ಲೈಂಗಿಕತೆ ಸಹಜ ಕ್ರಿಯೆ, ಸಚ್ಚಿದಾನಂದ
ಘಟನೆ ನಂತರ ಎರಡನೇ ಬಾರಿಗೆ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ನಿತ್ಯಾನಂದಸ್ವಾಮಿ ಎಂದಿಗೂ ಇಂತಹ ಕೆಲಸಕ್ಕೆ ಇಳಿಯಲು ಸಾಧ್ಯವೇ ಇಲ್ಲ. ಚೆನ್ನೈ ಮೂಲದ ಮಾಧ್ಯಮವೊಂದು ಪ್ರಸಾರ ಮಾಡಿದ ವಿಡಿಯೋ ಚಿತ್ರೀಕರಣದಲ್ಲಿ ಅನೇಕ ಸಂದೇಹಗಳಿವೆ. ಅಲ್ಲದೇ, ಅವರೊಂದಿಗೆ ಇದ್ದ ಮಹಿಳೆಯ ಮುಖವನ್ನು ಸರಿಯಾಗಿ ತೋರಿಸಿಲ್ಲ. ಚಿತ್ರದಲ್ಲಿರುವವರು ಸ್ವಾಮಿಗಳು ಎನ್ನುವುದಕ್ಕೆ ಯಾವುದೇ ಪುರಾವೆಗಳಿಲ್ಲ. ಇಂತಹ ವಿಡಿಯೋಗಳನ್ನು ಕೃತಕವಾಗಿ ತಯಾರಿಸಬಹುದು. ಒಟ್ಟಿನಲ್ಲಿ ಸ್ವಾಮೀಜಿ ಹೆಸರಿಗೆ ಮಸಿ ಬಳಿಯಲು ಭಾರಿ ಷಡ್ಯಂತ್ರ ರೂಪಿಸಿದ್ದಂತೂ ನಿಜ ಎಂದು ಸಚ್ಚಿದಾನಂದ ಸ್ವಾಮಿ ಸಮರ್ಥಿಸಿಕೊಂಡಿದ್ದಾರೆ.
ಲೈಂಗಿಕತೆ ಎನ್ನುವುದು ಮಾನವ ಸಜಹ ಕ್ರಿಯೆ ಎಂದು ನಿತ್ಯಾನಂದ ಶ್ರೀಗಳು ಹೇಳುತ್ತಿದ್ದರು. ಈ ಬಗ್ಗೆ ಸಾಕಷ್ಟು ಓದಿಕೊಂಡಿದ್ದರೂ ಕೂಡಾ. ಚಿಕ್ಕ ವಯಸ್ಸಿನಲ್ಲಿ ಸರ್ವಸ್ವವನ್ನೂ ತ್ಯಜಿಸಿ ಹಿಮಾಲಯಕ್ಕೆ ಹೋಗಿ ತಪಸ್ಸು ಮಾಡಿದ್ದ ಶ್ರೀಗಳಿಗೆ ಸ್ಪರ್ಷ ಚಿಕಿತ್ಸೆ ಸಿದ್ಧಿಸಿತ್ತು. ಎಂತಹ ಕಾಯಿಲೆಯನ್ನು ಅವರು ತಮ್ಮ ಕೈಗುಣದಿಂದಲೇ ವಾಸಿ ಮಾಡುತ್ತಿದ್ದರು. ಹೀಗಾಗಿ ಜಗತ್ತಿನಾದ್ಯಂತ ಲಕ್ಷಾಂತರ ಭಕ್ತಾಧಿಗಳನ್ನು ಶ್ರೀಗಳು ಹೊಂದಿದ್ದಾರೆ. ಘಟನೆ ಹೊರಬೀಳುತ್ತಿದ್ದಂತೆಯೇ ದೇಶ, ವಿದೇಶಗಳಿಂದ ಭಕ್ತಾದಿಗಳು ದೂರವಾಣಿ, ಈಮೇಲ್ ಮೂಲಕ ಧೈರ್ಯ ತುಂಬುತ್ತಿದ್ದಾರೆ ಎಂದು ಸಚ್ಚಿದಾನಂದ ವಿವರಿಸಿದರು.
ನಿತ್ಯಾನಂದಸ್ವಾಮಿಗಳು ಹರಿದ್ವಾರದ ಸುತ್ತಮುತ್ತ ಕುಂಭಮೇಳದಲ್ಲಿ ಇರಬಹುದು ಎಂದು ಅವರ ಕಾರ್ಯಕ್ರಮ ಪಟ್ಟಿಯಿಂದ ಗೊತ್ತಾಗಿದೆ. ಈವರೆಗೂ ಅವರ ಸಂಪರ್ಕ ಸಿಕ್ಕಿಲ್ಲ. ಅವರು ದೇಶ ಬಿಟ್ಟು ಹೋಗಿಲ್ಲ. ಇಂದು ಸಂಜೆ ವೇಳೆಗೆ ಅವರ ಸಂಪರ್ಕ ಸಾಧಿಸುವುದಾಗಿ ಸಚ್ಚಿದಾನಂದ ಹೇಳಿದರು.