ನೋ ಡಿಸಿಎಂ ಎಂದ ಯಡಿಯೂರಪ್ಪ

ಭಾನುವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಉಪಮುಖ್ಯಮಂತ್ರಿ ಹುದ್ದೆ ರಚನೆ ಬಗ್ಗೆ ಮಾಧ್ಯಮಗಳಲ್ಲಿ ಪ್ರಕಟವಾಗಿರುವ ವರದಿ ಬಗ್ಗೆ ಯಾವುದೇ ಆಧಾರ ಇಲ್ಲ. ಇದು ಕೇವಲ ಉಹಾಪೋಹ ಎಂದರು. ನಾನು ಇನ್ನೂ ಮೂರು ವರ್ಷ ಮುಖ್ಯಮಂತ್ರಿಯಾಗಿರುವವರೆಗೂ ಉಪಮುಖ್ಯಮಂತ್ರಿ ಹುದ್ದೆ ಇರುವುದಿಲ್ಲ ಎಂದು ಹೇಳಿದರು.
ಒಂದಂತೂ ಸ್ಪಷ್ಟ, ಉಪಚುನಾವಣೆ ಬಳಿಕ ಸಚಿವ ಸಂಪುಟ ವಿಸ್ತರಣೆ ಮಾಡುತ್ತೇನೆ. ಅಕ್ರಮ ಗಣಿಗಾರಿಕೆಗೆ ಸಂಬಂಧಿಸಿದಂತೆ ಲೋಕಾಯುಕ್ತರು ನೀಡಿರುವ ಹೇಳಿಕೆಯನ್ನು ಗಮನಿಸಿದ್ದೇನೆ. ಈ ಸಂಬಂಧ ನಾಳೆ ಬೆಂಗಳೂರಿನಲ್ಲಿ ಅರಣ್ಯ ಅಧಿಕಾರಿಗಳ ಸಭೆ ಕರೆದು ಚರ್ಚೆ ಮಾಡುವುದಾಗಿ ಯಡಿಯೂರಪ್ಪ ಹೇಳಿದರು.
ಅಕ್ರಮ ಗಣಿಗಾರಿಕೆಯಲ್ಲಿ ಮಾಜಿ ಮುಖ್ಯಮಂತ್ರಿ ಧರ್ಮಸಿಂಗ್ ಪಾತ್ರ ಇರುವ ಬಗ್ಗೆ ನನ್ನಲ್ಲಿ ದಾಖಲೆಗಳಿವೆ. ಅವರು ಯಾವುದೇ ತಪ್ಪು ಮಾಡಿಲ್ಲ ಎನ್ನುವುದೇ ಆದರೆ ದಾಖಲೆಗಳನ್ನು ಬಹಿರಂಗ ಮಾಡಲಿ ಎಂದು ಮುಖ್ಯಮಂತ್ರಿ ಪ್ರತಿ ಸವಾಲು ಹಾಕಿದರು. ಈಗ ಸರಕಾರದ ಮುಂದಿರುವ ಆಧ್ಯತೆಯೆಂದರೆ ಒಂದು ನೆರೆಸಂತ್ರಸ್ಥರಿಗೆ ಮನೆಗಳನ್ನು ಕಟ್ಟಿಕೊಡುವುದು. ಅಕ್ರಮ ಗಣಿಗಾರಿಕೆಗೆ ಕಡಿವಾಣ ಹಾಕುವುದು. ಇವೆಲ್ಲವೂ ಮುಗಿದ ನಂತರ ಸಚಿವ ಸಂಪುಟ ರಚನೆಗೆ ಕೈಹಾಕುವುದಾಗಿ ಹೇಳಿದರು.
ಹಗರಣದಲ್ಲಿ ಸಿಲುಕಿರುವ ಶಿವನಗೌಡ ನಾಯಕ, ಆನಂದ್ ಅಸ್ನೋಟಿಕರ್, ರಾಮಚಂದ್ರಗೌಡ ಹಾಗೂ ಕಳಪೆ ಸಾಧನೆ ಮಾಡಿರುವ ಎಸ್ ಎ ರವೀಂದ್ರನಾಥ ಅವರನ್ನು ಸಂಪುಟದಿಂದ ಕೈಬಿಡುವುದು ಬಹುತೇಕ ಖಚಿತವಾಗಿದೆ. ವಿ ಸೋಮಣ್ಣ, ಶೋಭಾ ಕರಂದ್ಲಾಜೆ, ಸಿಟಿ ರವಿ, ಆನೇಕಲ್ ನಾರಾಯಣಸ್ವಾಮಿ, ಸೊಗಡು ಶಿವಣ್ಣ, ಅಪ್ಪಚ್ಚು ರಂಜನ್, ರಾಮದಾಸ್ ಮತ್ತು ವಿಜಯಶಂಕರ್ ಅವರಿಗೆ ಸಚಿವ ಸ್ಥಾನ ಲಭಿಸುವ ಸಾಧ್ಯತೆ ಇದೆ.
ಮುಖ್ಯಮಂತ್ರಿಗೆ ಪರ್ಯಾಯವಾಗಿ ಉಪಮುಖ್ಯಮಂತ್ರಿ ಹುದ್ದೆಯನ್ನು ಸೃಷ್ಟಿಸುವ ಸಾಧ್ಯತೆ ದಟ್ಟವಾಗಿದೆ ಎಂದು ಪ್ರಮುಖ ಮಾಧ್ಯಮವೊಂದರಲ್ಲಿ ವರದಿಯೊಂದು ಪ್ರಕಟವಾಗಿತ್ತು. ಸೆ.13 ರಂದು ಉಪಚುನಾವಣೆ ನಡೆಯಲಿದೆ. ಸೆ. 16 ರಂದು ಪಲಿತಾಂಶ ಪ್ರಕಟವಾಗಲಿದೆ.











Click it and Unblock the Notifications