ಅರುಣ ಶಾನಭಾಗಳಿಗೆ ದಯಾಮರಣ ನೀಡಬೇಕಾ?
ಮೂವತ್ತಾರು ವರ್ಷದ ಹಿಂದೆ ಅರುಣ ಎಂಬಾಕೆ ಮುಂಬೈನ ಒಂದು ಸರಕಾರಿ ಆಸ್ಪತ್ರೆಯಲ್ಲಿ ದಾದಿಯಾಗಿ ಕೆಲಸ ಮಾಡುತ್ತಿದ್ದರು. ಒಂದು ದಿನ ಅದೇ ಆಸ್ಪತ್ರೆಯಲ್ಲಿ ಉದ್ಯೋಗಿಯಾಗಿದ್ದ ಒಬ್ಬ ಕಸಗುಡಿಸುವವ ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದ. ಆ ಕ್ಷಣದಿಂದ ಅರುಣಳ ಬದುಕೇ ಬದಲಾಯಿತು. ಆವತ್ತಿನಿಂದ ಇವತ್ತಿನವರೆವಿಗೂ ಆಕೆ ಅದೇ ಆಸ್ಪತ್ರೆಯಲ್ಲಿ ಬದುಕಿಲ್ಲ, ಸಾವಿಲ್ಲ ಎಂಬಂತಹ ಸ್ಥಿತಿಯಲ್ಲಿ ರೋಗಿಯಾಗಿ ಜೀವಚ್ಛವವಾಗಿದ್ದಾಳೆ.
ಅರುಣಳಿಗೆ ಮಾತನಾಡುವುದಕ್ಕೆ ಬರುತ್ತಿಲ್ಲ. ಕಣ್ಣು ಕಾಣಿಸುವುದಿಲ್ಲ, ಕಿವಿ ಕೇಳಿಸುವುದಿಲ್ಲ. ಆಕೆಗೆ ವೈದ್ಯರು ಬಲವಂತವಾಗಿ ಪ್ರತಿದಿನ ಏನಾದರೂ ತಿನ್ನಿಸಬೇಕು. ವೈದ್ಯರ ಪ್ರಕಾರ ಆಕೆಯ ಮಿದುಳು ಸತ್ತುಹೋಗಿದೆ. ಚೇತರಿಸಿಕೊಳ್ಳುವ ಯಾವ ಲಕ್ಷಣಗಳೂ ಇಲ್ಲ.
ಈ ಮಧ್ಯೆ ಪಿಂಕಿ ವಿಕ್ರಾನಿ ಎಂಬ ಸಾಮಾಜಿಕ ಕಾರ್ಯಕರ್ತೆ ಸರ್ವೋಚ್ಚ ನ್ಯಾಯಾಲಯವನ್ನು ಸಂಪರ್ಕಿಸಿ ಅರುಣಳನ್ನು ಬಲವಂತದಿಂದ ಜೀವಂತವಾಗಿಡುವ ಪ್ರಯತ್ನವನ್ನು ಕೈಬಿಡಬೇಕೆಂದು ಕೇಳಿಕೊಂಡಿದ್ದಾರೆ. ಅವಳಿಗೆ ಆಹಾರ ಕೊಡಕೂಡದು ಎನ್ನುವುದು ಪಿಂಕಿಯ ಮನವಿ. ಆಹಾರ ಕೊಡುವುದನ್ನು ನಿಲ್ಲಿಸಿದ ಕ್ಷಣ ಅರುಣ ಸತ್ತೇ ಹೋಗುತ್ತಾಳೆ ಎಂದು ವೈದ್ಯರು ಹೇಳುತ್ತಾರೆ. 60 ವರ್ಷ ವಯಸ್ಸಿನ ಅರುಣಳಿಗೆ ಯಾರೂ ದಿಕ್ಕಿಲ್ಲ. ಅವರ ಕುಟುಂಬದವರು ಎನಿಸಿಕೊಂಡವರು ಅವಳನ್ನು ಕೈಬಿಟ್ಟು ವರ್ಷಗಳೇ ಉರುಳಿವೆ.
ರಾಜಕೀಯ ಮತ್ತು ಧಾರ್ಮಿಕ ಉದ್ದೇಶದ ಉಪವಾಸಕ್ಕೆ ಅನುಮತಿ ಕೊಡಬಹುದು. ಆದರೆ, ಬದುಕಿದ್ದೂ ಸತ್ತಂತಿರುವ ಅರುಣಳಂಥವರಿಗೆ ಇಂಥ ಉಪವಾಸದ ಜೀವನ ಅಗತ್ಯವಿಲ್ಲ ಎನ್ನುವುದು ಪಿಂಕಿ ವಿಕ್ರಾನಿ ಅವರ ವಾದ. ಅಂದರೆ, ದಯಾಮರಣ ಇಲ್ಲಿ ಅನ್ವಯವಾಗಬೇಕಾ? ಅಥವಾ, ಬದುಕಿರಲಿ ಎಂಬ ಏಕೈಕ ಉದ್ದೇಶದಿಂದ ಅವಳಿಗೆ ಆಹಾರ ತುರುಕಿ ಜೀವಂತ ಇಡಬೇಕಾ ಎನ್ನುವುದು ಪ್ರಶ್ನೆ.
ನಿಮ್ಮ ಅಭಿಪ್ರಾಯವನ್ನು ಈ ಜನಾಭಿಪ್ರಾಯ ಮತಗಟ್ಟೆಯಲ್ಲಿ ದಾಖಲಿಸಿ.