3 ಸಾವಿರ ಶಿವಾಲಯಗಳಿಗೆ ಗಂಗಾಜಲ
ಉತ್ತರ ಭಾರತದ ಬ್ರಹ್ಮಕುಂಡದಿಂದ ಗಂಗಾಜಲ ಬಂದಿದ್ದು, ಇದಕ್ಕೆ ವಿಶೇಷ ಪೂಜೆ ಮಾಡಿದ ನಂತರ ಬಾಟಲ್ಗಳಲ್ಲಿ ತುಂಬಿ ವಿಶೇಷ ವಾಹನಗಳಲ್ಲಿ ರಾಜ್ಯದ ವಿವಿಧೆಡೆಗೆ ರವಾನಿಸಲಾಯಿತು. ಮುಜರಾಯಿ ಇಲಾಖೆ ಅನದಲ್ಲಿರುವ ರಾಜ್ಯದ ಸುಮಾರು 3 ಸಾವಿರ ಶಿವ ದೇವಾಲಯಗಳಿಗೆ ಗಂಗಾಜಲ ತಲುಪಲಿದೆ. ಗಂಗಾಜಲ ಕೊಂಡೊಯ್ಯಲು ಒಟ್ಟು 30 ವಿಶೇಷ ವಾಹನಗಳನ್ನು ನಿಯೋಜಿಸಲಾಗಿದೆ.
ಪ್ರತಿ ತಾಲೂಕಿನಲ್ಲೂ ಕನಿಷ್ಟ 10 ದೇವಾಲಯಗಳಿಗೆ ಗಂಗಾಜಲ ತಲುಪಲಿದ್ದು, ಅಲ್ಲಿಂದ ಸಾರ್ವಜನಿಕರಿಗೆ ವಿತರಣೆಯಾಗಲಿದೆ ಎಂದು ಮುಜರಾಯಿ ಮಂಡಳಿ ಅಧ್ಯಕ್ಷ ಬಿ.ಕೃಷ್ಣಯ್ಯ ಶೆಟ್ಟಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಬ್ರಹ್ಮಕುಂಡದಿಂದ ರಾಜ್ಯಕ್ಕೆ ಗಂಗಾಜಲ ಹೊತ್ತು ತಂದ ಟ್ಯಾಂಕರ್ ಗೆ ನಗರದ ಚಾಮರಾಜಪೇಟೆಯ ರಾಮೇಶ್ವರ ದೇವಾಲಯದಲ್ಲಿ ಒಂದು ತಾಸಿಗೂ ಹೆಚ್ಚು ಕಾಲ ವಿಶೇಷ ಪೂಜೆ ಸಲ್ಲಿಸಿದ ನಂತರ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ಈ ಸಂದರ್ಭ ಮಾತನಾಡಿದ ಅವರು,ಸನಾತನ ಧರ್ಮದ ನಿಯಮಗಳಂತೆ ಗಂಗಾಜಲ ಶಿವನಿಗೆ ಪ್ರಿಯವಾದುದು. ಹಾಗಾಗಿ ಈ ಶುಭ ದಿನದಂದು ಗಂಗಾಜಲವನ್ನು ಸೇವಿಸಿದರೆ ಅಥವಾ ಸ್ನಾನ ಮಾಡಿದರೆ ನಮ್ಮ ಎಲ್ಲ ಪಾಪಕರ್ಮ ದೂರವಾಗುತ್ತವೆ ಎಂದರು. ಪ್ರತಿ ವರ್ಷ ಮಹಾಶಿವರಾತ್ರಿ ಯಂದು ಈ ಕಾರ್ಯಕ್ರಮ ತಪ್ಪದೇ ಮುಂದುವರೆಸುತ್ತೇನೆ. ವೈಕುಂಠ ಏಕಾದಶಿಯಂದು ಲಡ್ಡು ಹಾಗೂ ಮಹಾಶಿವರಾತ್ರಿಯಂದು ಗಂಗಾಜಲ ವಿತರಿಸುವ ವ್ಯವಸ್ಥೆ ಮಾಡಿದ್ದೇನೆ ಎಂದು ಕೃಷ್ಣಯ್ಯ ಶೆಟ್ಟಿ ವಿವರಿಸಿದರು.