ಸಂಪುಟ ವಿಸ್ತರಣೆಗೆ ವರಿಷ್ಠರ ಗ್ರೀನ್ ಸಿಗ್ನಲ್
ಆದರೆ, ಸಂಪುಟಕ್ಕೆ ಯಾರೆಲ್ಲಾ ಸೇರುತ್ತಾರೆ ಎಂಬುದು ತೀವ್ರ ಕುತೂಹಲ ಕೆರಳಿಸಿದೆ. ಆಕಾಂಕ್ಷಿಗಳ ಪಟ್ಟಿ ಆಂಜನೇಯನ ಬಾಲವಾಗಿದ್ದು, ಯಾರಿಗೆ ಸಚಿವ ಸ್ಥಾನದ ಅದೃಷ್ಟ ಒಲಿದು ಬರಲಿದೆ ಎಂಬುದು ಗುಟ್ಟಾಗಿ ಉಳಿದಿದೆ. ಮಾಜಿ ಸಚಿವ ಎಸ್ ಕೆ ಬೆಳ್ಳುಬ್ಬಿ ಸಚಿವರಾಗುವುದು ಖಚಿತವಾಗಿದೆ. ಶೋಭಾ ಕರಂದ್ಲಾಜೆ, ವಿ ಸೋಮಣ್ಣ ಸಂಪುಟ ಸೇರ್ಪಜೆ ಖಾತ್ರಿ ಎಂದು ಬಿಜೆಪಿ ಮೂಲಗಳು ತಿಳಿಸಿವೆ.
ದಿಲ್ಲಿಯಲ್ಲಿ ಕಸರತ್ತು
ಸಂಪುಟ ವಿಸ್ತರಣೆಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ ಕೆ ಎಸ್ ಈಶ್ವರಪ್ಪ ಸೋಮವಾರ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ಗಡ್ಕರಿ ಹಾಗೂ ಹಿರಿಯ ನಾಯಕ ಎಲ್ ಕೆ ಅಡ್ವಾಣಿ ಅವರೊಂದಿಗೆ ಮಾತುಕತೆ ನಡೆಸಿದ್ದಾರೆ. ಈ ಮಧ್ಯೆ ಮುಂಬರುವ ದಿನಗಳಲ್ಲಿ ಜಿಲ್ಲಾ ಪಂಚಾಯತಿ ಮತ್ತು ತಾಲ್ಲೂಕು ಪಂಚಾಯತಿ ಚುನಾವಣೆಗಳು ಇರುವುದರಿಂದ ಸಂಪುಟ ವಿಸ್ತರಣೆ ಬೇಡ ಎಂದು ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅನಂತಕುಮಾರ ಅವರು ಅಡ್ಡಗಾಲು ಹಾಕಿದ್ದರು. ಈ ಬಗ್ಗೆಯೂ ಚರ್ಚೆ ನಡೆಸಲಾಗಿದೆ ಎಂದರು.
ಈ ಎಲ್ಲ ವಿಷಯಗಳನ್ನು ಇಂದು ಚರ್ಚಿಸಿದ ಮುಖ್ಯಮಂತ್ರಿಗಳು ಸೆ.22ರಂದೇ ಸಂಪುಟ ವಿಸ್ತರಣೆ ಮಾಡಲು ವರಿಷ್ಠರಿಂದ ಅನುಮತಿ ಪಡೆದುಕೊಂಡಿದ್ದಾರೆ ಎಂದು ಧನಂಜಯಕುಮಾರ ಸ್ಪಷ್ಟಪಡಿಸಿದ್ದಾರೆ. ಇತ್ತ ಬೆಂಗಳೂರಿನಲ್ಲಿ ಸಚಿವ ಸ್ಥಾನದ ಆಕಾಂಕ್ಷಿಗಳು ಹೆಚ್ಚಾಗಿದ್ದು, ಮುಖ್ಯಮಂತ್ರಿಗಳ ಮೇಲೆ ವಿವಿಧ ರೀತಿಯಲ್ಲಿ ಒತ್ತಡ ಹಾಕುತ್ತಿದ್ದಾರೆ.
ಬೇಳೂರು ಬಾಂಬ್
ಬೇಳೂರು ಗೋಪಾಲಕೃಷ್ಣ ಎಬ್ಬಿಸಿದ ಭಿನ್ನಮತದಿಂದ ದಿಗಿಲುಗೊಂಡಂತೆ ಕಂಡಿರುವ ಮುಖ್ಯಮಂತ್ರಿ ಮತ್ತು ಈಶ್ವರಪ್ಪ ಹಠಾತ್ತಾಗಿ ಬೆಂಗಳೂರಿಗೆ ದೌಡಾಯಿಸಿದ್ದಾರೆ. ಸಚಿವ ಸ್ಥಾನ ನೀಡದಿದ್ದರೆ ಮಂಗಳವಾರ 20 ಶಾಸಕರು ರಾಜ್ಯಪಾಲರಿಗೆ ರಾಜೀನಾಮೆ ನೀಡುವುದಾಗಿ ಇಂದು ಘೋಷಣೆ ಮಾಡಿದ್ದಾರೆ. ಆದರೆ, 20 ಮಂದಿ ಶಾಸಕರು ಯಾರು ಎಂಬುದು ತಿಳಿದಿಲ್ಲ. ಹೊಸದಾಗಿ ಹುಟ್ಟಿಕೊಂಡಿರುವ ಭಿನ್ನಮತದ ಗುಂಪಿಗೆ ಅಬಕಾರಿ ಸಚಿವ ರೇಣುಕಾಚಾರ್ಯ ಕ್ಯಾಪ್ಟನ್ ಎಂದು ಬೇಳೂರು ಗೋಪಾಲಕೃಷ್ಣ ಹೇಳಿದ್ದಾರೆ.
ಇನ್ನೊಂದಡೆ ಹಗರಣದಲ್ಲಿ ಸಿಲುಕಿರುವ ಶಿವನಗೌಡ ನಾಯಕ್ ಸಚಿವ ಸ್ಥಾನ ರಾಜೀನಾಮೆ ನೀಡಲು ಸಿದ್ಧರಿಲ್ಲ. ಅನಂದ್ ಅಸ್ನೋಟಿಕರ್ ಅವರದೂ ಇದೇ ಹಾಡು. ಆದರೆ, ಗೂಳಿಹಟ್ಟಿ ಶೇಖರ್ ಅವರದು ಇನ್ನೊಂದು ತರದ ಬ್ಲ್ಯಾಕ್ ಮೇಲ್. ರಾಜೀನಾಮೆ ಕೇಳಿದರೆ ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂಬ ಬೆದರಿಕೆ ಬೇರೆ. ರವೀಂದ್ರನಾಥ ಅವರನ್ನು ಸಂಪುಟದಿಂದ ಕೈಬಿಡಬಾರದು ಎಂದು ದಾವಣಗೆರೆಯ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ. ಒಟ್ಟಿನಲ್ಲಿ ಸಂಪುಟ ವಿಸ್ತರಣೆ ತೀವ್ರ ಗೊಂದಲಕ್ಕೆ ಎಡೆ ಮಾಡಿಕೊಟ್ಟಿದೆ.