ಟೆಕ್ಕಿಯಿಂದಲೇ ಇನ್ನೊಬ್ಬ ಟೆಕ್ಕಿಗೆ ಮೋಸ
ನಗರದ ಪ್ರತಿಷ್ಠಿತ ಸಾಫ್ಟ್ ವೇರ್ ಕಂಪನಿಯಲ್ಲಿ ಪ್ರೊಜೆಕ್ಟ್ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿರುವ ಸುರೇಶ್ ಪಿ ಮೆನನ್ ತನ್ನ ಕೈಕೆಳಗೆ ಕೆಲಸ ಮಾಡುವ ಸೀನಿಯರ್ ಮ್ಯಾನೇಜರ್ ಕುಲ್ಮನ್ ಕುರಿಯನ್ ನಿಂದ ತೆಗೆದುಕೊಂಡಿದ್ದ 6 ಲಕ್ಷ ರುಪಾಯಿ ಸಾಲ ನೀಡಲು ಸತಾಯಿಸಿದ್ದಾನೆ. ಅಲ್ಲದೇ ಹಣಕ್ಕಾಗಿ ಪೀಡಿಸಿದರೆ ನಿನ್ನ ಹೆಸರಿನ ಮೇಲೆ ಪತ್ರ ಬರೆದಿಟ್ಟು ಅತ್ಮಹತ್ಯೆ ಮಾಡಿಕೊಳ್ಳುವ ಬೆದರಿಕೆ ಹಾಕಿದ ಘಟನೆ ನಡೆದಿದೆ.
2006ರಲ್ಲಿ ಕುರಿಯನ್ ಕಂಪನಿಗೆ ಸೇರಿಕೊಂಡಿದ್ದಾನೆ. ಪ್ರೊಜೆಕ್ಟ್ ಮ್ಯಾನೇಜರ್ ಆಗಿರುವ ಸುರೇಶ್ ಪಿ ಮೆನನ್ ಅಮೆರಿಕಕ್ಕೆ ತೆರಳಬೇಕಾಗಿದೆ. ಹೀಗಾಗಿ ಕುರಿಯನ್ ನಿಂದ ಹಣ ಪಡೆದ ಮೆನನ್ ತಿಂಗಳೊಳಗೆ ಮರಳಿ ನೀಡುವುದಾಗಿ ಭರವಸೆ ನೀಡಿದ್ದ. ಕುರಿಯನ್ ನೀಡದ ಹಣವನ್ನು ಕೇಳಿದಾಗ ಸದ್ಯಕ್ಕೆ ಹಣ ಇಲ್ಲ, ಕೆಲ ತಿಂಗಳ ನಂತರ ನೀಡುವೆ ಎಂದು ಮೆನನ್ ಸಾಗಹಾಕಿದ್ದಾನೆ.
ಕೆಲ ತಿಂಗಳ ನಂತರ ಕುರಿಯನ್ ಹಣ ಕೇಳಿದ್ದಾನೆ. ಆದರೆ, ಮೆನನ್ ನನ್ನಲ್ಲಿ ಹಣವಿಲ್ಲ. ಹಣಕ್ಕಾಗಿ ಪೀಡಿಸಿದರೆ ನಿನ್ನ ಹೆಸರಿನಲ್ಲಿ ಪತ್ರ ಬರೆದಿಟ್ಟು ಅತ್ಮಹತ್ಯೆ ಮಾಡಿಕೊಳ್ಳುವ ನಾಟಕವಾಡಿದ್ದಾನೆ. ಇದರಿಂದ ಬೇಸತ್ತ ಕುರಿಯನ್ ಕಂಪನಿಯ ಆಡಳಿತ ಮಂಡಳಿಯ ಗಮನಕ್ಕೆ ತಂದಿದ್ದಾನೆ. ಆಡಳಿತ ಮಂಡಳಿಯ ಮಧ್ಯಸ್ಥಿಕೆಯಿಂದಾಗಿ ಕುರಿಯನ್ ಗೆ ಹಣ ನೀಡುವುದಾಗಿ ಹೇಳಿದ ಮೆನನ್ 7 ಲಕ್ಷ ರುಪಾಯಿ ಚೆಕ್ ನೀಡಿದ.
ಆದರೆ, ಚೆಕ್ ಬೌನ್ಸ್ ಆಗಿದ್ದು ಗೊತ್ತಾಗುತ್ತಿದ್ದತೆಂಯೇ ಕುರಿಯನ್ ಮತ್ತೊಮ್ಮೆ ಕಂಪನಿಯ ಆಡಳಿತ ಮಂಡಳಿಯ ಮೊರೆಗೆ ಹೋಗಿದ್ದಾನೆ. ಆದರೆ, ಅಲ್ಲಿ ಕುರಿಯನ್ ಗೆ ನ್ಯಾಯ ಸಿಕ್ಕಿಲ್ಲ. ಹೀಗಾಗಿ ಪುಲಿಕೇಶಿ ನಗರ ಪೊಲೀಸ್ ಠಾಣೆ ಮೆಟ್ಟಿಲೇರಿರುವ ಕುರಿಯನ್, ಮೆನನ್ ವಿರುದ್ಧ ವಂಚನೆಗೆ ಸಂಬಂಧಿಸಿದ ಪ್ರಕರಣವನ್ನು ದಾಖಲಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ತನಿಖೆ ಆರಂಭಿಸಿದ್ದಾರೆ.