ರೆಡ್ಡಿ ಸೋದರರ ರಾಜೀನಾಮೆ ಕೇಳಿದ ಕಾಂಗ್ರೆಸ್
ಅಕ್ರಮ ಗಣಿಗಾರಿಕೆಯಲ್ಲಿ ತೊಡಗಿರುವ ಆರೋಪಗಳನ್ನು ಎದುರಿಸುತ್ತಿರುವ ಪ್ರವಾಸೋದ್ಯಮ ಸಚಿವ ಜನಾರ್ದನ ರೆಡ್ಡಿ ಮತ್ತು ಅವರ ಹಿರಿಯ ಸಹೋದರ, ಕಂದಾಯ ಸಚಿವ ಕರುಣಾಕರ ರೆಡ್ಡಿಯವರ ರಾಜೀನಾಮೆಗೆ ಕಾಂಗ್ರೆಸ್ ಒತ್ತಾಯಿಸುತ್ತಿದೆ. ಇದರೊಂದಿಗೆ ಐಪಿಎಲ್ ಕೊಚ್ಚಿ ವಿವಾದಕ್ಕೆ ಸಂಬಂಧಪಟ್ಟಂತೆ ತರೂರ್ ರಾಜೀನಾಮೆಗೆ ಭಾರೀ ಒತ್ತಡ ಹೇರಿದ್ದ ಬಿಜೆಪಿ ತೀವ್ರ ಒತ್ತಡಕ್ಕೆ ಸಿಲುಕಿದೆ. ಕರ್ನಾಟಕ ಮತ್ತು ಆಂಧ್ರಪ್ರದೇಶಗಳಲ್ಲಿ ತಮ್ಮ ಓಬಳಾಪುರಂ ಮೈನಿಂಗ್ ಕಂಪನಿ ಮೂಲಕ ಅಕ್ರಮ ಗಣಿಗಾರಿಕೆ ನಡೆಸುತ್ತಿರುವ ಕರ್ನಾಟಕದ ಇಬ್ಬರೂ ಸಚಿವರನ್ನು ಇನ್ನೂ ಯಾಕೆ ಬಿಜೆಪಿ ಇಟ್ಟುಕೊಂಡಿದೆ ಎಂದು ಕಾಂಗ್ರೆಸ್ ವಕ್ತಾರ ಅಭಿಷೇಕ್ ಮನು ಸಿಂಘ್ವಿ ಪ್ರಶ್ನಿಸಿದ್ದಾರೆ.
ವಿಡಿಯೋ:ರೆಡ್ಡಿ ಸೋದರರ ಮೇಲೇಕೆ ಕ್ರಮವಿಲ್ಲ?
ರೆಡ್ಡಿ ಸಹೋದರರು ನಡೆಸುತ್ತಿರುವ ಅಕ್ರಮ ಗಣಿಗಾರಿಕೆ ಬಗ್ಗೆ ಇತ್ತೀಚೆಗಷ್ಟೇ ದಿ ಇಂಡಿಯನ್ ಎಕ್ಸ್ಪ್ರೆಸ್ ದಿನಪತ್ರಿಕೆಯೊಂದು ಸರಣಿ ಲೇಖನಗಳನ್ನು ಮುಖಪುಟದಲ್ಲೇ ಪ್ರಕಟಿಸಿತ್ತು.ಇಷ್ಟಾದರೂ ಇವರ ಬಗ್ಗೆ ಬಿಜೆಪಿ ಚಕಾರವೆತ್ತುತ್ತಿಲ್ಲವೇಕೆ ಎಂದಿರುವ ಸಿಂಘ್ವಿ, ತರೂರ್ ವಿರುದ್ಧ ಆರೋಪಗಳು ಬಂದ ಕೆಲವೇ ದಿನಗಳಲ್ಲಿ ಕಾಂಗ್ರೆಸ್ ನೇತೃತ್ವದ ಸರಕಾರ ಹೇಗೆ ನಿಭಾಯಿಸಿದೆ ಎಂಬುದನ್ನು ನೋಡಿ ಕಲಿಯರಿ ಎಂದರು.
ಬಿಜೆಪಿ ಸಮರ್ಥನೆ: ತರೂರ್ ವಿರುದ್ಧ ಕಾಂಗ್ರೆಸ್ ಕೈಗೊಂಡಿರುವ ಕ್ರಮದಿಂದ ಕಾಂಗ್ರೆಸ್ ಪಕ್ಷದ ವಿಶ್ವಾಸಾರ್ಹತೆ ಹೆಚ್ಚಿದೆ . ರೆಡ್ಡಿಗಳ ವಿರುದ್ಧ ನ್ಯಾಯಾಲಯದ ತೀರ್ಪಿಗಾಗಿ ನಾವು ಕಾಯುತ್ತಿದ್ದೇವೆ.ಪ್ರಕರಣವು ಸುಪ್ರೀಂ ಕೋರ್ಟ್ನಲ್ಲಿರುವುದರಿಂದ ರೆಡ್ಡಿ ಸಹೋದರರ ವಿರುದ್ಧ ಯಾವುದೇ ಕ್ರಮಗಳನ್ನು ಕೈಗೊಂಡಿಲ್ಲ ಎಂದು ಬಿಜೆಪಿ ವಕ್ತಾರ ರವಿ ಶಂಕರ್ ಪ್ರಸಾದ್ ಸಮರ್ಥನೆ ನೀಡಿದರು.