ತೆಲಂಗಾಣ ವಿರೋಧಿಸಿ 70 ಶಾಸಕರು ರಾಜೀನಾಮೆ

ತೆಲಂಗಾಣ ರಾಷ್ಟ್ರೀಯ ಸಮಿತಿ ಅಧ್ಯಕ್ಷ ಕೆ ಚಂದ್ರಶೇಖರರಾವ್ ನೇತೃತ್ವದಲ್ಲಿ ನಡೆದ 11 ದಿನಗಳ ಅಮರಣಾಂತ ಹೋರಾಟಕ್ಕೆ ಮಣಿದ ಕೇಂದ್ರ ಕೊನೆಗೂ ತೆಲಂಗಾಣ ರಾಜ್ಯಕ್ಕೆ ಒಪ್ಪಿಗೆ ಸೂಚಿಸಿವೆ. ಕೇಂದ್ರದ ನಿರ್ಧಾರ ಹೊರಬೀಳುತ್ತಿದ್ದಂತೆಯೇ ಇತ್ತ ಹೈದರಾಬಾದ್ ನಲ್ಲಿ ಕಾಂಗ್ರೆಸ್ 39, ತೆಲುಗು ದೇಶಂ 38, ಪ್ರಜಾರಾಜ್ಯಂ 13 ಶಾಸಕರು ಸಾಮೂಹಿಕ ರಾಜೀನಾಮೆ ನೀಡುವ ಮೂಲಕ ಪ್ರತ್ಯೇಕ ರಾಜ್ಯದ ನಿರ್ಧಾರದಿಂದ ಹಿಂದೆ ಸರಿಯಬೇಕು ಎಂಬ ಒತ್ತಡ ಹೇರುತ್ತಿದ್ದಾರೆ. ಮುಖ್ಯವಾಗಿ ಕರಾವಳಿ ಆಂಧ್ರ, ರಾಯಲುಸೀಮೆ ಶಾಸಕರು ಆಂಧ್ರಪ್ರದೇಶ ಇಬ್ಭಾಗವಾಗುವುದನ್ನು ತೀವ್ರವಾಗಿ ವಿರೋಧಿಸುತ್ತಿದ್ದಾರೆ.
ಪರಿಸ್ಥಿತಿ ಅರಿತಿರುವ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಕಾಂಗ್ರೆಸ್ ಸಂಸದರು ನವದೆಹಲಿಗೆ ಆಗಮಿಸುವಂತೆ ಸೂಚನೆ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ. ಟಿಡಿಪಿ ಮುಖಂಡ ಚಂದ್ರಬಾಬು ನಾಯ್ಡು ಕೇಂದ್ರದ ನಿರ್ಧಾರಕ್ಕೆ ವಿರೋಧಿಸಿದ್ದು, ನೂತನ ರಾಜ್ಯಕ್ಕೆ ವಿಧಾನಸಭೆಯಲ್ಲಿ ಮಂಡಿಸುವ ನಿಲುವಳಿಯನ್ನು ವಿರೋಧಿಸುವುದಾಗಿ ಹೇಳಿದ್ದಾರೆ. ಅತ್ತ ತೆಲಂಗಾಣ ರಾಜ್ಯ ಘೋಷಣೆ ಮಾಡುವುದಾಗಿ ಕೇಂದ್ರ ಹೇಳುತ್ತಿದ್ದಂತೆಯೇ ಆ ಪ್ರದೇಶದ 10 ಜಿಲ್ಲೆಗಳಲ್ಲಿ ಹಬ್ಬ ವಾತಾವರಣ ಮನೆ ಮಾಡಿದೆ.
(ಏಜನ್ಸೀಸ್)












Click it and Unblock the Notifications