ರದೇಶ ನೋಂದಣಿ ಸಂಖ್ಯೆಯುಳ್ಳ ಯಮಹಾ ಬೈಕನ್ನು ಕೃತ್ಯಕ್ಕೆ ಬಳಸಿದ್ದರು.
ಈ ಮಾಹಿತಿ ಆಧರಿಸಿ ದಾಳಿಕೋರರನ್ನು ಬೆನ್ನಟ್ಟಿದ ಪೊಲೀಸರು ರಾಮಮೂರ್ತಿನಗರದ ಹೊರಮಾವು ಬಳಿಯ ಅಗರ ರಸ್ತೆಯಲ್ಲಿ ಅವರನ್ನು ಅಡ್ಡಗಟ್ಟಿದರು. ಈ ಸಂದರ್ಭದಲ್ಲಿ ಪೊಲೀಸರು ಮತ್ತು ಪೂಜಾರಿಯ ಸಹಚರರ ನಡುವೆ ಗುಂಡಿನ ಚಕಮಕಿ ನಡೆಯಿತು. ಈ ವೇಳೆ ಪೂಜಾರಿಯ ಸಹಚರ ಚಂದ್ರು ಅಲಿಯಾಸ್ ಚಂದು ಎಂಬಾತನಿಗೆ ಗುಂಡೇಟು ಬಿದ್ದು ಸಾವನ್ನಪ್ಪಿದ. ಆದರೆ ಮತ್ತೊಬ್ಬ ಪರಾರಿಯಾದ. ಗುಂಡಿನ ಚಕಮಕಿಯಲ್ಲಿ ರಾಮಮೂರ್ತಿನಗರ ಇನ್ಸ್ಪೆಕ್ಟರ್ ಎನ್.ಮಹೇಶ್ ಗಾಯಗೊಂಡಿದ್ದಾರೆ.
ರಿಯಲ್ ಎಸ್ಟೇಟ್ ಉದ್ಯಮದ ಮಂತ್ರಿ ಡೆವಲಪರ್ಸ್ ಮುಖ್ಯಸ್ಥ ಸುಶೀಲ್ ಮಂತ್ರಿಗೆ ರವಿ ಪೂಜಾರಿ ಸಹಚರರು ಹಣ ನೀಡುವಂತೆ ತಿಂಗಳ ಹಿಂದೆ ಬೆದರಿಕೆ ಹಾಕಿದ್ದರು. ಅಲ್ಲದೆ, ಜಯನಗರದಲ್ಲಿರುವ 'ಸೋಮ್ಸ್ ಬಿಲ್ಡರ್ಸ್' ಸಂಸ್ಥೆಯ ಸಿಬ್ಬಂದಿಗೂ ರವಿ ಪೂಜಾರಿ ಸಹಚರರು ಬೆದರಿಕೆ ಹಾಕಿದ್ದರು. ಆದರೆ, ಈ ಬಗ್ಗೆ ಎರಡೂ ಬಿಲ್ಡರ್ಸ್ ಗಳು ಪೊಲೀಸರಿಗೆ ದೂರು ನೀಡಿರಲಿಲ್ಲ. ಘಟನಾ ಸ್ಥಳಕ್ಕೆ ನಗರ ಪೊಲೀಸ್ ಜಂಟಿ ಅಯುಕ್ತ ಅಲೋಕ್ ಕುಮಾರ್ ಆಗಮಿಸಿ, ಪರಿಶೀಲನೆ ನಡೆಸಿದ್ದಾರೆ. ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.