ಡೊನೇಷನ್ ನಿಗ್ರಹಕ್ಕೆ ಲೋಕಾಯುಕ್ತ ಅಸ್ತ್ರ
ನಗರದಲ್ಲಿ ಗುರುವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ವಿಶ್ವೇಶ್ವರ ಹೆಗಡೆ ಕಾಗೇರಿ, ಪಾಲಕರಿಂದ ಅಭಿವೃದ್ಧಿಯ ಹೆಸರಿನಲ್ಲಿ ಅಥವಾ ಇನ್ನಾವುದೇ ಹೆಸರಿನಲ್ಲಿ ಖಾಸಗಿ ಶಿಕ್ಷಣ ಸಂಸ್ಥೆಗಳು ಡೊನೇಷನ್ ಸಂಗ್ರಹಿಸುವುದನ್ನು ತಡೆಯಲು ಸರಕಾರವೇ ಒಂದು ವಿಚಕ್ಷಣಾ ದಳವನ್ನು ರಚಿಸಲು ತಿರ್ಮಾನಿಸಿದೆ ಎಂದರು.
ಈ ವಿಚಕ್ಷಣಾ ದಳದಲ್ಲಿ ಶಿಕ್ಷಣ ಇಲಾಖೆ, ಸಹಕಾರ ಇಲಾಖೆ, ಪೊಲೀಸ್ ಇಲಾಖೆಯ ಪ್ರಮುಖರು ಇರಲಿದ್ದು, ಅದು ಕಾಲಕಾಲಕ್ಕೆ ವಸೂಲಿ ಮಾಡುವ ಶಿಕ್ಷಣ ಸಂಸ್ಥೆಗಳಿಗೆ ಹೋಗಿ ಪರಿಶೀಲನೆ ನಡೆಸಲಿದೆ ಎಂದು ಹೇಳಿದರು. ಯಾವುದೇ ರೀತಿಯಲ್ಲಿ ಅವು ಡೊನೇಷನ್ ವಸೂಲಿ ಮಾಡಲಿ, ವಿಚಕ್ಷಣಾ ದಳ ಅದನ್ನು ಪತ್ತೆ ಮಾಡಲಿದೆ. ಈ ಎಲ್ಲದರ ಮಧ್ಯೆ ಅಗತ್ಯ ಬಿದ್ದರೆ ಲೋಕಾಯುಕ್ತ ಅಸ್ತ್ರವನ್ನು ಬಳಸಿಕೊಳ್ಳುವ ಚಿಂತನೆ ನಡೆಸಲಾಗಿದೆ ಎಂದು ಕಾಗೇರಿ ವಿವರಿಸಿದರು.
ಶಿಕ್ಷಣ ನೀಡುವಂತ ಪವಿತ್ರ ಕೆಲಸ ಇವತ್ತು ವ್ಯಾಪಾರೀಕರಣವಾಗಿ ಬದಲಾಗಿದ್ದು, ಇದನ್ನು ಬದಲಿಸುವ ದೃಷ್ಟಿಯಿಂದ ಲೋಕಾಯುಕ್ತರ ಸೇವೆಯನ್ನು ಪಡೆಯಲಾಗುವುದು ಎಂದರು.