ಮಂಗಳಮುಖಿಯರಿಗೆ 400 ರು ಮಾಸಾಶನ
ಮಾಜಿ ಸಚಿವೆ ಶೋಭಾ ಕರಂದ್ಲಾಜೆ ಅವರ ನೇತೃತ್ವದಲ್ಲಿ ಮಂಗಳಮುಖಿಯರ ನಿಯೋಗದೊಂದಿಗೆ ಸಮಾಲೋಚನ ನಡೆಸಿದ ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಮಂಗಳಮುಖಿಯರ ಹಲವಾರು ಬೇಡಿಕೆಗಳನ್ನು ಈಡೇರಿಸುವತ್ತ ಸರಕಾರ ಗಮನ ಹರಿಸಲಿದೆ ಎಂದರು. ತಮಿಳುನಾಡು ಸರಕಾರ ಮಂಗಳಮುಖಿಯರಿಗೆ ಅನೇಕ ಸವಲತ್ತುಗಳನ್ನು ನೀಡಿದೆ. ಅದೇ ರೀತಿಯಲ್ಲಿ ನೆರವು ನೀಡಲು ರಾಜ್ಯ ಸರಕಾರ ಬದ್ಧವಾಗಿದೆ. 40 ವರ್ಷ ದಾಟಿದ ಮಂಗಳಮುಖಿಯರಿಗೆ ತಿಂಗಳಿಗೆ 400 ರುಪಾಯಿ ಮಾಸಾಶನ ನೀಡಲು ಇಂದೇ ಅಧಿಕಾರಿಗಳಿಗೆ ಸೂಚಿಸುವುದಾಗಿ ಯಡಿಯೂರಪ್ಪ ಎಂದು ಹೇಳಿದರು.
ತಮಿಳುನಾಡಿನಲ್ಲಿ ಮಂಗಳಮುಖಿಯರಿಗೆ ಪ್ರತ್ಯೇಕ ನಿರ್ದೇಶನಾಲಯ ಸ್ಥಾಪಿಸಲಾಗಿದೆ. ರಾಜ್ಯದಲ್ಲೂ ಇದನ್ನು ಅನುಷ್ಠಾನಗೊಳಿಸಲು ಅಧಿಕಾರಿಗಳೊಂದಿಗೆ ಚರ್ಚಿಸಿ ನಂತರ ಕ್ರಮ ಕೈಗೊಳ್ಳಲಾಗುವುದು. ಕೆಲವು ರಾಜ್ಯಗಳಲ್ಲಿ ಮಂಗಳಮುಖಿಯರಿಗೆ ಪಡಿತರ ಚೀಟಿಯನ್ನು ನೀಡಲಾಗುತ್ತಿದೆ. ಕರ್ನಾಟಕದಲ್ಲಿರುವ ಮಂಗಳಮುಖಿಯರಿಗೆ ಪಡಿತರ ಚೀಟಿಯನ್ನು ವಿತರಿಸಲಾಗುವುದು ಎಂದು ಯಡಿಯೂರಪ್ಪ ಭರವಸೆ ನೀಡಿದರು.
ಕೊಳಚೆ ನಿರ್ಮೂಲನಾ ಮಂಡಳಿಯಿಂದ ಇವರಿಗೆ ಮನೆ ನಿರ್ಮಿಸಿ ಕೊಡಲಾಗುವುದು. ಆಯಾ ಜಿಲ್ಲಾ ಕೇಂದ್ರಗಳಲ್ಲಿ ಮನೆ ನಿರ್ಮಿಸಿಕೊಡಲು ಮಂಡಳಿ ಕ್ರಮಕೈಗೊಳ್ಳಲಿದೆ. ಜೊತೆಗೆ 5 ಜನ ಗುಂಪಿರುವ ಮಂಗಳಮುಖಿಯರಿಗೆ ಸರಕಾರ ಒಂದು ಲಕ್ಷ ರುಪಾಯಿ ಸಾಲ ನೀಡಲಿದೆ. ಮಂಗಳಮುಖಿಯರ ಉಳಿದ ಬೇಡಿಕೆಗಳನ್ನು ಸರಕಾರ ಪರಿಶೀಲನೆ ನಡೆಸಲಿದೆ ಎಂದು ಯಡಿಯೂರಪ್ಪ ಹೇಳಿದರು.