ಬಿಜೆಪಿ ಮುಸ್ಲಿಂ ವಿರೋಧಿ ಪಕ್ಷವಲ್ಲ : ಗಡ್ಕರಿ
ಭಾನುವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಬಿಜೆಪಿ ಕೋಮುವಾದಿಯಾಗಲಿ, ಜಾತಿ ಆಧಾರಿತ ಪಕ್ಷವಲ್ಲ ಎಂದರು. ಅಯೋಧ್ಯೆಯಲ್ಲಿ ರಾಮ ಮಂದಿರ ಕಟ್ಟುವ ವಿಷಯದಲ್ಲಿ ಬಿಜೆಪಿ ಯಾವುದೇ ರಾಜೀ ಸಂಧಾನ ಮಾಡಿಕೊಳ್ಳಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಬಿಜೆಪಿ ಯಾವುದೇ ಧರ್ಮದ ವಿರೋಧಿಯಲ್ಲ, ಪಕ್ಷ ಆಕಸ್ಮಿಕ ಮುಸ್ಲಿಂ ವಿರೋಧಿಯಾಗಿ ಹಾದಿ ತುಳಿಯಬೇಕಾಯಿತು ಎಂದು ವಿವರಿಸಿದರು.
ಭಾವನೆ ಮತ್ತು ವಾಸ್ತವಾಂಶಗಳೇ ಬಿಜೆಪಿಯ ಮುಖ್ಯವಾದ ಸಮಸ್ಯೆಯಾಗಿದೆ ಎಂದ ಗಡ್ಕರಿ, ಇದೊಂದು ಆಕಸ್ಮಿಕ ಎಂದರು. ಕಾಂಗ್ರೆಸ್ ವಿರುದ್ಧ ಈ ಸಂದರ್ಭದಲ್ಲಿ ವಾಗ್ದಾಳಿ ನಡೆಸಿದ ಅವರು, ಸಂಸತ್ ಮೇಲೆ ದಾಳಿ ನಡೆಸಿದ ಅಫ್ಜಲ್ ಗುರು ಮುಸ್ಲಿಮ್ ಎಂಬ ಕಾರಣಕ್ಕಾಗಿಯೇ ಆತನನ್ನು ನೇಣುಗಂಬಕ್ಕೆ ಏರಿಸದೆ ರಾಜಕೀಯ ಮಾಡುತ್ತಿದೆ ಎಂದು ಹರಿಹಾಯ್ದರು.
ನಾವು ಮುಸ್ಲಿಮರ ವಿರೋಧಿಯಲ್ಲ, ಪಕ್ಷ ಮುಸ್ಲಿಮರನ್ನು ತಲುಪುವ ಕೆಲಸ ಮಾಡಲಿದೆ. ಇಸ್ಲಾಂ ಸಮುದಾಯದ ಜನರು ಭಾರತೀಯ ಜನತಾ ಪಕ್ಷ ಸೇರ್ಪಡೆಗೊಳ್ಳಬೇಕೆಂಬ ಇಚ್ಛೆ ಹೊಂದಿದೆ ಎಂದರು. ಮುಸ್ಲಿಂ ಸಮುದಾಯದಲ್ಲಿನ ಹಸಿವು, ಬಡತನ ಮತ್ತು ಶಿಕ್ಷಣದ ಕೊರತೆಯನ್ನು ನೀಗಿಸುವ ಯೋಜನೆ ಹೊಂದಿರುವುದಾಗಿಯೂ ಗಡ್ಕರಿ ಹೇಳಿದರು.