ತಾಳಿ ಕಟ್ಟುವ ಶುಭ ವೇಳೆಗೆ ಅಕ್ಕಿಕಾಳು ಏಕೆ?
ಚಿತ್ರದುರ್ಗದ ಮುರುಘಾಮಠದ ಶ್ರೀ ಶಿವಮೂರ್ತಿ ಶರಣರು ತಮ್ಮ ಮಠದಲ್ಲಿ ಪ್ರತಿ ತಿಂಗಳ 5 ತಾರೀಖಿನಂದು ಮದುವೆ ಮಾಡುತ್ತಾರೆ. ಮದುವೆಯಲ್ಲಿ ಅಕ್ಕಿ ಕಾಳಿನ ಬದಲು ಹೂವುಗಳನ್ನು ಬಳಸುತ್ತಾರೆ. ಆಹಾರ ಪದಾರ್ಥವಾಗಿರುವ ಅಕ್ಕಿಯನ್ನು ಹೀಗೆ ನೆಲೆದ ಮೇಲೆ ಹಾಕಿದ ತುಳಿಯುವುದು ಸರಿಯಲ್ಲ. 12 ನ ಶತಮಾನದ ಮಹಿಮಾಪುರುಷ ಜಗಜ್ಯೋತಿ ಬಸವಣ್ಣ ಆಗಿನ ಕಾಲದಲ್ಲೇ ಈ ಬಗ್ಗೆ ಜನಸಾಮಾನ್ಯರಲ್ಲಿ ತಿಳಿವಳಿಕೆ ಮೂಡಿಸಲು ಪ್ರಯತ್ನಿಸಿದರು ಎನ್ನುವುದು ಶರಣರ ವಾದ. ಶರಣರ ಈ ವರ್ತನೆಗೆ ಸಂಪ್ರದಾಯವಾದಿಗಳಿಂದ ತೀವ್ರ ವಿರೋಧ ವ್ಯಕ್ತವಾಗಿದೆ, ಅದು ಮುಂದೂವರಿದಿದೆ.
ಇದೇ ರೀತಿಯಲ್ಲಿ ಮದುವೆ ಮಂಟಪಗಳಲ್ಲಿ ಅಕ್ಕಿಕಾಳುಗಳನ್ನು ಬಳಸಬಾರದು ಎಂದು ಥಾಣೆಯ ಯುವಕನೊಬ್ಬ ಹೋರಾಟ ಆರಂಭಿಸಿದ್ದಾನೆ. 2007ರಿಂದ ಈ ಹೋರಾಟ ಆರಂಭಿಸಿರುವ ರಾಹುಲ್ ಪ್ರಕಾಶ ಸುವರ್ಣ ಈವರೆಗೆ ಮದುವೆ ಮಂಟಪಗಳಿಂದ ಸುಮಾರು 30 ಸಾವಿರ ಟನ್ ಅಕ್ಕಿಯನ್ನು ಕಲೆ ಹಾಕಿದ್ದಾನೆ. ಆಹಾರಕ್ಕಾಗಿ ಬಳಸುವ ಅಕ್ಕಿಯನ್ನು ಮದುವೆಯಲ್ಲಿ ಬಳಸಿ ಹಾಳು ಮಾಡುವುದೇಕೆ ಎಂದು ಸುವರ್ಣ ಅವರ ಪ್ರಶ್ನೆ.
ಮದುವೆಗಳಲ್ಲಿ ಅಕ್ಕಿಕಾಳುಗಳನ್ನು ಹಾಳು ಮಾಡುತ್ತಿರುವುದು ನನ್ನ ಸಹೋದರನ ಮದುವೆಯಲ್ಲಿ ತಿಳಿಯಿತು. ಇದನ್ನು ಹೇಗಾದರೂ ಮಾಡಿ ತಡೆಯಬೇಕು ಎಂದು ನಿಶ್ಚಯಿಸಿ ಅಂದಿನಿಂದಲೇ ಕಾರ್ಯಪ್ರವೃತ್ತನಾದೆ. ಇದಕ್ಕೆ ಮನೆಯವರಿಂದ ತೀವ್ರ ವಿರೋಧ ವ್ಯಕ್ತವಾಯಿತು. ಇದರಿಂದ ನಾನು ಸುಮಾರು 6 ದಿನಗಳ ಕಾಲ ಮನೆಯಲ್ಲಿ ಉಪವಾಸ ನಡೆಸಿದೆ. ನನ್ನ ಹೋರಾಟ ಮನೆಯವರಿಗೆ ಅರ್ಥವಾದ ನಂತರ ಅವರೆಲ್ಲರೂ ನನ್ನನ್ನು ಬೆಂಬಲಿಸತೊಡಗಿದರು.
