ಬೆಂಗಳೂರು ಲಕ್ಷ್ಮಿಯನ್ನು ವಂಚಿಸಿದ ಪಾಪಿ ಪಾಕಿ
ಸುಧಾಲಕ್ಷ್ಮಿ ಅವರಿಗೆ ಎಂದೂ ಕಾಣದ ಪಾಕಿಸ್ತಾನದಿಂದ ಎರಡು ಎಸ್ಎಂಎಸ್ ಗಳು ಬಂದವು. ನೋಡಿದರೆ, ನಿಮ್ಮ ಕ್ರೆಡಿಟ್ ಕಾರ್ಡ್ ಬಳಸಿ ಹಣ ಪಡೆಯಲಾಗಿದೆ ಎಂದಿತ್ತು. ತಕ್ಷಣ ಗಾಬರಿಗೊಂಡ ಸುಧಾ, ಬ್ಯಾಂಕಿನ ಗ್ರಾಹಕ ವಿನಿಮಯ ಕೇಂದ್ರಕ್ಕೆ ಕರೆ ಮಾಡಿ ವಿಚಾರಿಸಿದಾಗ, ಒಮ್ಮೆ ರು.13,155.84 ಹಾಗೂ ಮತ್ತೊಮ್ಮೆ ರು. 5,481ಹಣ ಪಾಕಿಸ್ತಾನದಲ್ಲಿ ಸ್ವೈಪ್ ಆಗಿದೆ ಎಂದು ತಿಳಿದುಬಂದಿದೆ.
ಈ ಘಟನೆಯಿಂದ ಕೊಂಚ ವಿಚಲಿತರಾದ ಸುಧಾ, ನಂತರ ಬ್ಯಾಂಕಿಗೆ ದೂರು ನೀಡಿದ್ದಾರೆ. ತಾನು ಕ್ರೆಡಿಟ್ ಕಾರ್ಡ್ ಬಳಸಿಲ್ಲ. ಯಾರೋ ದುರುಪಯೋಗಪಡಿಸಿಕೊಂಡಿದ್ದಾರೆ. ನಾನು ಪಾಕಿಸ್ತಾನಕ್ಕೆ ಹೋಗೇ ಇಲ್ಲ ಎಂದು ಪಾಸ್ ಪೋರ್ಟ್ ಪ್ರತಿಯನ್ನು ನೀಡಿದ್ದಾರೆ.
ದೂರಿನ್ವಯ ಐಸಿಐಸಿಐ ಬ್ಯಾಂಕಿನವರು ಆಂತರಿಕ ತನಿಖೆ ನಡೆಸಿ, ಕ್ರೆಡಿಟ್ ಕಾರ್ಡ್ ದುರ್ಬಳಕೆ ಮಾಡಿರುವುದು ಕಂಡು ಬಂದಿದೆ. ಐಸಿಐಸಿಐ ಬ್ಯಾಂಕಿನ ಪ್ರಾದೇಶಿಕ ಮ್ಯಾನೇಜರ್ ಮನಸ್ ರಂಜನ್ ಅವರು ಈ ಬಗ್ಗೆ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
ಅಗತ್ಯಬಿದ್ದರೆ,ಸೈಬರ್ ಪೊಲೀಸ್ ಸಹಾಯಪಡೆಯುವುದಾಗಿ ಕಬ್ಬನ್ ಪಾರ್ಕ್ ಪೊಲೀಸ್ ಠಾಣಾಧಿಕಾರಿ ಹೇಳಿದ್ದಾರೆ. ಕಾರ್ಡ್ ದುರ್ಬಳಕೆ ಆಗುವ ಮುನ್ನ ಎರಡು ದಿನಗಳ ಮುಂಚೆ ಲಕ್ಷ್ಮಿ ಅವರು ಕ್ರೆಡಿಟ್ ಕಾರ್ಡ್ ಬಳಸಿ, ಬಾರಿಸ್ಟಾ ಕೆಫೆಯಲ್ಲಿ ರು. 364 ಪಾವತಿಸಿದ್ದರು ಎಂದು ತಿಳಿದು ಬಂದಿದೆ.