ಸಂಜನಾ ಸಾವು: ಲೋಕಾಯುಕ್ತ ತನಿಖೆ ಶುರು
ಬಿಬಿಎಂಪಿ ಆಯುಕ್ತ ಭರತ್ ಲಾಲ್ ಮೀನಾ ಹಾಗೂ ಉಪಾಯುಕ್ತರಿಗೆ ನೋಟಿಸ್ ನೀಡಿರುವ ಲೋಕಾಯುಕ್ತರು ಇಂದಿನಿಂದ ತನಿಖೆ ಆರಂಭಿಸಿದ್ದಾರೆ. ಒಂದು ವಾರಗಳ ಕಾಲ ಲೋಕಾಯುಕ್ತ ತಂಡದ ತನಿಖೆ ನಡೆಯಲಿದೆ.
ಇನ್ನೂ ಸಿಗದ ಬಿಬಿಎಂಪಿ ವರದಿ: ದುರ್ಘಟನೆ ನಡೆದ ನಂತರ ಪರಿಹಾರದ ಚೆಕ್ ಹಿಡಿದುಕೊಂಡು ಹೋಗಿದ್ದ ಬಿಬಿಎಂಪಿ ಮೇಯರ್ ಎಸ್ ಕೆ ನಟರಾಜ್ ಮೃತ ಸಂಜನಾ ಸಿಂಗ್ ಳ ಪೋಷಕರಿಂದ ಛೀಮಾರಿ ಹಾಕಿಸಿಕೊಂಡಿದ್ದರು. ನಂತರ ಸುದ್ದಿಗಾರರ್ರೊಂದಿಗೆ ಮಾತನಾಡಿ, ಘಟನೆ ಬಗ್ಗೆ ತನಿಖೆ ನಡೆಸಲು ಬಿಬಿಎಂಪಿ ತಂಡವನ್ನು ರಚಿಸಲಾಗಿದೆ ಇನ್ನೂ ಮೂರು ದಿನಗಳಲ್ಲಿ ವರದಿ ಲಭ್ಯವಾಗಲಿದೆ ಎಂದಿದ್ದರು.
ಆದರೆ, ಘಟನೆ ನಡೆದಿದ್ದು ಜೂನ್.1ರಂದು ಮೇಯರ್ ಮಾತು ಕೊಟ್ಟು ಐದಾರು ದಿನಗಳು ಕಳೆದಿವೆ. ಬಿಬಿಎಂಪಿ ತನಿಖೆ ಹಾಗೂ ವರದಿ ಬಗ್ಗೆ ಯಾವುದೇ ಸುದ್ದಿ ಹೊರಬಿದ್ದಿಲ್ಲ. ಲೋಕಾಯುಕ್ತರ ತನಿಖೆಗೆ ಬೆಂಬಲ ವ್ಯಕ್ತಪಡಿಸಿರುವ ರಾಜ್ಯ ಮಾನವ ಹಕ್ಕುಗಳ ಆಯೋಗ , ತನಿಖೆಗೆ ಸಹಕಾರ ನೀಡುವುದಾಗಿ ಘೋಷಿಸಿದೆ.
ಕಾರ್ಪೋರೇಟರ್ ಕಮ್ ಕಂಟ್ರಾಕ್ಟರ್ ಎಲ್ಲಿ? : ಇಷ್ಟಾದರೂ ಯಶವಂತಪುರದ ನಿರ್ಮಾಪಕ ಮುನಿರತ್ನ, ಕಳಪೆ ಕಾಮಗಾರಿ ಬಗ್ಗೆ ಮಾತನಾಡಿಲ್ಲ. ಪರಿಹಾರ ನೀಡಲು ಸಿದ್ಧ ಎಂದಷ್ಟೇ ಪ್ರತಿಕ್ರಿಯಿಸಿದ್ದರು. ಬಿಬಿಎಂಪಿ ಸದಸ್ಯತ್ವದಿಂದ ವಜಾಗೊಳ್ಳುವ ಆತಂಕದಲ್ಲಿ ಮೌನವಾಗಿ ಎಲ್ಲೋ ಮರೆಯಾಗಿದ್ದಾರೆ.