ಅಕ್ಕಿ ಬೆಲೆ ಕೇಳಿದರೆ ಗಾಬರಿಯಾಗುತ್ತದೆ. ಉಳ್ಳವರು ಹೇಗೂ ನಿಭಾಯಿಸುತ್ತಾರೆ ಆದರೆ, ಬಡವರಿಗೆ ಇಂದಿಗೂ ಆಹಾರಕ್ಕಾಗಿ ಪರದಾಡು ನಡೆಯುತ್ತಿರುವ ವರದಿಗಳು ಆಗುತ್ತಲೇ ಇವೆ. ಕಳೆದ ಮೂರು ವರ್ಷಗಳಿಂದ ನನ್ನ ಅಕ್ಕಿ ಉಳಿಸಿ ಎಂಬ ಚಳವಳಿಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಮದುವೆ ಮಂಟಪಗಳಿಗೆ ತೆರಳಿ ಅಲ್ಲಿನ ಹಿರಿಯರಿಗೆ ಅಕ್ಕಿ ಮಹತ್ವದ ಬಗ್ಗೆ ತಿಳಿವಳಿಕೆ ಮಾಡಿಕೊಡುತ್ತೇನೆ. ಕೆಲವರು ನನ್ನ ಸಲಹೆಯನ್ನು ಕೇಳುತ್ತಾರೆ. ಕೆಲ ಕಠೋರ ಸಂಪ್ರದಾಯವಾದಿಗಳಿಗೆ ಕೆಂಗಣ್ಣಿಗೆ ಗುರಿಯಾಗಿದ್ದೇನೆ. ಅಷ್ಟೇ ಅಲ್ಲ ಅವರಿಂದ ಏಟು ತಿಂದಿರುವುದಾಗಿ ಸುವರ್ಣ ವಿವರಿಸುತ್ತಾರೆ.
ಮೂರು ವರ್ಷದಲ್ಲಿ 30 ಸಾವಿರ ಟನ್ ಅಕ್ಕಿಯನ್ನು ಉಳಿಸಿರುವ ಸುವರ್ಣ ಅವರ ಕೆಲಸ ಶ್ಲಾಘನೀಯ ಎಂದು ಕೆಲ ಎನ್ ಜಿಓಗಳು ಬೆನ್ನುತಟ್ಟಿವೆ. ಮಹಾರಾಷ್ಟ್ರದ ಸಮಾಜ ಕಲ್ಯಾಣ ಇಲಾಖೆ ಸಹ ಮೆಚ್ಚುಗೆ ಮಾತನಾಡಿದ್ದು, ಸಾಮೂಹಿಕ ಮದುವೆಗಳು ಸೇರಿ ಮದುವೆ ಮಂಟಪಗಳಲ್ಲಿ ಅಕ್ಕಿಕಾಳುಗಳನ್ನು ಬಳಸುವುದನ್ನು ಕೈಬಿಡಬೇಕು ಎಂದು ಮಹಾರಾಷ್ಟ್ರ ಸಮಾಜ ಕಲ್ಯಾಣ ಇಲಾಖೆ ಸಚಿವ ರಾಮ್ ಮಿರಾಸೆ ಹೇಳುತ್ತಾರೆ. ಒಟ್ಟಿನಲ್ಲಿ ಆಹಾರಧಾನ್ಯಗಳ ಬೆಲೆಗಳು ಗಗನಕ್ಕೇರಿರುವ ಈ ಸಂದರ್ಭದಲ್ಲಿ ಸುವರ್ಣ ಅವರು ಮಾಡುತ್ತಿರುವ ಕೆಲಸಕ್ಕೆ ಬೆಂಬಲಿಸುವ ಬಗ್ಗೆ ಯೋಚಿಸಬೇಕಿದೆ.