ಹಾಡು ಹಗಲೇ ಲಕ್ಷಾಂತರ ಹಣ ದರೋಡೆ
ಆಕ್ಸಿಸ್ ಬ್ಯಾಂಕಿನ ಕಲೆಕ್ಷನ್ ಏಜೆಂಟರಾಗಿರುವ ರಾಮಪ್ಪ ಮತ್ತು ನವೀನ್ (25)ಮಧ್ಯಾಹ್ನ ಮಂಡ್ಯ ಹಾಲು ಉತ್ಪಾದಕರ ಒಕ್ಕೂಟದಿಂದ ಸಂಗ್ರಹಿಸಿದ್ದ ಹಣವನ್ನು ಕಾರಿನಲ್ಲಿಟ್ಟುಕೊಂಡು ಬ್ಯಾಂಕಿಗೆ ತೆರಳುತ್ತಿದ್ದರು.
ನಿನ್ನೆ ಭಾನುವಾರವಾಗಿದ್ದ ಕಾರಣ ಹಣ ಹೆಚ್ಚಿಗೆ ಸಂಗ್ರಹವಾಗಿತ್ತು. ಚಾಲಕ ರಾಮಪ್ಪ ಹಾಗೂ ಆಫೀಸ್ ಬಾಯ್ ನವೀನ್ ಹಣದೊಂದಿಗೆ ತೆರಳುತ್ತಿದ್ದಾಗ ಟಾಟಾ ಸುಮೋ (ನೋಂದಣಿ ಸಂ. KA51 6030)ದಲ್ಲಿ ಬಂದ ಆರೇಳು ಮಂದಿ ಹಣವಿದ್ದ ವಾಹನ ಅಡ್ಡಗಟ್ಟಿ ಒಳಗಿದ್ದವರಿಗೆ ಮಾರಕಾಸ್ತ್ರ ತೋರಿ ಬೆದರಿಸಿ ಹಣ ದೋಚಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ದರೋಡೆಕೋರರ ಕೃತ್ಯ ತಡೆಯಲೆತ್ನಿಸಿದ ನವೀನ್ಗೆ ಮಚ್ಚಿನೇಟು ಬಿದ್ದು ಬಲಗೈ ಬೆರಳು ಕತ್ತರಿಸಿದೆ. ಗಾಯಾಳುವನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಚಂದ್ರಾಲೇಔಟ್ ಪೊಲೀಸ್ ಠಾಣೆ ವ್ಯಾಪ್ತಿಯ ಜ್ಯೋತಿನಗರದಲ್ಲಿ ಮಧ್ಯಾಹ್ನ ಸುಮಾರು 12.15 ರ ಸಮಯದಲ್ಲಿ ಈ ಘಟನೆ ನಡೆದಿದೆ.
ಭಾರತೀಯ ದಂಡ ಸಂಹಿತೆ ಸೆಕ್ಷನ್ 397 ರ ಅನ್ವಯ ಕೇಸು ದಾಖಲಿಸಿಕೊಂಡಿದ್ದು, ಮುಂದಿನ ತನಿಖೆ ಕೈಗೊಳ್ಳಲಾಗಿದೆ ಎಂದು ಚಂದ್ರಾಲೇಔಟ್ ಇನ್ ಪೆಕ್ಟರ್ ರಾಜೇಂದ್ರ ಹೇಳಿದರು.