ಗೋಲ್ಡನ್ ಪಾಮ್ಸ್ ರೆಸಾರ್ಟಲ್ಲಿ ಬಿಜೆಪಿ ಶಾಸಕಾಂಗ ಸಭೆ

ಪಕ್ಷ ನಿಷ್ಠ ಶಾಸಕರ ಅತೃಪ್ತಿಯಿಂದ ಕಂಗೆಟ್ಟಿರುವ ಬಿಜೆಪಿ ವರಿಷ್ಠರು, ಸಮಸ್ಯೆ ಪರಿಹಾರಕ್ಕಾಗಿ ರೆಸಾರ್ಟ್ ಕಡೆ ಮುಖ ಮಾಡಿದ್ದು, ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಇಂದಿನ ಶಾಸಕಾಂಗ ಸಭೆ ಕರೆಯಲಾಗಿದೆ. ಇತ್ತೀಚೆಗೆ ನಡೆದ ಸ್ಪೀಕರ್ ಚುನಾವಣೆಯಲ್ಲಿ ಒಗ್ಗಟ್ಟು ಕಾಯ್ದುಕೊಂಡಿದ್ದ ಬಿಜೆಪಿ, ಭಿನ್ನಮತೀಯ ಶಾಸಕರ ಒತ್ತಾಯದ ಮೇರೆಗೆ ಇಂದಿನ ಸಭೆ ಕರೆದಿದೆ. ಆದರೆ, ಭಿನ್ನರು ಹತ್ತು ಸಚಿವರ ತಲೆದಂಡಕ್ಕೆ ಪಟ್ಟು ಹಿಡಿಯಲು ಮುಂದಾಗಿದ್ದಾರೆ ಎನ್ನಲಾಗಿದೆ. ಈ ಸಭೆಯಲ್ಲಿ ಈ ಬಗ್ಗೆ ತುರುಸಿನ ಚರ್ಚೆ ನಡೆಯುವುದು ಖಚಿತವಾಗಿದೆ.
ಮುಖ್ಯಮಂತ್ರಿ ಯಡಿಯೂರಪ್ಪ ನೇತೃತ್ವದಲ್ಲಿ ಸಭೆ ಆರಂಭವಾಗಿದ್ದು, ಎಲ್ಲ ಶಾಸಕರ ಅಹವಾಲು ಸ್ವೀಕರಿಸುವ ಸಾಧ್ಯತೆ ಇದೆ. ಮಂಗಳವಾರವೂ ಸಭೆ ಮುಂದುವರಿಯುವುದಾಗಿ ಬಿಜೆಪಿ ಮೂಲಗಳು ತಿಳಿಸಿವೆ. ಪಕ್ಷದ ರಾಜ್ಯಾಧ್ಯಕ್ಷ ಡಿವಿ ಸದಾನಂದಗೌಡ, ಹಿರಿಯ ನಾಯಕ ವೆಂಕಯ್ಯ ನಾಯ್ಡು, ಎಲ್ಲ ಸಚಿವರು, ಶಾಸಕರು, ವಿಧಾನ ಪರಿಷತ್ ಸದಸ್ಯರು, ಸಂಸದರಿಗೆ ಆಹ್ವಾನ ನೀಡಲಾಗಿದೆ.











Click it and Unblock the Notifications