ದಾಂಪತ್ಯ ಕಲಹ : ಐಎಎಸ್ ಅಧಿಕಾರಿ ನೇಣಿಗೆ
ರಾಜಾ ಮುರುಗನ್(26) ನೇಣು ಹಾಕಿಕೊಂಡು ಮೃತಪಟ್ಟ ದುರ್ದೈವಿ. ರಾಜಾ ಮುರುಗನ್ ಆತ್ಮಹತ್ಯೆಗೆ ದಾಂಪತ್ಯ ಕಲಹವೇ ಕಾರಣ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ ಎಂದು ದಮನ್ ಪೊಲೀಸ್ ಆಯುಕ್ತ ಆರ್ ಪಿ ಮೀನಾ ತಿಳಿಸಿದ್ದಾರೆ. 2009ರ ಬ್ಯಾಚಿನ ಐಎಎಸ್ ಅಧಿಕಾರಿಯಾಗಿದ್ದ ರಾಜಾ ಮುರುಗನ್ ಮೂಲತಃ ತಮಿಳುನಾಡಿನವರು.
ತಮಿಳುನಾಡಿನ ನಿವೃತ್ತ ಪೊಲೀಸ್ ಮಹಾನಿರ್ದೇಶಕರ ಮಗಳು ಸಂಗೀತಾ ಎನ್ನುವವರನ್ನು ರಾಜಾ ಮುರುಗನ್ ಮದುವೆಯಾಗಿದ್ದರು. ಮುರುಗನ್ ಐಎಎಸ್ ಅಧಿಕಾರಿಯಾಗುವುದಕ್ಕೂ ಮುನ್ನ ವೆಟರ್ನರಿ ವೈದ್ಯರಾಗಿ ಕಾರ್ಯನಿರ್ವಹಿಸುತ್ತಿದ್ದರು. ಈ ಇಬ್ಬರ ನಡುವೆ ಆಗಾಗ ಜಗಳ ನಡೆಯುತ್ತಿತ್ತು. ಭಾನುವಾರ ರಾತ್ರಿ ಇಬ್ಬರ ನಡುವೆ ಜಗಳ ನಡೆದಿದೆ. ಜಗಳ ಕಾದ ಪತ್ನಿ ಸಂಗೀತಾ ಮನೆಯಿಂದ ಹೊರನಡೆದಿದ್ದಾರೆ. ಇದರಿಂದ ತೀವ್ರ ಬೇಸತ್ತು ರಾಜಾ ಮುರುಗನ್ ಅತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಸರಕಾರಿ ಅಧಿಕಾರಿಗಳ ವಸತಿ ನಿಲಯದಲ್ಲಿ ರಾಜಾ ಮುರುಗನ್ ವಾಸವಿದ್ದರು. ಶನಿವಾರದವರೆಗೂ ದಮನ್ ನಲ್ಲಿ ನಡೆದ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಚುನಾವಣಾಕಾರಿಯಾಗಿ ಅವರೂ ಕೆಲಸ ಮಾಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.