ಹಿರಿಯ ಪತ್ರಕರ್ತರಿಗೆ ಅಭಿಮಾನದ ಸುರಿ'ಮಳೆ'
ದೇಶದಲ್ಲೇಯೇ ಅತ್ಯುತ್ತಮ ಪ್ರೆಸ್ ಕ್ಲಬ್ ಗಳಲ್ಲೊಂದು ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಬೆಂಗಳೂರು ಪ್ರೆಸ್ ಕ್ಲಬ್ 40 ವರ್ಷ ಪೂರೈಸಿದ ಸಂದರ್ಭದಲ್ಲಿ ಅರವತ್ತು ವರ್ಷ ದಾಟಿದ ಪತ್ರಿಕೋದ್ಯಮದ ಅರವತ್ತು ಹಿರಿಯ ಜೀವಗಳನ್ನು ಗೌರವಿಸಿದ್ದು ಅರ್ಥಪೂರ್ಣವಾಗಿತ್ತು.
ಪತ್ರಿಕೋದ್ಯಮ ಅಷ್ಟೊಂದು ತಾಂತ್ರಿಕವಾಗಿ ಮುಂದುವರಿಯದಿದ್ದ ಕಾಲಘಟ್ಟದಲ್ಲಿ ಅವಿಶ್ರತವಾಗಿ ಗೈಮೆಗೈದ ಹಿರಿಯ ಪತ್ರಕರ್ತರಲ್ಲಿ ಉತ್ಸಾಹ ಮೇರೆ ಮೀರಿತ್ತು. ಬಹುದಿನಗಳಿಂದ ಕಣ್ಣಿಂದ ದೂರವಾಗಿದ್ದ ಅಂದಿನ ಸ್ನೇಹಿತರನ್ನು, ಅವರ ಕುಟುಂಬದವರನ್ನು ಆತ್ಮೀಯವಾಗಿ ಮಾತನಾಡಿಸಿದ ಸಂದರ್ಭ ಅದಾಗಿತ್ತು. ಸನ್ಮಾನಿತರಾಗುತ್ತಿದ್ದ ಅನೇಕ ಹಿರಿಯರಿಗೆ 'ವೆಲ್ ಡನ್', 'ಕೀಪ್ ಇಟ್ ಅಪ್', 'ಸ್ಮೈಸ್ ಮಾಡೋ' ಎಂದು ವೇದಿಕೆಯ ಕೆಳಗಿನಿಂದ ಸ್ನೇಹಿತರು ಹುರಿದುಂಬಿಸುತ್ತಿದ್ದುದು ಅವರ ಉತ್ಸಾಹವನ್ನು ಮತ್ತಷ್ಟು ಹೆಚ್ಚಿಸುತ್ತಿತ್ತು.
ಪ್ರಹ್ಲಾದ ಕುಳಲಿ, ಸಚ್ಚಿದಾನಂದ ಮೂರ್ತಿ, ಆರ್ ಪಿ ಜಗದೀಶ್, ಜಯರಾಮ ಅಡಿಗ, ರಂಗಣ್ಣ, ಡಾ. ವಿಜಯ, ಅರ್ಜುನ್ ದೇವ, ಮುಂಜಾನೆ ಸತ್ಯ, ವೆಂಕಟನಾರಾಯಣ ಮುಂತಾದ ಪತ್ರಕರ್ತರನ್ನು ಶಾಲು, ಬೆಳ್ಳಿ ತಟ್ಟೆ ಮತ್ತು ಪ್ರಮಾಣಪತ್ರ ನೀಡಿ ಸನ್ಮಾನಿಸಲಾಯಿತು. ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ, ಪ್ರವಾಸೋದ್ಯಮ ಸಚಿವ ಜನಾರ್ದನ ರೆಡ್ಡಿ ಭಾಗವಹಿಸಿದ್ದರು. ಮಾಜಿ ಸಚಿವೆ ಶೋಭಾ ಕರಂದ್ಲಾಜೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಈ ಸಂದರ್ಭದಲ್ಲಿ ಮಾತನಾಡಿದ ಯಡಿಯೂರಪ್ಪ ಅವರು, ಪತ್ರಕರ್ತರಿಗೆ ಆರೋಗ್ಯ ವಿಮೆ ಮಾಡಿಸುವ ಕುರಿತು ಚಿಂತಿಸಲಾಗುತ್ತಿದೆ, ಹಿರಿಯ ಪತ್ರಕರ್ತರಿಗೆ ನೀಡುವ ಮಾಶಾಸನವನ್ನು ಸಾವಿರದಿಂದ ಎರಡು ಸಾವಿರಕ್ಕೆ ಹೆಚ್ಚಿಸಲಾಗುವುದು, ಸ್ವಂತ ಕಟ್ಟಡವಿಲ್ಲದ ಬೆಂಗಳೂರು ಪ್ರೆಸ್ ಕ್ಲಬ್ ಗೆ ಸ್ವಂತ ಕಟ್ಟಡ ಕಟ್ಟಲು ನಿವೇಶನ ಮಂಜೂರು ಮಾಡಲಾಗುವುದು, ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಪತ್ರಿಕಾ ಭವನ ಕಟ್ಟಲು 25 ಲಕ್ಷ ರು. ಮಂಜೂರು ಮಾಡಲಾಗುವುದು ಎಂದು ನುಡಿದರು.
ಗ್ಯಾಲರಿ : ಹಿರಿಯ ಪತ್ರಕರ್ತರಿಗೆ ಆತ್ಮೀಯ ಸನ್ಮಾನ