ಬ್ಯಾಲಾಳು ಶೂಟೌಟ್, ಉಗ್ರರ ಕೃತ್ಯವಲ್ಲ: ಚಿದು
ಬ್ಯಾಲಾಳುವಿನಲ್ಲಿ ನಡೆದ ಶೂಟೌಟ್ ಉಗ್ರರ ಕೃತ್ಯವಲ್ಲ. ಅಪರಿಚಿತರ ಗುಂಡಿನ ದಾಳಿಯಿಂದಾಗಿ ಇಸ್ರೋಗೆ ಯಾವುದೇ ರೀತಿಯ ತೊಂದರೆಗಳಾಗಿಲ್ಲ. ಭದ್ರತಾ ವಿಚಾರಗಳನ್ನು ಮರುಪರಿಶೀಲನೆ ನಡೆಸುವಂತೆ ಸಿಐಎನ್ ಎಫ್ಗೆ ಸೂಚನೆ ನೀಡಲಾಗಿದ್ದು, ಇಸ್ರೋ ಅಥವಾ ಅದರ ಘಟಕಗಳಿಗೆ ಯಾವುದೇ ಅಪಾಯವಿಲ್ಲ ಎಂದು ಗೃಹಸಚಿವ ಪಿ.ಚಿದಂಬರಂ ಸ್ಪಷ್ಟಪಡಿಸಿದರು.
ನಗರ ಹೊರವಲಯದಲ್ಲಿ ಇರುವ ಇಸ್ರೋ ಸಂಸ್ಥೆಗೆ ಸೇರಿದ ಐಡಿಎಸ್ಎನ್ ಕೇಂದ್ರದ ಬಳಿ ಇಬ್ಬರು ಅಪರಿಚಿತರು ಮತ್ತು ಭದ್ರತಾ ಸಿಬ್ಬಂದಿ ನಡುವೆ ಗುಂಡಿನ ಚಕಮಕಿ ಮಂಗಳವಾರ ನಸುಕಿನಲ್ಲಿ ನಡೆದಿದೆ. ಭದ್ರತಾ ಸಿಬ್ಬಂದಿ ಗುಂಡು ಹಾರಿಸಿದಾಗ ಅಪರಿಚಿತರಿಬ್ಬರು ಕತ್ತಲಿನಲ್ಲಿ ಪರಾರಿಯಾಗಿದ್ದಾರೆ. ಅನುಮಾನಾಸ್ಪದವಾಗಿ ಓಡಾಡುತ್ತಿದ್ದ ಇಬ್ಬರನ್ನು ಭದ್ರತಾ ಸಿಬ್ಬಂದಿ ಪ್ರಶ್ನಿಸಿದಾಗ ಅವರು ಸಣ್ಣ ಪಿಸ್ತೂಲಿನಿಂದ ಭದ್ರತಾ ಸಿಬ್ಬಂದಿಯತ್ತ ಗುಂಡು ಹಾರಿಸಿದ್ದಾರೆ. ಈ ಘಟನೆ ಮಧ್ಯರಾತ್ರಿ 3.20 ರಿಂದ 4 ಗಂಟೆ ಸಮಯದಲ್ಲಿ ನಡೆದಿದೆ ಎಂದು ಇಸ್ರೋ ಮೂಲಗಳು ತಿಳಿಸಿವೆ.
ಭಯೋತ್ಪಾದಕ ಕೃತ್ಯ ಅಲ್ಲ: ಇಸ್ರೋ ಕೇಂದ್ರದ ಮೇಲೆ ಭಯೋತ್ಪಾದಕರ ದಾಳಿ ನಡೆದಿಲ್ಲ ಎಂದು ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕರು ಭಾನುವಾರ ಸ್ಪಷ್ಟಪಡಿಸಿದ್ದಾರೆ. ನಗರದ ಹೊರವಲಯದ ಬ್ಯಾಲಾಳುವಿನಲ್ಲಿ ಇರುವ ಇಸ್ರೋದ ಇಂಡಿಯನ್ ಡೀಪ್ ಸ್ಪೇಸ್ ನೆಟ್ವರ್ಕ್ (ಐಡಿಎಸ್ಎನ್) ಕೇಂದ್ರದ ಮೇಲೆ ಭಾನುವಾರ ಬೆಳಗಿನ ಜಾವ ಶಸ್ತ್ರಾಸ್ತ್ರ ಹೊಂದಿದ್ದ ಇಬ್ಬರು ಗುಂಡು ಹಾರಿಸಿದರು ಎಂದು ಅಲ್ಲಿನ ಕೇಂದ್ರ ಕೈಗಾರಿಕಾ ಭದ್ರತಾ ಸಿಬ್ಬಂದಿ (ಸಿಐಎಸ್ ಎಫ್) ಮಾಡಿರುವ ಆರೋಪ ಕುರಿತಂತೆ ಎಡಿಜಿಪಿ ಎ.ಆರ್. ಇನ್ಫೆಂಟ್ ಸ್ಪಷ್ಟನೆ ನೀಡಿದ್ದಾರೆ.