ಆಟೋ ಚಾಲಕರಿಗೆ ಪಾಠ ಕಲಿಸಲು ಒಂದು ದಿನ ಸಾಕೆ?
ಪ್ರತಿದಿನ ಮನೆಯಿಂದ ಕಚೇರಿಗೆ, ಕಚೇರಿಯಿಂದ ಮನೆಗೆ ತಲುಪಲು ಆಟೋ ರಿಕ್ಷಾವನ್ನು ನೆಚ್ಚಿಕೊಂಡಿದ್ದ ಸಾರ್ವಜನಿಕರು ಇಂದು ಒಂದು ದಿನದ ಮಟ್ಟಿಗಾದರೂ ಗಟ್ಟಿ ಮನಸ್ಸು ಮಾಡಿ ಆಟೋಗೆ ಗುಡ್ ಬೈ ಹೇಳಿದ್ದಾರೆ. ಕಚೇರಿ ತಲುಪಲು ಬಸ್ ಹತ್ತಿದ್ದಾರೆ, ಬೈಕನ್ನೇರಿದ್ದಾರೆ, ಕಾರ್ ಪೂಲ್ ಮಾಡಿಕೊಂಡಿದ್ದಾರೆ, ಕೆಲವರು ನಡೆದೇ ಬಂದಿದ್ದಾರೆ.
ಇಂಟರ್ನೆಟ್ ಜಾಲಾಡದವರು, ಈ ಅಭಿಯಾನದ ಬಗ್ಗೆ ಗೊತ್ತಿಲ್ಲದವರು ಆಟೋ ಹತ್ತಿರುವುದು ನಗರದಲ್ಲಿ ಅನೇಕ ಕಡೆಗಳಲ್ಲಿ ಕಂಡುಬಂದರೂ, ಪ್ರಯಾಣಿಕರಿಗಾಗಿ ಆಟೋ ಚಾಲಕರು ಕಾದು ಕುಳಿತ ದೃಶ್ಯ ಅನೇಕ ಕಡೆಗಳಲ್ಲಿ ಕಂಡುಬಂದಿದೆ. ಬಿಎಂಟಿಸಿ ಕೂಡ ಬಸ್ಸುಗಳ ಸಂಖ್ಯೆಯನ್ನು ಇಂದು ಹೆಚ್ಚಿಸಿದ್ದು ಪ್ರಯಾಣಿಕರಿಗೆ ಅನುಕೂಲವಾಗಿತ್ತು. ಇದು ವಾಹನ ದಟ್ಟಣೆಗಳಿಗೆ ಕೂಡ ಕಾರಣವಾಗಿದೆ.
ಪ್ರತಿದಿನ ಆಟೋದಲ್ಲಿ ಪ್ರಯಾಣಿಸುವವರು, ಆಟೋ ಚಾಲಕರ ದಾರ್ಷ್ಟ್ಯಕ್ಕೆ ಗುರಿಯಾದವರು ದೇಶದಾದ್ಯಂತ ಒಂದಾಗಿರುವುದು ಇದೇ ಮೊದಲ ಬಾರಿ. ಆಟೋ ಚಾಲಕರ ದಾದಾಗಿರಿಗೆ ಇದೇ ನಾವು ನೀಡುತ್ತಿರುವ ತಕ್ಕ ಉತ್ತರ ಎಂಬುದು ಪ್ರಯಾಣಿಕರೊಬ್ಬರ ಅಭಿಪ್ರಾಯ. ಈ ಅಭಿಯಾನ ಪ್ರಾರಂಭಿಸಿದ ಮೀಟರ್ ಜಾಮ್ ಅಂತರ್ಜಾಲ ತಾಣದಲ್ಲಿ 38 ಸಾವಿರಕ್ಕೂ ಹೆಚ್ಚಿನ ನೆಟ್ಟಿಗರು ಬೆಂಬಲ ಸೂಚಿಸಿದ್ದಾರೆ. ಫೇಸ್ ಬುಕ್ ಮತ್ತು ಟ್ವಿಟ್ಟರ್ ಗಳಲ್ಲಂತೂ ಇದರದೇ ಚಿಲಿಪಿಲಿ.
ಇದಕ್ಕೆ ಆಟೋ ಚಾಲಕರ ಕೂಟಗಳು ಅಸಮಾಧಾನ ವ್ಯಕ್ತಪಡಿಸಿವೆ. ಪ್ರತಿಭಟನೆ ನಡೆಸುವ ಹಕ್ಕು ಎಲ್ಲರಿಗೂ ಇದೆಯಾದರೂ ಚಾಲಕರ ಸಂಕಟ, ಸಂದಿಗ್ಧತೆಗಳನ್ನು ಪ್ರಯಾಣಿಕರೂ ಅರಿತುಕೊಳ್ಳಬೇಕು. ಚಾಲಕರಿಗಿರಬೇಕಾದ ನೀತಿ, ನಿಯಮಗಳ ಬಗ್ಗೆ ಅರಿವು ಮೂಡಿಸುವ ಅಗತ್ಯವೂ ಇದೆ ಎಂದು ಹೇಳಿದ್ದಾರೆ.
ಇಷ್ಟು ಸಾಕೆ? : ಕರೆದಲ್ಲಿ ಬರದ, ಹೆಚ್ಚು ದುಡ್ಡು ಕೀಳುವ, ದುರಂಕಾರದಿಂದ ವರ್ತಿಸುವ ಆಟೋ ಚಾಲಕರಿಗೆ ಪಾಠ ಕಲಿಸಲು ಒಂದು ದಿನದ ಪ್ರತಿಭಟನೆ ಸಾಕೆ? ಎಂಬುದು ಸದ್ಯದ ಪ್ರಶ್ನೆ. ಇಂದು ಆಟೋದಿಂದ ದೂರ ಉಳಿಯುತ್ತಾರೆ, ನಾಳೆ ಮತ್ತೆ ಆಟೋವನ್ನೇ ಅವಲಂಬಿಸುತ್ತಾರೆ. ಬೆಂಗಳೂರು, ಮುಂಬೈನಂಥ ನಗರಗಳಲ್ಲಿ ಬೈಕ್ ಪೂಲಿಂಗ್, ಕಾರ್ ಪೂಲಿಂಗ್ ನಂಥ ವ್ಯವಸ್ಥೆಗಳಿಗೆ ಜನ ಇನ್ನೂ ಒಗ್ಗಿಕೊಳ್ಳುತ್ತಿಲ್ಲ. ದಿನನಿತ್ಯ ಸಾರ್ವಜನಿಕ ವಾಹನವನ್ನು ಬಳಸಲು ಅನೇಕರು ಸಿದ್ಧರಿಲ್ಲ.