ಜೀವದ ಆಸೆಯನ್ನೇ ಬಿಟ್ಟಿದ್ದ ರೋಗಿಗೆ ಮರುಜನ್ಮ

ತುಮಕೂರು ಜಿಲ್ಲೆಯವರಾದ ಶೇಖರಯ್ಯ ಎಂಬುವವರು ಚಿಕಿತ್ಸೆಗೊಳಗಾದ ವ್ಯಕ್ತಿ. ಅವರು ರಕ್ತದೊತ್ತಡ, ಹೆಪಟೈಟಿಸ್ ಬಿ ಸೋಂಕು ಮತ್ತು ಪ್ರಾಥಮಿಕ ಲಿವರ್ ಗಡ್ಡೆಗಳನ್ನು ಹೊಂದಿದ್ದರು. ಹೊಟ್ಟೆಯಲ್ಲಿ ದ್ರವ ಸಂಗ್ರಹಣೆ, ರಕ್ತವಾಂತಿ, ಪಾದಗಳ ಊತ ಮತ್ತು ಮಾನಸಿಕ ಅಸಮತೋಲನ ಮುಂತಾದ ತೊಂದರೆಗಳಿಂದ ಬಳಲುತ್ತಿದ್ದರು. ಜೀವಂತ ಉಳಿಯುವ ಭರವಸೆಯನ್ನೇ ಬಿಟ್ಟಿದ್ದ ಅವರಿಗೆ ಈ ಚಿಕಿತ್ಸೆಯಿಂದ ಮರುಜನ್ಮ ದೊರೆತಂತಾಗಿದೆ.
ಎಂಟು ಗಂಟೆಗಳ ಕಾಲ ನಡೆದ ಶಸ್ತ್ರಚಿಕಿತ್ಸೆಯನ್ನು ಗ್ಲೋಬಲ್ ಹಾಸ್ಪಿಟಲ್ಸ್ ಗ್ರೂಪ್ನ ಮುಖ್ಯ ಅಂಗಕಸಿ ಶಸ್ತ್ರಕ್ರಿಯಾ ತಜ್ಞ ಡಾ. ಮೊಹಮದ್ ರೇಲಾ ನೇತೃತ್ವದ 20 ಸದಸ್ಯರ ತಂಡ ನಡೆಸಿತು. ರಾಜ್ಯದ ಅತ್ಯಂತ ದೊಡ್ಡ ಮತ್ತು ಸುಸಜ್ಜಿತ ಅಂಗ ಕಸಿ ಮತ್ತು ಲಿವರ್ ತೀವ್ರ ನಿಗಾ ಘಟಕದಲ್ಲಿ ಅವರು ಯಾವುದೇ ತೊಂದರೆ ಇಲ್ಲದೇ ಕ್ಷಿಪ್ರ ಗತಿಯಲ್ಲಿ ಚೇತರಿಸಿಕೊಂಡಿದ್ದರು.
ಗ್ಲೋಬಲ್ ಹಾಸ್ಪಿಟಲ್ಸ್ ಗುಂಪಿನ ಚೇರ್ಮನ್ ಮತ್ತು ವ್ಯವಸ್ಥಾಪಕ ನಿರ್ದೇಶಕ ಡಾ. ಕೆ. ರವೀಂದ್ರನಾಥ್ ಅವರು ಮಾತನಾಡಿ, ಬದಲಿ ಲಿವರ್ ಜೋಡಣೆ ಮಾಡಿಸಿಕೊಂಡವರಿಗೆ ಈಗ ಹೊಸ ಜೀವನದ ಅವಕಾಶ ಸಿಕ್ಕಿರುವುದಕ್ಕೆ ನಮಗೆ ಸಂತಸವಾಗುತ್ತಿದೆ. ಕೇವಲ ಮೂರು ದಿನಗಳ ಕಾಲ ತೀವ್ರ ನಿಗಾ ಘಟಕದಲ್ಲಿ ವಾಸ್ತವ್ಯದ ನಂತರ ರೋಗಿ ಆಸ್ಪತ್ರೆಯಿಂದ ಬಿಡುಗಡೆಗೆ ಸಿದ್ಧರಾಗಿದ್ದರು. ಸಾಮಾನ್ಯವಾಗಿ ಲಿವರ್ ಕಸಿ ಮಾಡಿಸಿಕೊಂಡವರು 21 ದಿನಗಳ ಕಾಲ ಆಸ್ಪತ್ರೆಯಲ್ಲಿರಬೇಕಾಗುತ್ತದೆ. ಶಸ್ತ್ರಕ್ರಿಯೆಯ ಸಂಕೀರ್ಣತೆಯನ್ನು ಗಮನಿಸಿದರೆ ಕರ್ನಾಟಕದಲ್ಲಿ ಇದು ತನ್ನ ರೀತಿಯ ಪ್ರಥಮ ಕ್ರಮವಾಗಿದೆ ಎಂದರು.
ಬಿಜಿಎಸ್ ಗ್ಲೋಬಲ್ ಹಾಸ್ಪಿಟಲ್ಸ್ನ ವೈಸ್ ಚೇರ್ಮನ್ ಡಾ. ಎನ್. ಕೆ. ವೆಂಕಟರಮಣ ಅವರು ಈ ಸಂದರ್ಭದಲ್ಲಿ ಮಾತನಾಡಿ, ಅನುಭವಿ ಶಸ್ತ್ರಚಿಕಿತ್ಸಾ ತಜ್ಞರು, ಲಿವರ್ ತಜ್ಞರು, ತಂತ್ರಜ್ಞರು ಮತ್ತು ಅರೆವೈದ್ಯಕೀಯ ಸಿಬ್ಬಂದಿಗಳು ಸೇರಿ ನಡೆಸಿದ ಉತ್ಕೃಷ್ಟ ಸಾಂಘಿಕ ಪ್ರಯತ್ನ ಅಲ್ಲದೇ ಬಿಜಿಎಸ್ ಗ್ಲೋಬಲ್ ಹಾಸ್ಪಿಟಲ್ಸ್ನಲ್ಲಿನ ಅತ್ಯಾಧುನಿಕ ಲಿವರ್ ಐಸಿಯು ಹಾಗೂ ಮೂಲಸೌಕರ್ಯ ಇದನ್ನು ಸಾಧ್ಯವಾಗಿಸಿದೆ ಎಂದರು.












Click it and Unblock the Notifications