ಬೆಂಗಳೂರಿನಲ್ಲಿ ಕೆನ್ನಾಲಿಗೆ, ಜೀವ ಹಾನಿ ಇಲ್ಲ
ಮಧ್ಯಾಹ್ನ 3.40ಕ್ಕೆ ಗೋದಾಮಿಗೆ ಬೆಂಕಿ ಕಾಣಿಸಿಕೊಂಡಿದ್ದು, ಶಾರ್ಟ್ ಸರ್ಕ್ಯೂಟ್ ನಿಂದಾಗಿ ಆಕಸ್ಮಿಕ ಬೆಂಕಿ ತಗುಲಿದ್ದರಿಂದ ಇಡೀ ಕಟ್ಟಡಕ್ಕೆ ಬೆಂಕಿ ವ್ಯಾಪಿಸಿತು. ಕಟ್ಟಡದ ಎರಡು ಮತ್ತು ಮೂರನೇ ಮಹಡೆ ಬೆಂಕಿ ವ್ಯಾಪಿಸಿದ್ದು, ಗೋದಾಮಿನಲ್ಲಿ ಸಂಗ್ರಹಿಸಿಡಲಾಗಿದ್ದ ಅಗತ್ಯವಸ್ತುಗಳು, ಎಲೆಕ್ಟ್ರಾನಿಕ್ ವಸ್ತುಗಳು ಸಂಪೂರ್ಣ ಕರಕಲಾಗಿವೆ.
ಸುಮಾರು 15ಕ್ಕೂ ಹೆಚ್ಚು ಅಗ್ನಿಶಾಮಕ ದಳಗಳು ಬೆಂಕಿ ನಂದಿಸಲು ನಿರತವಾಗಿದ್ದರಿಂದ ಬೆಂಕಿ ತಹಬದಿಗೆ ಬಂದಿತು. ಆದರೆ, ಇದಕ್ಕೂ ಮುನ್ನ ಕೆನ್ನಾಲಿಗೆ ವ್ಯಾಪಕವಾಗಿದ್ದರಿಂದ ನಿಯಂತ್ರಣಕ್ಕೆ ತರಲು ಭಾರಿ ಹರಸಾಹಸ ಮಾಡಬೇಕಾಯಿತು. ಇದರಿಂದ ಅಕ್ಕಪಕ್ಕ ಕಟ್ಟಡಕ್ಕೂ ಬೆಂಕಿ ವ್ಯಾಪಿಸತೊಡಗಿತ್ತು. ಜೊತೆಗೆ ದಟ್ಟವಾದ ಹೊಗೆ ಸೃಷ್ಟಿಯಾಗಿತ್ತು. ಇದರಿಂದ ಘಟನಾ ಸ್ಥಳದಲ್ಲಿ ಕೆಲ ಕಾಲ ಆತಂಕ ಉಂಟಾಗಿತ್ತು. ಬೆಂಕಿ ಆಕಸ್ಮಿಕ ಸಂಭವಿಸಿದ ಸಮಯದಲ್ಲಿ ಗೋದಾಮಿನಲ್ಲಿದ್ದ ಸಿಬ್ಬಂದಿ ಹೊರಕ್ಕೆ ಬಂದಿದ್ದರಿಂದ ಜೀವ ಸಂಭವಿಸಿಲ್ಲ.
ಅಗ್ನಿಶಾಮಕ ದಳದ ಡಿಜಿಪಿ ಜೀಜಾ ಹರಿಸಿಂಗ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕಟ್ಟಡದ ಎರಡನೇ ಮಹಡಿಯಲ್ಲಿ ಬೆಂಕಿ ಕಾಣಿಸಿಕೊಂಡ ನಂತರ ಸಂಪೂರ್ಣ ಕಟ್ಟಡಕ್ಕೆ ವ್ಯಾಪಿಸಿದೆ. ಕೆಲವೇ ಹೊತ್ತಿನಲ್ಲಿ ಬೆಂಕಿಯನ್ನು ನಂದಿಸಲಾಗುವುದು ಎಂದು ಹೇಳಿದ್ದಾರೆ. ಘಟನೆಯಲ್ಲಿ ಯಾವುದೇ ಜೀವ ಹಾನಿ ಸಂಭವಿಸಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.