ನಮಗೆ ನೋಟಿಸ್ ಬಂದಿಲ್ಲ: ಶ್ರೀರಾಮುಲು
ಲಾಭದಾಯಕ ಸ್ಥಾನ ಹೊಂದಿರುವ ಆರೋಪದ ಮೇಲೆ ರಾಜ್ಯ ಚುನಾವಣಾ ಆಯೋಗ ಇಂದು ನೋಟಿಸ್ ನೀಡಿದೆ. ಆದರೆ, ಯಾವುದೇ ನೋಟಿಸ್ ನಮಗೆ ತಲುಪಿಲ್ಲ ಎಂದು ಶ್ರೀರಾಮುಲು ಪ್ರತಿಕ್ರಿಯಿಸಿದ್ದಾರೆ.
ಲಾಭದಾಯಕ ಹುದ್ದೆ ಹಾಗೂ ಅಕ್ರಮ ಗಣಿಗಾರಿಕೆಗೆ ಸಂಬಂಧಿಸಿದಂತೆ ಪ್ರಭಾವಿ ಸಚಿವರುಗಳಾದ ಶ್ರೀರಾಮುಲು, ಜನಾರ್ದನರೆಡ್ಡಿ ಹಾಗೂ ಕರುಣಾಕರ ರೆಡ್ಡಿ ಅವರಿಗೆ ವಿವರಣೆ ಕೋರಿ ನೋಟಿಸ್ ನೀಡುವಂತೆ ಕೇಂದ್ರ ಚುನಾವಣಾ ಆಯೋಗ ಆದೇಶ ರಾಜ್ಯ ಮುಖ್ಯ ಚುನಾವಣಾಧಿಕಾರಿಗಳಿಗೆ ಆದೇಶ ನೀಡಿತ್ತು.
ಕರ್ನಾಟಕ-ಆಂಧ್ರ ಗಡಿ ಭಾಗದಲ್ಲಿ ಸಿಬಿಐ ನಡೆಸಿದ್ದ ತಪಾಸಣೆ ವೇಳೆ ಬಳ್ಳಾರಿ ಸಚಿವರ ಮೇಲೆ ಕೇಳಿ ಬಂದಿದ್ದ ಆರೋಪದ ಹಿನ್ನೆಲೆಯಲ್ಲಿ ಹಾಗೂ ವಿಧಾನ ಪರಿಷತ್ ಸದಸ್ಯ ಕೆಸಿ ಕೊಂಡಯ್ಯ ರಾಜ್ಯಪಾಲರಿಗೆ ನೀಡಿದ್ದ ದೂರಿಗೆ ಸಂಬಂಧಿಸಿದಂತೆ ರಾಜ್ಯಪಾಲರೆದುರು ಖುದ್ದು ಹಾಜರಾಗಿ ಜನಾರ್ದನ ರೆಡ್ಡಿ ಉತ್ತರ ನೀಡಲು ನಿರಾಕರಿಸಿದ್ದರು.
ಈ ಹಿನ್ನೆಲೆಯಲ್ಲಿ ಕುಪಿತರಾಗಿದ್ದ ರಾಜ್ಯಪಾಲರು ದೂರನ್ನು ಸೂಕ್ತ ಕ್ರಮ ಕ್ಕಾಗಿ ಕೇಂದ್ರ ಚುನಾವಣಾ ಆಯೋಗಕ್ಕೆ ರವಾನಿಸಿದ್ದರು. ಕೆಸಿ ಕೊಂಡಯ್ಯ ಅವರು ನೀಡಿದ್ದ ದೂರಿನ ಹಿನ್ನೆಲೆಯಲ್ಲಿ ಸಚಿವರಾದ ಜನಾರ್ದನರೆಡ್ಡಿ, ಕರುಣಾಕರರೆಡ್ಡಿ ಹಾಗೂ ಶ್ರೀರಾಮುಲು ಅವರುಗಳ ವಿರುದ್ಧ ಕ್ರಮಕ್ಕೆ ರಾಜ್ಯಪಾಲರು ಶಿಫಾರಸು ಮಾಡಿದ್ದರು.
ಈ ದೂರನ್ನು ಪರಾಮರ್ಶಿಸಿದ ಕೇಂದ್ರ ಚುನಾವಣಾ ಆಯೋಗ ಸಚಿವರಿಂದ ವಿವರಣೆ ಕೋರಿ ನೋಟಿಸ್ ನೀಡಲು ಮುಂದಾಗಿದೆ. ದೆಹಲಿಯಿಂದ ಬಂದಿರುವ ಸೂಚನೆ ಮೇರೆಗೆ ಮೂವರು ಸಚಿವರಿಗೆ ರಾಜ್ಯ ಚುನಾವಣಾಧಿಕಾರಿಗಳು ನೋಟಿಸ್ ಜಾರಿ ಮಾಡಿದ್ದಾರೆ.
ಇಂದು ಮುಂಗಾರು ಅಧಿವೇಶನ ಅರಂಭವಾಗಿದ್ದು, ಪ್ರತಿಪಕ್ಷಗಳಿಗೆ ರೆಡ್ಡಿಗಳಿಗೆ ನೋಟಿಸ್ ನೀಡಿರುವುದು ಪ್ರಮುಖ ಅಸ್ತ್ರವಾಗಲಿದೆ. ರೆಡ್ಡಿ ಸದರರಿಗೆ ಜುಲೈ 15ರೊಳಗೆ ವಿವರಣೆ ನೀಡಲು ಆದೇಶಿಸಲಾಗಿದೆ.
ರೆಡ್ಡಿ ಪ್ರತಿಕ್ರಿಯೆ :ನಮ್ಮ ಧರ್ಮ ನಮ್ಮ ಕೈಬಿಡುವುದಿಲ್ಲ. ಧರ್ಮವನ್ನು ರಕ್ಷಿಸಿದವನಿಗೆ ಧರ್ಮ ರಕ್ಷಿಸುತ್ತದೆ ಎಂಬ ಉಕ್ತಿಯಂತೆ ನಮಗೆ ಜಯ ಸಿಗಲಿದೆ.
ನಾವು ಸತ್ಯ ಮತ್ತು ಧರ್ಮದ ಹಾದಿಯಲ್ಲಿ ನಡೆಯುತ್ತಿದ್ದು, ಈಗ ಎದುರಾಗಿರುವ ಸಮಸ್ಯೆಯನ್ನೂ ಪರಿಹರಿಸಿಕೊಳ್ಳುತ್ತೇವೆ ಎಂದು ಪ್ರವಾಸೋದ್ಯಮ ಸಚಿವ ಜರ್ನಾದನ ರೆಡ್ಡಿ ಪ್ರತಿಕ್ರಿಯಿಸಿದ್ದಾರೆ.
ನಾವು ಯಾವುದೇ ಅನ್ಯಾಯ, ಅಕ್ರಮ ಎಸಗಿಲ್ಲ. ನಮ್ಮದು ನಿಯತ್ತಿನ ಬದುಕು, ನ್ಯಾಯದ ಹಾದಿಯಲ್ಲಿ ನಡೆಯುವವರಿಗೆ ನ್ಯಾಯ ಸಿಕ್ಕೇ ಸಿಗುತ್ತದೆ ಎಂದು ವಿಶ್ವಾಸವ್ಯಕ್ತಪಡಿಸಿದರು.