ವೃದ್ಧರ ಮೇಲೆ ಹಲ್ಲೆ, ಚಿನ್ನಾಭರಣ ಲೂಟಿ

ಪೆಪ್ಸಿ ಪಾನೀಯ ಕಂಪನಿಯ ಅಧಿಕೃತ ಡೀಲರ್ ಶ್ರೀನಿವಾಸಮೂರ್ತಿ (60) ಎಂಬುವರ ಮನೆಯಲ್ಲಿ ಬೆಳಗ್ಗೆ 11.30 ರ ಸುಮಾರಿಗೆ ಈ ಘಟನೆನಡೆದಿದೆ. 25 ಸಾವಿರ ರೂ. ನಗದು, ಒಂದು ವಜ್ರದ ಉಂಗುರ, 2 ಚಿನ್ನದ ಸರ ಹಾಗೂ 2 ಮೊಬೈಲ್ ಅಪಹರಿಸಲಾಗಿದೆ.
ದುಷ್ಕರ್ಮಿಗಳು ಚಿನ್ನಾಭರಣ ದೋಚು ವಾಗ ಕೈಗೆ ಗ್ಲೌಸ್ ಧರಿಸಿ ದ್ದರಲ್ಲದೆ, ಪೊಲೀಸ್ ನಾಯಿ ತಮ್ಮನ್ನು ಪತ್ತೆ ಮಾಡದಿರಲು ಮನೆ ತುಂಬ ಖಾರದ ಪುಡಿ ಎರಚಿ ಪರಾರಿಯಾಗಿದ್ದಾರೆ.
ಘಟನೆ ವಿವರ: ಚಾಮರಾಜಪೇಟೆ 4ನೇ ಮುಖ್ಯರಸ್ತೆ 2ನೇ ಕ್ರಾಸ್ನಲ್ಲಿ ಶ್ರೀನಿವಾಸಮೂರ್ತಿಯವರ ಮೂರು ಅಂತಸ್ತಿನ ಮನೆ ಇದೆ. ಮೇಲಿನ ಎರಡು ಅಂತಸ್ತನ್ನು ಬಾಡಿಗೆಗೆ ನೀಡಲಾಗಿದ್ದು, ನೆಲ ಮಹಡಿಯಲ್ಲಿ ಅವರು ಪತ್ನಿ ಸುನಂದಾ ದೇವಿ, ಪುತ್ರ ಹರೀಶ್ ಹಾಗೂ ಸೊಸೆ ರೇಣುಕಾದೇವಿ ಜತೆ ಇದ್ದಾರೆ. ಬೆಳಗಿನ ಹೊತ್ತು ಇಬ್ಬರು ಸೇವಕಿಯರು ಮನೆಗೆಲಸಕ್ಕೆ ಬರುತ್ತಾರೆ.
ಘಟನೆ ನಡೆದಾಗ ಹರೀಶ್ ಹಾಗೂ ಶ್ರೀನಿವಾಸಮೂರ್ತಿ ಮನೆಯಲ್ಲಿರಲಿಲ್ಲ. ಸೊಸೆ ತವರು ಮನೆಗೆ ಹೋಗಿದ್ದರು. ಸುನಂದಾ ದೇವಿ ಮನೆ ಕೆಲಸದವರಾದ ಪ್ರೇಮಾ ಹಾಗೂ ಕಮಲ ಜತೆ ಇದ್ದರು. ಮನೆಯ ಪ್ರವೇಶ ದ್ವಾರಕ್ಕೆ ಪೂಜೆ ಮಾಡಿ ಒಳಕ್ಕೆ ಹೋದಾಗ ಮೂವರು ದುಷ್ಕರ್ಮಿಗಳು ಒಳಕ್ಕೆ ನುಗ್ಗಿದರು.
ಚಾಕುವಿನಿಂದ ಬೆದರಿಸಿ ಬಾಯಿಗೆ ಪ್ಲಾಸ್ಟರ್ ಹಾಕಿ ಕೈ-ಕಾಲು ಕಟ್ಟಿ ಹಾಕಿದರು. ನಂತರ ಸುನಂದಾ ದೇವಿಯ ಕತ್ತಿನಲ್ಲಿದ್ದ ಸರ ಹಾಗೂ ವಜ್ರದುಂಗುರ, ಮನೆಯಲ್ಲಿದ್ದ 25 ಸಾವಿರ ರೂ. ಹಾಗೂ 2 ಮೊಬೈಲ್ ಕಿತ್ತುಕೊಂಡರು. ಅಷ್ಟರಲ್ಲಿ ಹೊರಗಡೆ ಹೋಗಿದ್ದ ಶ್ರೀನಿವಾಸಮೂರ್ತಿ ವಾಪಸಾದರು.
ಅವರನ್ನು ಸುತ್ತುವರಿದ ಮೂವರು ಚಾಕುವಿನಿಂದ ಬೆದರಿಸಿ ಬಾಯಿಗೆ ಪ್ಲಾಸ್ಟರ್ ಅಂಟಿಸಿ ಕಟ್ಟಿಹಾಕಿದರು. ನಂತರ ಹೊರಗಡೆ ಕಾಯುತ್ತಿದ್ದ ತಮ್ಮ ಇಬ್ಬರು ಸ್ನೇಹಿತರನ್ನು ಕರೆ ಮಾಡಿ ಒಳಕ್ಕೆ ಕರೆಸಿಕೊಂಡರು. ಆ ಸಂದರ್ಭದಲ್ಲಿ 'ಮಚ್ಚಾ ಬೇಗ ಬಾರೋ, ...ಮಗನೆ' ಎಂದು ಮಾತಾಡಿದ್ದಾರೆ. ಹೀಗಾಗಿ, ಕೃತ್ಯ ಎಸಗಿದ ವರು ಕರ್ನಾಟಕದವರು ಎಂಬ ಅನುಮಾನ ವ್ಯಕ್ತವಾಗಿದೆ.
ದುಷ್ಕರ್ಮಿಗಳು ಹಿಂಬದಿ ಬಾಗಿಲು ತೆರೆದು ಪರಾರಿಯಾಗಿದ್ದಾರೆ. 12.45ರ ಸುಮಾರಿಗೆ ಮನೆಗೆ ಬಂದ ಪರಿ ಚಯಸ್ಥರೊಬ್ಬರು ಹರೀಶ್ಗೆ ಕರೆ ಮಾಡಿ ಮಾಹಿತಿ ನೀಡಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಈ ಮನೆ ಜನನಿಬಿಡ ಪ್ರದೇಶದಲ್ಲಿದ್ದು, ಸದಾ ವಾಹನಗಳು ಓಡಾಡುತ್ತವೆ.
ಆದರೂ ಘಟನೆ ನಡೆದಿರುವುದು ಸಾಕಷ್ಟು ಕುತೂಹಲ ಕೆರಳಿಸಿದೆ. ಮನೆಯಿಂದ ಹೊರಗೆ ಹೋಗುವಾಗ ದುಷ್ಕರ್ಮಿಗಳ ಪೈಕಿ ಇಬ್ಬರು, 'ನಮ್ಮನ್ನು ಕ್ಷಮಿಸಿ ಬಿಡಿ. ನಮ್ಮ ಬಾಸ್ ತಂಗಿ ಮದುವೆ ಇದೆ' ಎಂದು ಲೇವಡಿ ಮಾಡಿ ಪರಾರಿಯಾಗಿದ್ದಾರೆ.












Click it and Unblock the Notifications