ಮಂತ್ರಾಲಯ ಮಠದಲ್ಲಿ ಅವ್ಯವಹಾರ!

ಹಿಂದಿನ ಶ್ರೀಗಳಾದ ಸುಶಮೀಂದ್ರ ತೀರ್ಥರು ಪ್ರಜ್ಞಾಹೀನರಾಗಿದ್ದ ವೇಳೆ ಸುಯತೀಂದ್ರ ತೀರ್ಥರಿಗೆ ಯಾವುದೇ ಧಾರ್ಮಿಕ ವಿಧಿ ವಿಧಾನವಿಲ್ಲದೆ ಅಧಿಕಾರ ಹಸ್ತಾಂತರಿಸಿ ಸ್ವಾಮೀಜಿಗಳನ್ನು ಬ್ಲ್ಯಾಕ್ ಮೇಲ್ ಮಾಡುತ್ತಿದ್ದಾರೆಂದು ಶ್ರೀ ಮಠದ ಸಿಬ್ಬಂದಿ ಹಿತರಕ್ಷಣಾ ಸಮಿತಿಯ ಪದಾದಿಕಾರಿಗಳು ಆರೋಪಿಸಿದ್ದಾರೆ.
ಆನಂದ್ ರಾವ್ ನಿವೃತ್ತರಾಗಿ ವರ್ಷಗಳೇ ಕಳೆದಿದ್ದರೂ ಈಗಲೂ ಮಠದ ಆಂತರಿಕ ವಿಚಾರಗಳಿಗೆ ಕೈಹಾಕಿ ಅನೇಕ ಅನಾಚಾರಗಳಿಗೆ ಕಾರಣರಾಗಿದ್ದಾರೆ. ಈಗಿನ ಸ್ವಾಮೀಜಿಗಳಾದ ಸುಯತೀಂದ್ರತೀರ್ಥರು ಮತ್ತು ಅವರ ಪುತ್ರ ಸುಯಮೀಂದ್ರ ಆಚಾರ್ಯ ಆನಂದ್ ರಾವ್ ಅವರಿಗೆ ಸಂಪೂರ್ಣ ಸಹಕಾರ ನೀಡುತ್ತಿದ್ದಾರೆಂದು ಗಂಭೀರವಾಗಿ ಆರೋಪಿಸಲಾಗಿದೆ.
ಇತ್ತೀಚಿಗೆ ಮಠದ ಆಸ್ತಿಯ ಹೋಟೆಲ್ ಒಂದನ್ನು ಅಕ್ರಮವಾಗಿ ಬಾಡಿಗೆಗೆ ನೀಡಿ ಬಾಡಿಗೆದಾರನ ಮೇಲೆ ದೌರ್ಜನ್ಯ ನಡೆಸಿದ್ದಾರೆ. ಇದರಿಂದ ಬಾಡಿಗೆದಾರ ಆತ್ಮಹತ್ಯೆಗೆ ಯತ್ನಿಸಿ ತನ್ನ ಎರಡೂ ಕಣ್ಣುಗಳನ್ನು ಕಳೆದುಕೊಂಡಿದ್ದಾನೆ ಎಂದು ಸಮಿತಿ ಹೇಳಿಕೆ ನೀಡಿದೆ.
ಇಷ್ಟೇ ಅಲ್ಲದೆ ಆನಂದ್ ರಾವ್ ಹುಬ್ಬಳ್ಳಿಯ ಭಕ್ತವೃಂದಕ್ಕೆ ಅವಮಾನ ಮಾಡಿದ್ದಾರೆ. ಹುಬ್ಬಳ್ಳಿಯ ಶಾಖಾ ಮಠದಲ್ಲಿ ಅನಾಚಾರವೆಸಗಿದ್ದಾರೆ. ಸುಜಯೀಂದ್ರ ತೀರ್ಥರ ಕುಟುಂಬದವರಿಗೆ ಚಿತ್ರಹಿಂಸೆ ನೀಡುತ್ತಿದ್ದಾರೆ. ಸೆಪ್ಟಂಬರ್ 9ರ ಬೆಳಿಗ್ಗೆ 7 ಗಂಟೆಯಿಂದ ಮಠದ ಮಹಾದ್ವಾರದ ಮುಂದೆ ಧರಣಿ ನಡೆಸಲಾಗುವುದು.
ವಿವಿಧ ಕಡೆಯಿಂದ ಸುಮಾರು 300 ಕ್ಕೂ ಹೆಚ್ಚು ಭಕ್ತರು ಧರಣಿಯಲ್ಲಿ ಭಾಗವಹಿಸಲಿದ್ದಾರೆ. ನಮ್ಮ ಬೇಡಿಕೆಗೆ ಸ್ಪಂದಿಸದಿದ್ದಲ್ಲಿ ಆಂಧ್ರಪ್ರದೇಶದಲ್ಲಿ ಕಾನೂನು ಹೋರಾಟ ನಡೆಸಲಾಗುವುದು ಸಮಿತಿಯ ಅಧ್ಯಕ್ಷರು ಮಾಧ್ಯಮಗಳ ಮೂಲಕ ಎಚ್ಚರಿಕೆ ನೀಡಿದ್ದಾರೆ.











Click it and Unblock the Notifications