ಪತ್ನಿ ಕೊಲೆ ಹಿಂದೆ ಇನ್ಫಿ ಟೆಕ್ಕಿ ಕೈಚಳಕ?
ಪತ್ನಿ ಪ್ರಿಯಾ ಗುಪ್ತಾ ಅವರ ಹತ್ಯೆ ಹಿಂದೆ ಪತಿ ಸತೀಶ್ ಗುಪ್ತಾ ಅವರ ಕೈವಾಡವಿದೆ. ಪ್ರಿಯಾ ಅವರ ಕೊಲೆ ಮಾಡಿದವರು ವೃತ್ತಪರ ಕೊಲೆಗಾರರಲ್ಲ. ಇದೊಂದು ಪೂರ್ವ ನಿಯೋಜಿತ ಕೃತ್ಯ. ಅಲ್ಲದೇ, ಕೊಲೆ ಮಾಡಿದ ನಂತರ ಕೊಲೆಗಾರರು ಬೂಟು ಮತ್ತು ಜರ್ಕಿನ್ ಗಳನ್ನು ಬಿಟ್ಟು ಹೋಗಿರುವುದು ಅನುಮಾನ ಬಲಗೊಳ್ಳಲು ಕಾರಣವಾಗಿದೆ. ಮಂಗಳವಾರ ಬೆಳಗಿನ ಜಾವ ಸತೀಶ್ ಸುಮಾರು 5.30ಕ್ಕೆ ವಾಕಿಂಗ್ ಗೆ ಹೊರಡುತ್ತಾರೆ. ಆದರೆ, ಅವರ ಮನೆಯಲ್ಲಿ ವಾಕಿಂಗ್ ಗೆ ಮೀಸಲಾದ ಮೂರ್ನಾಲ್ಕು ಜೊತೆ ಬೂಟುಗಳಿವೆ. ಅದನ್ನು ಧರಿಸಿದ ಅವರು, ತರಾತುರಿಯಲ್ಲಿ ಚಪ್ಪಲ್ಲುಗಳನ್ನು ಹಾಕಿಕೊಂಡು ವಾಕಿಂಗ್ ಹೋಗಿದ್ದಾರೆ.
ಪೇಪರ್ ಹಾಕುವ ಸೋಗಿನಲ್ಲಿ ಇಬ್ಬರು ವ್ಯಕ್ತಿಗಳು ಮನೆಗೆ ಬಂದಿದ್ದಾರೆ ಎಂದು ಪತ್ನಿ ಪ್ರಿಯಾ ಅವರಿಂದ ದೂರವಾಣಿ ಕರೆ ಸ್ವೀಕರಿಸಿದ ಸತೀಶ್, ನಾನು ಬರುವವರೆಗೂ ಬಾಗಿಲು ತೆರೆಯಬೇಡ ಎಂದು ಹೇಳಿದ್ದಾನೆ. ಸುಮಾರು 6.30ರ ಹೊತ್ತಿಗೆ ಮನೆಗೆ ಬಂದ ಸತೀಶ್, ಬಾಗಿಲು ಬಡಿದಿದ್ದಾನೆ. ಪತ್ನಿಗೆ ದೂರವಾಣಿ ಕರೆಯನ್ನು ಮಾಡಿದ್ದಾನೆ.
ಆದರೆ, ಪ್ರಿಯಾ ಅವರಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ತಕ್ಷಣ ವೆಂಕಟೇಶ್ ಲೇಔಟ್ ನಲ್ಲಿರುವ ತನ್ನ ಪೋಷಕರ ಮನೆಗೆ ತೆರಳಿದ ಸತೀಶ್, ಅವರ ಕಾರು ತೆಗೆದುಕೊಂಡು ಆಫೀಸ್ ಗೆ ತೆರಳಿ ಅಲ್ಲಿದ್ದ ಮನೆಯ ಡೂಪ್ಲಿಕೇಟ್ ಕೀ ತೆಗೆದುಕೊಂಡು ಬಂದು ಮನೆಯ ಬಾಗಿಲು ತೆಗೆದಿದ್ದಾನೆ. ಹೀಗಾಗಿ ಕೊಲೆಯನ್ನು ಈ ಕುಟುಂಬವನ್ನು ಚೆನ್ನಾಗಿ ಬಲ್ಲವರೇ ಮಾಡಿದ್ದಾರೆಂಬುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ ಎಂದು ಹುಳಿಮಾವು ಪೊಲೀಸರು ತಿಳಿಸಿದ್ದಾರೆ.
ಪೇಪರ್ ಹಾಕುವ ನೆಪದಲ್ಲಿ ಬಂದ ಇಬ್ಬರು ವ್ಯಕ್ತಿಗಳು ಪ್ರಿಯಾ ಗುಪ್ತಾ ಅವರನ್ನು ಹತ್ಯೆಗೈದು 2 ಲಕ್ಷ ರುಪಾಯಿ ಮತ್ತು ಚಿನ್ನಾಭರಣಗಳನ್ನು ದೋಚಿಕೊಂಡು ಪರಾರಿಯಾದ ಘಟನೆ ಬನ್ನೇರುಘಟ್ಟ ರಸ್ತೆಯ ಹುಳಿಮಾವು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮಂಗಳವಾರ ನಡೆದಿತ್ತು.