ತ.ನಾಡು ವಿಧಾನಸಭೆಯಲ್ಲಿ ಮೊಳಗಿತು ಕನ್ನಡ ದನಿ
ಗಡಿನಾಡಿನಲ್ಲಿ ಕನ್ನಡಿಗ ಶಿಕ್ಷಕರ ನೇಮಕ ಸೇರಿದಂತೆ ಇತರ ವಿಚಾರಗಳ ಬಗ್ಗೆ ಕನ್ನಡದಲ್ಲಿ ಮಾತನಾಡಿದ ಅವರು, ಭಾಷಾ ಅಲ್ಪಸಂಖ್ಯಾತರಿಗೆ ಕನ್ನಡ ಅಥವಾ ತೆಲುಗು ಭಾಷೆಗಳನ್ನು ಪ್ರಥಮ ಭಾಷೆಯನ್ನಾಗಿ ಆಯ್ಕೆ ಮಾಡಿಕೊಳ್ಳಲು ಅವಕಾಶ ನೀಡಬೇಕು ಎಂದು ಆಗ್ರಹಿಸಿದರು. ತಮಿಳುನಾಡಿನ ಜನರಿಗೆ ತಮ್ಮ ಭಾಷೆ ಗಳನ್ನು ನಾಲ್ಕನೇ ಭಾಷೆಯಾಗಿ ಆರಿಸಿಕೊಳ್ಳುವ ಅವಕಾಶ ಮಾತ್ರವಿದೆ ಎಂದು ಹೇಳುವ ಮೂಲಕ ಅಲ್ಲಿನ ಶಿಕ್ಷಣ ಸಚಿವರ ಗಮನ ಸೆಳೆದರು.
ಎಐಎಡಿಎಂಕೆ ವಿರೋಧ: ಗೋಪಿನಾಥ್ ಅವರು ಹೊಸ ವಿಧಾನಸಭೆ ಸಂಕೀರ್ಣ ರೂಪಿಸಿದ ಕರುಣಾನಿಧಿ ಯವರನ್ನು ಶ್ಲಾಘಿಸುವ ಮೂಲಕ ಮಾತು ಆರಂಭಿಸಿದರು. ಇಂಥ 'ಮಯ ಸಭಾ'ದ ರೂವಾರಿಗೆ ಹೊಸೂರು ಕ್ಷೇತ್ರದ ಕನ್ನಡ ಮತ್ತು ತಮಿಳು ಭಾಷಿಕರ ಅಭಿನಂದನೆಗಳು ಎಂದು ಕನ್ನಡ ಮತ್ತು ತೆಲುಗಿನಲ್ಲಿ ಹೇಳಿದರು. ಇಂಗ್ಲಿಷ್ ಜತೆಗೆ ಹಿಂದಿಯನ್ನೂ ಅವರು ಈ ಸಂದರ್ಭದಲ್ಲಿ ಬಳಸಿದರು. ಗೋಪಿನಾಥ್ ಮಾತಿಗೆ ಎಐಎಡಿಎಂಕೆ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿ, ತಮಗೆ ಅರ್ಥವಾಗದ ಭಾಷೆ ಪ್ರಯೋಗಕ್ಕೆ ಅವಕಾಶ ನೀಡಬಾರದು ಎಂದು ಸ್ಪೀಕರ್ಗೆ ಮನವಿ ಮಾಡಿದರು.
ಶಾಸಕರು ಯಾವುದೇ ಭಾರತೀಯ ಭಾಷೆಯಲ್ಲಿ ಮಾತನಾಡಲು ಅವಕಾಶವಿದೆ ಎಂದು ಸ್ಪೀಕರ್ ಹೇಳಿದಾಗ ಎಐಎಡಿಎಂಕೆ ಸದಸ್ಯರು ಸುಮ್ಮನಾಗಬೇಕಾಯಿತು. ಗೋಪಿನಾಥ್ ಅವರು ಕನ್ನಡಿಗರಿಗೆ ಬೆಂಬಲ ನೀಡುತ್ತಾ ಬಂದಿದ್ದು, ಕನ್ನಡ ರಾಜ್ಯೋತ್ಸವ ಸೇರಿದಂತೆ ಕನ್ನಡದ ಹಲವು ಕಾರ್ಯಕ್ರಮಗಳಿಗೂ ಹಾಜರಾಗುತ್ತಿದ್ದಾರೆ. ಇದೀಗ ಕನ್ನಡವನ್ನು ತಮಿಳುನಾಡು ವಿಧಾನ ಸಭೆಗೂ ಕೊಂಡೊಯ್ಯುವ ಮೂಲಕ ಗಡಿನಾಡಿನ ಕನ್ನಡಿಗರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.