ಕರ್ನಾಟಕದ ಬಿಕ್ಕಟ್ಟಿಗೆ ರಾಜ್ಯಪಾಲರೇ ಹೊಣೆ
ಸಂವಿಧಾನಿಕ ಕರ್ತವ್ಯವನ್ನು ಬದಿಗಿರಿಸಿರುವ ರಾಜ್ಯಪಾಲ ಭಾರದ್ವಾಜ್ ಪ್ರತಿಪಕ್ಷದಂತೆ ನೇರವಾಗಿ ಸರಕಾರದ ಆರೋಪ ಮಾಡುತ್ತಿದ್ದಾರೆ. ಅಕ್ರಮ ಗಣಿಗಾರಿಕೆಗೆ ಸಂಬಂಧಿಸಿದಂತೆ ಕರ್ನಾಟಕದಲ್ಲಿ ಉದ್ಭವಿಸಿರುವ ಎಲ್ಲ ಬಿಕ್ಕಟ್ಟಿಗೂ ರಾಜ್ಯಪಾಲರೇ ಹೊಣೆಗಾರರು ಎಂದು ಬಿಜೆಪಿ ವಕ್ತಾರ ನಿರ್ಮಲಾ ಸೀತಾರಾಮ್ ಆರೋಪಿಸಿದ್ದಾರೆ.
ಯಡಿಯೂರಪ್ಪ ಸಂಪುಟದಲ್ಲಿರುವ ಬಳ್ಳಾರಿಯ ರೆಡ್ಡಿ ಸಹೋದರರನ್ನು ವಿನಾಕಾರಣ ಅಕ್ರಮ ಗಣಿಗಾರಿಕೆಯಲ್ಲಿ ಬಲಿಪಶುಗಳನ್ನಾಗಿ ಮಾಡಲಾಗುತ್ತಿದೆ. ರೆಡ್ಡಿಗಳನ್ನು ರಾಜಕೀಯವಾಗಿ ಮುಗಿಸಲು ಪ್ರತಿಪಕ್ಷಗಳ ಸಮಯವನ್ನು ಅಸ್ತ್ರವಾಗಿ ಬಳಸಿಕೊಂಡು ಗಣಿಗಾರಿಕೆಯನ್ನು ಸಿಬಿಐ ತನಿಖೆಗೆ ವಹಿಸಬೇಕು ಎಂದು ಒತ್ತಾಯಿಸಿ ಕಲಾಪಗಳನ್ನು ಹಾಳು ಮಾಡಿವೆ ಎಂದು ನಿರ್ಮಲಾ ಸೀತಾರಾಮ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಅಕ್ರಮ ಗಣಿಗಾರಿಕೆಯನ್ನು ಲೋಕಾಯುಕ್ತ ತನಿಖೆಗೆ ವಹಿಸುವುದಾಗಿ ಮುಖ್ಯಮಂತ್ರಿಗಳು ಘೋಷಿಸಿದ್ದಾರೆ. ಅಕ್ರಮ ಗಣಿಗಾರಿಕೆಯಲ್ಲಿ ತೊಡಗಿರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಸ್ಪಷ್ಟಪಡಿಸಿದ್ದಾರೆ. ಆದರೂ, ಪ್ರತಿಪಕ್ಷಗಳು ತಮ್ಮ ಪ್ರತಿಭಟನೆಯನ್ನು ಮುಂದುವರೆಸಿ, ಪಾದಯಾತ್ರೆ ಮಾಡಲು ಮುಂದಾಗಿರುವುದು ಎಷ್ಟರ ಮಟ್ಟಿಗೆ ಸರಿ ಎಂದು ಅವರು ಪ್ರಶ್ನಿಸಿದ್ದಾರೆ.