ಇನ್ನು ಹತ್ತು ದಿನ ಮಾತ್ರ ನೀರು ಲಭ್ಯ
ಜಲಾಶಯದ ನೀರಿನ ಮಟ್ಟ 74 ಅಡಿಯಷ್ಟಿದೆ. ಈಗ ಅದು 15 ಅಡಿಗೆಇಳಿದಿದೆ. ನೀರಿನ ಮಟ್ಟ 12 ಅಡಿಗೆ ಕುಸಿತ ಕಂಡ ತಕ್ಷಣ ಜಲಪೂರೈಕೆಯನ್ನು ನಿಲ್ಲಿಸಲಾಗುವುದು ಎಂದು ಬೆಂಗಳೂರು ನೀರು ಸರಬರಾಜು ಹಾಗೂ ಒಳಚರಂಡಿ ಮಂಡಳಿಯ ಇಂಜಿನಿಯರ್ ವೆಂಕಟ ರಾಜು ಹೇಳಿದರು.
ತಿಪ್ಪಗೊಂಡನಹಳ್ಳಿ ಜಲಾಶಯಕ್ಕೆ ಅರ್ಕಾವತಿ, ಕುಮುದ್ವತಿ ನದಿಗಳಿಂದ ನೀರು ಬಂದು ಸೇರುವುದು ಕಮ್ಮಿಯಾಗಿದೆ. ಇತ್ತೀಚಿಗೆ ಈ ಪ್ರದೇಶದಲ್ಲಿ ಮಳೆಯಾಗಿದ್ದರೂ, ಪ್ರಯೋಜನವಾಗಿಲ್ಲ. ನಗರೀಕರಣ, ಕೈಗಾರಿಕೆಗಳ ಮಾಲಿನ್ಯದಿಂದ ಅಂತರ್ಜಲ ಬತ್ತಿಹೋಗಿದ್ದು, ಅಳಿದುಳಿದ ನೀರು ಕೂಡ ಕಲುಷಿತಗೊಳ್ಳುತ್ತಿದೆ. ಇಸ್ರೋ ತನ್ನ ತಂತ್ರಜ್ಞಾನ ಬಳಸಿಮಾಲಿನ್ಯಮಯ ನೀರನ್ನು ಪುನರ್ ಬಳಕೆ ಮಾಡಲು ಪ್ರಯತ್ನಿಸುತ್ತಿದೆ ಎಂದು ವೆಂಕಟರಾಜು ತಿಳಿಸಿದರು.
1933 ರಲ್ಲಿ ಬೆಂಗಳೂರಿಗರ ಕುಡಿಯುವ ನೀರಿನ ಬವಣೆ ನೀಗಿಸಲು ಸರ್ ಎಂ.ವಿಶ್ವೇಶ್ವರಯ್ಯ ನವರು ಈ ಜಲಾಶಯ ಸ್ಥಾಪಿಸಿದರು. ಪ್ರತಿನಿತ್ಯ ಸುಮಾರು 30 ಮಿಲಿಯನ್ ಲೀಟರ್ ನೀರನ್ನು ಜಲಮಂಡಳಿ ಇಲ್ಲಿಂದ ಪಶ್ಚಿಮ ಬೆಂಗಳೂರಿನ ಸುಮಾರು 20 ಸಾವಿರ ಮನೆಗಳಿಗೆ ಹರಿಸುತ್ತದೆ. ಜಲಾಶಯ ಪರಿಸ್ಥಿತಿ ಅರಿತಿರುವ ಜಲಮಂಡಳಿಯವರು ದಕ್ಷಿಣ ಬೆಂಗಳೂರಿನಿಂದ ಪಶ್ಚಿಮ ಭಾಗದ ನಾಗರಿಕರಿಗೆ ನೀರುಣಿಸಲು ಯೋಜನೆ ಹಾಕಿಕೊಂಡಿದ್ದಾರೆ.