ತರೀಕೆರೆ ಬಳಿ ರಸ್ತೆ ಅಪಘಾತ, ಐವರ ದುರ್ಮರಣ

ಘಟನೆಯ ವಿವರ : ಬೆಂಗಳೂರಿನಿಂದ ಶಿವಮೊಗ್ಗಕ್ಕೆ ಬರುತ್ತಿದ್ದ ಮಾರುತಿ ಒಮ್ನಿ ಕಾರಿಗೆ ಶಿವಮೊಗ್ಗದಿಂದ ಬೆಂಗಳೂರಿಗೆ ತೆರಳುತ್ತಿದ್ದ ರಾಜ್ಯ ರಸ್ತೆ ಸಾರಿಗೆ ಬಸ್ಸು ಬೆಳಗ್ಗೆ 7 ಗಂಟೆ ಸುಮಾರಿಗೆ ಡಿಕ್ಕಿ ಹೊಡೆದಿದೆ. ಅಪಘಾತದ ತೀವ್ರತೆಗೆ ಮಾರುತಿ ಆಮ್ಮಿ ಸಂಪೂರ್ಣ ನುಜ್ಜು ಗುಜ್ಜಾಗಿದ್ದು, ನಾಲ್ವರು ಸ್ಥಳದಲ್ಲೇ ಮೃತಪಟ್ಟು ಒಬ್ಬರು ತರೀಕೆರೆಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
ಅಪಘಾತದಲ್ಲಿ ಮೃತಪಟ್ಟವರನ್ನು ರಾಮಚಂದ್ರ(35), ಸುಧಾಭಾಯಿ(62), ತಾರಾಭಾಯಿ (70), ಗೀತಾಬಾಯಿ(65) ಮತ್ತು ಶಶಿಕಲಾ (35) ಎಂದು ಗುರುತಿಸಲಾಗಿದೆ. ಬೆಂಗಳೂರಿನ ಅಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಸುಧಾಬಾಯಿಯವರನ್ನು ಸಂಬಂಧಿಕರ ಮದುವೆಗೆಂದು ಮಾರುತಿ ಆಮ್ನಿಕಾರಿನಲ್ಲಿ ಶಿವಮೊಗ್ಗಕ್ಕೆ ಕರೆತರುತ್ತಿದ್ದಾಗ ಈ ಅಪಘಾತ ಸಂಭವಿಸಿದೆ. ಮೃತ ರಾಮಚಂದ್ರ ಅವರ ಮಗ ಅನೂಪ್ (2.5) ಮತ್ತು ಅವರ ಸಂಬಂಧಿ ರಘುನಾಥ (30) ಪವಾಡಸದೃಶ ರೀತಿಯಲ್ಲಿ ಸಣ್ಣ-ಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ.
ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಡಿ.ವೈ.ಎಸ್.ಪಿ. ಮಲ್ಲಿಕಾರ್ಜುನ್ ಮತ್ತು ಪಿ.ಎಸ್.ಐ ನಾಗರಾಜ್ ಗಾಯಾಳುಗಳನ್ನು 108 ಆಂಬುಲನ್ಸ್ ಮೂಲಕ ಆಸ್ಪತ್ರೆಗೆ ಸಾಗಿಸಿದರು. ಸ್ಥಳಕ್ಕೆ ಆಗಮಿಸಿದ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಅಧಿಕಾರಿಗಳು ಮೃತಪಟ್ಟವರಿಗೆ ತಲಾ 15 ಸಾವಿರ ರು. ಪರಿಹಾರವನ್ನು ಮೃತರ ಸಂಬಂಧಿಕರಿಗೆ ನೀಡಿದರು.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications