ಕೋಮುವಾದಿ ಸಂಘಟನೆಗಳನ್ನು ನಿಷೇಧಿಸಿ:ಸಿದ್ದು
ಚರ್ಚ್ ದಾಳಿಗೆ ಈ ಮೂರು ಸಂಘಟನೆಗಳು ಕಾರಣವೆಂದು ನಾವು ಮೊದಲೇ ಹೇಳಿದ್ದೆವು. ಆದರೆ ಮುಖ್ಯಮಂತ್ರಿ ಮತ್ತು ಗೃಹ ಸಚಿವರು ಇದರಲ್ಲಿ ಸಂಘ ಪರಿವಾರದ ಕೈವಾಡವಿಲ್ಲ ಎಂದು ದಾಳಿಕೋರರಿಗೆ ರಕ್ಷಣೆ ನೀಡುತ್ತಾ ಬಂದರು. ಘಟನೆಯ ಹಿಂದೆ ಪ್ರತಿಪಕ್ಷಗಳ ಕೈವಾಡವಿದೆ ಎಂದು ದೂರಿದ್ದರು. ಈಗ ಆಯೋಗದ ಮಧ್ಯಂತರ ವರದಿ ಬಂದಿದೆ, ಎಲ್ಲಾ ಅನುಮಾನಗಳು ಬಗೆಹರಿದಿದೆ. ಮುಖ್ಯಮಂತ್ರಿಗಳ ಬಣ್ಣ ಬಯಲಾಗಿದೆ ಎಂದು ಪ್ರತಿಕ್ರಿಯಿಸಿದ್ದಾರೆ.
ಹಿಂದೂ ಮತ್ತು ಕ್ರೈಸ್ತರ ನಡುವೆ ಸಾಮರಸ್ಯ ಹಾಳು ಮಾಡಿ ರಾಜಕೀಯ ಲಾಭ ಪಡೆಯುವ ಬಿಜೆಪಿ ಅಂಗ ಪಕ್ಷಗಳ ಹುನ್ನಾರ ಬಟ್ಟಬಯಲಾಗಿದೆ. ಹಾಗಾಗಿ, ಕೃತ್ಯದಲ್ಲಿ ಶಾಮೀಲಾಗಿರುವ ಕೋಮುವಾದಿ ಸಂಘಟನೆಗಳನ್ನು ನಿಷೇಧಿಸಿ ಮತ್ತು ಇದಕ್ಕೆ ಸಹಕರಿಸಿದ ಎಲ್ಲಾ ಅಧಿಕಾರಿಗಳನ್ನು ಸೇವೆಯಿಂದ ವಜಾಗೊಳಿಸಿ ಎಂದು ಸಿದ್ದು ಆಗ್ರಹಿಸಿದ್ದಾರೆ.
ಪ್ರತಿಪಕ್ಷದ ಕೆಲವು ಮುಖಂಡರು ಯಡಿಯೂರಪ್ಪ ಅವರ ಜೊತೆ ಶಾಮೀಲಾಗಿದ್ದಾರೆನ್ನುವ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಆರೋಪದ ಬಗ್ಗೆ ಪ್ರತಿಕ್ರಿಯಿಸಿದ ಸಿದ್ದು, ನಿಮ್ಮ ತಟ್ಟೆಯಲ್ಲಿ ಹೆಗ್ಗಣವಿದೆ, ನಿಮ್ಮ ಮೇಲಿರುವ ಆರೋಪಗಳಿಗೆ ಮೊದಲು ಉತ್ತರ ನೀಡಿ ಎಂದು ಖಾರವಾಗಿ ತಿರುಗೇಟು ನೀಡಿದ್ದಾರೆ.