ಮೂವತ್ತು ಕೋಟಿ ನಾಮ ಹಾಕಿದ 'ಚಾಣಕ್ಯ'ನ ಬಂಧನ
ಮೈಸೂರಿನಲ್ಲಿ ಪಂಗನಾಮ ಹಾಕುವ ಫೈನಾನ್ಸ್ ಕಂಪನಿಗಳ ಬಣ್ಣ ದಿನೇ ದಿನೇ ಬಯಲಾಗುತ್ತಿದ್ದರೂ ಜನ ಮರುಳೋ ಜಾತ್ರ ಮರುಳೋ ಎಂಬಂತೆ ಹಣ ಹೂಡುತ್ತಲೇ ಇದ್ದಾರೆ. ಚಾಣಕ್ಯ ಫೈನಾನ್ಸ್ ಕಂಪನಿಯ ಚಾಣಕ್ಯ ತಂತ್ರಕ್ಕೆ ಬಲಿಯಾದ ಜನ ಅದರಲ್ಲಿ ಹಣ ಹೂಡಿಕೆ ಮಾಡಿದ್ದರು. ಆದರೆ ಕಳೆದ ಒಂದು ವರ್ಷದಿಂದ ಬಡ್ಡಿ ಕೊಡದ ಕಾರಣ ಹೂಡಿಕೆದಾರರು ಅನುಮನಗೊಂಡು ಪೊಲೀಸರಿಗೆ ದೂರಿ ನೀಡಿದ್ದಾರೆ.
ಈ ಸಂಬಂಧ ಪೊಲೀಸರು ಇಂದು ಫೈನಾನ್ಸ್ ಕಂಪನಿಯ ಮಾಲೀಕ ನಂಜರಾಜ ಅರಸ್ ನನ್ನು ಬಂಧಿಸಿದ್ದಾರೆ. ತಮ್ಮ ಸಂಸ್ಥೆಯಲ್ಲಿ ಒಂದು ಲಕ್ಷ ರೂಪಾಯಿ ಹಣ ಹೂಡಿದರೆ ತಿಂಗಳಿಗೆ ಶೇ.10 ಬಡ್ಡಿ ಕೊಡುವುದಾಗಿ ನಂಬಿಸಲಾಗಿತ್ತು. ಆರಂಭದಲ್ಲಿ ಅಷ್ಟು ಬಡ್ಡಿಯನ್ನು ಕೊಡಲಾಗಿತ್ತು. ಇದನ್ನು ನಂಬಿದ ಹಲವಾರು ಮಂದಿ ಹಣ ಹೂಡಲು ಮುಂದಾಗಿದ್ದರು.
ಹೆಚ್ಚು ಹೆಚ್ಚು ಹಣ ಹೂಡಿದರೆ ಹೆಚ್ಚಿನ ಬಡ್ಡಿ ಕೊಡುವ ಆಸೆ ತೋರಿಸಲಾಗಿತ್ತು. ಐದು ಲಕ್ಷ ಹಣ ಹೂಡಿದರೆ ತಿಂಗಳಿಗೆ ಶೇ.15ರಷ್ಟು ಬಡ್ಡಿ ಕೊಡುವುದಾಗಿ ಹೇಳಲಾಗಿತ್ತು ಎಂದು ಹಣ ಹೂಡಿದರು ತಿಳಿಸಿದ್ದಾರೆ. ಆದರೆ ಕಳೆದ ಒಂದು ವರ್ಷದಿಂದ ಬಡ್ಡಿ ಕೊಡದ ಕಾರಣ ಬೇಸತ್ತ ಹೂಡಿಕೆದಾರರು ಪೊಲೀಸರಿಗೆ ದೂರು ನೀಡಿದ್ದರು.
ಬಂಧಿತ ನಂಜರಾಜ ಅರಸ್ ವಿರುದ್ಧ ಇದುವರೆಗೂ ಯಾವುದೇ ದೂರು ದಾಖಲಾಗಿಲ್ಲ. ಮೂಲತಃ ಮೈಸೂರಿನವನಾದ ಈತ ಕಳೆದ ಮೂರು ವರ್ಷಗಳಿಂದ ಈ ಫೈನಾನ್ಸ್ ಕಂಪನಿ ನಡೆಸುತ್ತಿದ್ದಾನೆ ಎನ್ನಲಾಗಿದೆ. ಕಂಪನಿ ರಿಜಸ್ಟರ್ ಸಹ ಆಗಿಲ್ಲ. ಹಣ ಹೂಡಿದವರೆಲ್ಲಾ ಸಣ್ಣಪುಟ್ಟ ವ್ಯಾಪಾರಸ್ಥರು, ಕೂಲಿ ನಾಲಿ ಮಾಡುವವರು, ಅನಕ್ಷರಸ್ಥರು.