ಉಡುಪಿಯಲ್ಲಿ ಏಕಾದಶಿ ದಿನ ಉಪಾಹಾರ!
ಏಕಾದಶಿ ದಿನದಂದು ಮಧ್ಯಾಹ್ನ ಮಾತ್ರವಲ್ಲದೆ ಸಂಜೆಯೂ ಉಪ್ಪಿಟ್ಟು - ಅವಲಕ್ಕಿ ವ್ಯವಸ್ಥೆ ಮಾಡಲಾಗಿದೆ. ತಿಂಗಳಿಗೆ ಎರಡು ಏಕಾದಶಿ ಬರುತ್ತಿದ್ದು, ಕೆಲವರ ತೀವ್ರ ವಿರೋಧದ ನಡುವೆಯೂ ಜಾರಿಗೆ ಬಂದ ಉಪಹಾರ ವ್ಯವಸ್ಥೆಯಿಂದಾಗಿ ದೂರದ ಊರಿನಿಂದ ಏಕಾದಶಿಯ ಅರಿವಿಲ್ಲದೆ ಶ್ರೀ ಕೃಷ್ಣ ಪ್ರಸಾದ ಬಯಸಿ ಬರುವ ಭಕ್ತಾದಿಗಳಿಗೆ ಅನುಕೂಲವಾಗಲಿದೆ. ಉಪಹಾರಕ್ಕೆ ಸ್ಟೀಲ್ ತಟ್ಟೆ ಒದಗಿಸುವ ವ್ಯವಸ್ಥೆಯೂ ಜಾರಿಗೆ ಬಂದಿದ್ದು ಬಾಳೆ ಎಲೆ ಸಹಿತ ಬಫೆ ವ್ಯವಸ್ಥೆ ಮುಂದಿನ ಏಕಾದಶಿ ಸಂದರ್ಭದಲ್ಲಿ ಜಾರಿಗೆ ತರಲು ಪರ್ಯಾಯ ಮಠ ನಿರ್ಧರಿಸಿದೆ.
ಇಲ್ಲಿಗೆ ಬರುವ ಭಕ್ತರು ಬರೀ ಹೊಟ್ಟೆಯಲ್ಲಿ ಹೋಗಬಾರದೆನ್ನುವ ಉದ್ದೇಶದಿಂದ ತಮ್ಮ ಪರ್ಯಾಯ ಅವಧಿ ಮುಗಿಯುವ ತನಕ ಈ ವ್ಯವಸ್ಥೆ ಜಾರಿಯಲ್ಲಿರುವುದು. ಅಷ್ಠ ಮಠಗಳಲ್ಲಿರುವ ಏಕಾದಶಿ ಆಚರಣೆ ಗೊಂದಲ ನಿವಾರಣೆಗೆ ಯತ್ನಿಸಲಾಗುವುದು. ಶ್ರೀ ಮಧ್ವರ ಪ್ರಮಾಣಗಳನ್ನು ಆಧರಿಸಿ ಶ್ರೀಸೋದೆ ವಾದಿರಾಜ ತೀರ್ಥರು ಜಾರಿಗೆ ತಂದ ತಿಥಿ ನಿರ್ಣಯ ಪಂಚಾಂಗವನ್ನು ನಾವು ಅನುಸರಿಸುತ್ತಿದ್ದೇವೆ. ಏಕಾದಶಿ ಉಪವಾಸ ಕಡ್ಡಾಯ, ಆದರೆ ಉಪವಾಸ ಮಾಡದ ಭಕ್ತರಿಗೆ ತೊಂದರೆಯಾಗಬಾರದೆಂದು ಪರ್ಯಾಯ ಶ್ರೀಗಳು ಹೇಳಿಕೆ ನೀಡಿದ್ದಾರೆ.